ಜಲಮೂಲ ಸಂರಕ್ಷಣೆಗೆ ನ್ಯಾಯಾಧೀಶರ ಕರೆ

ವಿಜಯಪುರ, ಮಾ 22- ಸ್ಮಾರಕಗಳ ನಗರವಾದ ವಿಜಯಪುರದಲ್ಲಿರುವ ತಾಜಬಾವಡಿ ಸೇರಿ ಅನೇಕ ಕೆರೆಗಳಿವೆ, ಈ ಕೆರೆಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಬಳಕೆಯಾಗುವಂತೆ ಮಾಡುವ ಕರ್ತವ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ ಹೇಳಿದರು.

ವಿಜಯಪುರ ನಗರದ ಕಾಕಾ ಕಾರ್ಖಾನೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ, ಸ್ಪಂದನಾ ಸ್ವಯಂಸೇವಾ ಸಂಸ್ಥೆ ಮತ್ತು ಜೈನ್ ಇರಿಗೇಶನ್ ಸಿಸ್ಟಮ್ ಲಿಮಿಟೆಡ್ ಇವರ ಸಹಯೋಗದಲ್ಲಿ ಸೋಮವಾರ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಂದಿನ ಪೀಳಿಗೆಗೆ ನಾವು ಗಿಡಗಳನ್ನು ನೆಡುವುದರ ಮೂಲಕ ಶುದ್ಧವಾದ ಗಾಳಿ ಶುದ್ಧವಾದ ನೀರು ಮತ್ತು ಉತ್ತಮ ಪರಿಸರವನ್ನು ನಿರ್ಮಾಣ ಮಾಡಿ ಕೊಡುಗೆಯಾಗಿ ನೀಡಬೇಕು ಎಂದು ಹೇಳಿದರು.
ಜೂನ 5 ರಂದು ಎಲ್ಲ ಇಲಾಖೆಗಳು ಸೇರಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗ ಕಾರ್ಯಪಾಲಕ ಅಭಿಯಂತರ ಎಸ್. ಎಸ್. ಪಟ್ಟಣಶೆಟ್ಟಿ ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲಿ ನಾಗರಿಕರಿಗೆ ನೀರಿನ ಬಗ್ಗೆ ಅರಿವನ್ನು ಮೂಡಿಸುವುದು. ನೀರು ಅಮೂಲ್ಯವಾದದ್ದು ಹಿತಮಿತವಾಗಿ ಬಳಸಿ, ಪುನರ್ ಬಳಕೆ ಮಾಡುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.

ಸಮೂಹ ಮಾಧ್ಯಮದವರು ನೀರಿನ ಬಗ್ಗೆ ಕಾರ್ಯಕ್ರಮಗಳನ್ನು ಮತ್ತು ಪ್ರಚಾರ ಮಾಡುವುದರ ಮೂಲಕ ಸಾರ್ವಜನಿರಲ್ಲಿ ನೀರಿನ ಬಗ್ಗೆ ಅರಿವು ಮೂಡಿಸುವಲ್ಲಿ ತಮಗೆ ಕೈಜೋಡಿಸಬೇಕೆಂದು ಮಾಧ್ಯಮದವರಿಗೆ ಅವರು ಹೇಳಿದರು.

ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ಸಹ ಸಂಶೋಧನಾ ನಿರ್ದೇಶಕ ಅಶೋಕ ಎಸ್. ಸಜ್ಜನ್ ಮಾತನಾಡಿ ಉಸಿರು ಬಂದಾಗಿನಿಂದ ಉಸಿರು ಹೋಗುವವರೆಗೂ ನೀರು ಅವಶ್ಯಕವಿದೆ. ನಾವೆಲ್ಲರೂ ನೀರಿನ ಬಗ್ಗೆ ಲಕ್ಷ ವಹಿಸಿದರೆ ನಮ್ಮ ಮುಂದಿನ ಪೀಳಿಗೆಗೆ ನೀರು ದೊರೆಯುತ್ತದೆ. ನಿರ್ಲಕ್ಷಿಸಿದರೆ ನೀರಿನ ಸಮಸ್ಯೆಯನ್ನು ಎದುರಿಸಬೇಕಾಗುವುದು ಎಂದು ಹೇಳಿದರು.

ರೈತರು ಭೂಮಿಗೆ ನೀರು ಹೆಚ್ಚು ಬಿಡುವುದರಿಂದ ಭೂಮಿ ಸವಳು ಆಗುತ್ತದೆ ಮತ್ತು ಫಲವತ್ತತೆ ಕಳೆದುಕೊಳ್ಳುತ್ತದೆ ಆದ್ದರಿಂದ ನೀರನ್ನು ಮಿತವಾಗಿ ಬಳಸಿ ಎಂದು ಅವರು ರೈತರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗ ಸಿಕ್ಯಾಬ್ ಕಾಲೇಜು ಮುಖ್ಯಸ್ಥ ಎಸ್. ಜೆ. ಅರವೇಕರ್. ಬಿ ಎಲ್ ಡಿ ಇ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಅನುರಾಧ ಎಸ್. ಟಂಕಸಾಲಿ ಮತ್ತು ಮಹಾನಗರ ಪಾಲಿಕೆ ವಕೀಲರು ಮತ್ತು ಕಾನೂನು ಸಲಹೆಗಾರ ಐ.ಎಮ್.ಇಂಡಿಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಉಮೇಶ್ ಪಂಚಾಳ ಮತ್ತು ರಾಹುಲ್ ಪಂಚಾಳ ಪ್ರಾರ್ಥಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ. ವಾಯ್. ನದಾಫ್ ನಿರೂಪಿಸಿದರು. ಸ್ಪಂದನ ಎಜೆನ್ಸಿ ಎಮ.ಎಸ್. ದೇವರ ಸ್ವಾಗತಿಸಿ ವಂದಿಸಿದರು.

Leave a Reply

ಹೊಸ ಪೋಸ್ಟ್‌