ಬಾಬು ಜಗಜೀವನರಾಮ ಅವರ ಕ್ರಾಂತಿಕಾರಿ ಹೆಜ್ಜೆಗಳು ಇಂದಿನ ಯುವ ಪೀಳಿಗೆಗೆ ಮಾದರಿ- ಪ್ರೊ. ಶರದ ದೇಶಪಾಂಡೆ

ಬಸವ ನಾಡು


ವಿಜಯಪುರ- ಬಾಬು ಜಗಜೀವನರಾಮ ಅವರ ಕ್ರಾಂತಿಕಾರಿ ಹೆಜ್ಜೆಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ’ ಎಂದು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಪ್ರೊ. ಶರದ ದೇಶಪಾಂಡೆ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಘಟಕದ ಸಹಯೋಗದಲ್ಲಿ ಡಾ. ಬಾಬು ಜಗಜೀವನರಾಮ ಅವರ 113ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಬು ಜಗಜೀವನರಾಮ ಅವರು ಕೃಷಿ ಮಂತ್ರಿಯಾಗಿದ್ದಾಗ ತೆಗೆದುಕೊಂಡ ನಿರ್ಣಯಗಳು, ಜಾರಿಗೆ ತಂದ ಯೋಜನೆಗಳು ರೈತರಿಗಕೆ ಅನುಕೂಲವಾಗಿದ್ದವು. ಕೃಷಿಯ ಜೊತೆಗೆ ನೀರಾವರಿ ಕ್ಷೇತ್ರದಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ರೈತರಿಗೆ ಬೆನ್ನೆಲುಬಾಗಿ ನಿಂತ ಅವರು ರಾಷ್ಟ್ರದ ಅಭಿವೃದ್ಧಿಗೆ ಸಲ್ಲಿಸಿದ ಕೊಡುಗೆ ಅಪಾರ ಎಂದು ಅವರು ತಿಳಿಸಿದರು.
ನಾವೆಲ್ಲರೂ ಜೀವಿಸಬೇಕಾದರೆ ಕೃಷಿಯ ಮೇಲೆಯೇ ಅವಲಂಬಿತರಾಗಬೇಕು. ಆದ್ದರಿಂದ ನಾವು ರೈತರಿಗೆ ಮತ್ತು ರೈತ ಬೆಳೆದ ಬೆಳೆಗಳಿಗೆ ಬೆಲೆ ಕೊಡಬೇಕು. ಅಂದಾಗ ಮಾತ್ರ ಬಾಬುಜಿ ಅವರ ಸುಸ್ಥಿರ ಕೃಷಿ ಅಭಿವೃದ್ಧಿಯ ವಿಚಾರಧಾರೆಗಳಿಗೆ ನಿಜವಾದ ಮಹತ್ವ ದೊರಕಿದಂತಾಗುತ್ತದೆ’ ಎಂದು ಅವರು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಗೊಟಗೊಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅರುಣ ಜೋಳದ ಕೂಡ್ಲಿಗಿ ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹೀಗೆ ಪ್ರತಿ ಹಂತದಲ್ಲಿಯೂ ಶೋಷಣೆಗೆ ಒಳಗಾದ ದಮನಿತ ಜನರ ಪ್ರತಿನಿಧಿಯಾಗಿ ಬಾಬು ಜಗಜೀವನರಾಮ ಅವರು ಸಮಾನತೆಗಾಗಿ ಹೋರಾಡಿದವರು. ಅವರ ನಡೆ, ನುಡಿಗಳು ಇಂದಿಗೂ ಎಲ್ಲರಿಗೂ ಮಾದರಿಯಾಗಿವೆ. ಆರ್ಥಿಕ ಸಮಾನತೆಗೆ ಒತ್ತು ನೀಡಿದ ಅವರು, ರಾಜಕೀಯ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಅವರು ತಿಳಿಸಿದರು.
ಬಾಬುಜಿ ಅವರು ದುಡಿಯುವ ವರ್ಗದ ಜನರ ಭದ್ರತೆ, ಸಾಮಾಜಿಕ ವಿಮೆ, ಕನಿಷ್ಠ ಕೂಲಿ ಕಾಯ್ದೆ, ಭವಿಷ್ಯ ನಿಧಿ, ವಿಮಾನಯಾನದ ರಾಷ್ಟ್ರೀಕರಣ, ಕೃಷಿಯ ಸ್ವಾವಲಂಬನೆ, ನೀರಾವರಿಗೆ ಪ್ರಾಶಸ್ತ್ಯ ಹೀಗೆ ನಾನಾ ಯೋಜನೆಗಳನ್ನು ಜಾರಿಗೆ ತಂದು ನಮ್ಮ ದೇಶದ ಆರ್ಥಿಕ ಸುಧಾರಣೆಗೆ, ಅಭಿವೃದ್ಧಿಗೆ ಯಾವುದೇ ಸ್ವಾರ್ಥವಿಲ್ಲದೆ ಕೊ ಡುಗೆ ಸ್ವಾರ್ಥವಿಲ್ಲದೇ ಕೊಡುಗೆ ನೀಡಿದ್ದಾರೆಯ ಅವರ ವಿಚಾರಗಳನ್ನು ನಾವೆಲ್ಲರೂ ನಮ್ಮ ಜೀವನದಸಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಅವರ ಸಮ ಸಮಾಜದ ಆಶಯಗಳನ್ನು ಕಾರ್ಯರೂಪಕ್ಕೆ ತರಲು ಸಹಾಯವಾಗುತ್ತದೆ’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ. ಆರ್. ಸುನಂದಮ್ಮ ಮಾತನಾಡಿ, ತುಂಬಾ ಜಾಗರೂಕವಾಗಿ, ಜಾಣತನದ ಹೆಜ್ಜೆ ಇಟ್ಟ ಭಾರತದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ ಬಾಬುಜಿ ಅವರು, ಸಮಾನತೆ, ಸ್ವಾತಂತ್ರ್ಯ, ನ್ಯಾಯ ಇವುಗಳ ಬಗ್ಗೆ ದನಿ ಎತ್ತಿದ್ದರು. ಅವರ ಆದರ್ಶಗಳ ಬಗ್ಗೆ ಇಂದಿನ ಯುವ ಪೀಳಿಗೆ ಅರಿತು ಕೊಳ್ಳಬೇಕಾಗಿದೆ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ವಿಶ್ವವಿದ್ಯಾಲದ ನಾನಾ ನಿಕಾಯಗಳ ಡೀನರು, ನಾನಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಮಹಿಳಾ ವಿವಿಯ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಬುದ್ಧ ವಂದನೆ ಮಾಡಿದರು.ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡಘಟಕದ ನಿರ್ದೇಶಕಿಡಾ.ಅನೀತಾ ನಾಟೆಕರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.ಡಾ.ಬಿ.ಆರ್.ಅಂಬೇಡ್ಕರ್‍ಅಧ್ಯಯನಕೇಂದ್ರದ ಸಹಾಯಕ ನಿರ್ದೇಶಕಡಾ.ಸುರೇಶ್.ಕೆ.ಪಿ.ಅತಿಥಿಗಳನ್ನು ಪರಿಚಯಿಸಿದರು..,ಡಾ.ಬಿ.ಆರ್.ಅಂಬೇಡ್ಕರ್‍ಅಧ್ಯಯನಕೇಂದ್ರದ ನಿರ್ದೇಶಕಡಾ.ವೆಂಕೋಬ ನಾರಾಯಣಪ್ಪ ವಂದಿಸಿದರು. ಡಾ.ವಿಷ್ಣು.ಎಂ.ಶಿಂದೆ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌