ಅಭಿವೃದ್ಧಿಗೆ ಗ್ರಾ. ಪಂ. ಸದಸ್ಯರು, ಪಿಡಿಓಗಳು ಶ್ರಮಿಸಲು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಕರೆ

ಬಸವ ನಾಡು

ವಿಜಯಪುರ- ಗ್ರಾ. ಪಂ. ಸದಸ್ಯರು ಮತ್ತು ಪಿಡಿಓಗಳು ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕು. ಈ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ಕರೆ ನೀಡಿದ್ದಾರೆ.
ವಿಜಯಪುರ ನಗರದ ಶ್ರೀ ಸಂಗನ ಬಸವ ಕಲ್ಯಾಣ ಮಂಟಪದಲ್ಲಿ ನಡೆದ ವಿಜಯಪುರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನೆ ಸಭೆ, ಅಹವಾಲು ಸ್ವೀಕಾರ ಮತ್ತು ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನರೇಗಾ, ಜಲಜೀವನ್ ಮಿಷನ್, ವಸತಿ ಯೋಜನೆ, ಸ್ವಚ್ಛ ಭಾರತ್ ಮಿಷನ್ ಸೇರಿದಂತೆ ಹಲವು ಯೋಜನೆಗಳಿದ್ದು, ಅವುಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು. ಪಿಡಿಓ ಮತ್ತು ಸದಸ್ಯರು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಬೇಕು. ರೂ. 2 ಕೋ. ಅನುದಾನದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ದೊರೆಯಬಹುದಾದ ನೆರವು ನೀಡಲು ತಾವು ಸಿದ್ಧರಿದ್ದು, ಎಲ್ಲರ ಅಹವಾಲುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬಿ. ಎಸ್. ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರದಿಂದ ಗ್ರಾಮ ಪಂಚಾಯಿತಿ ಹಂತದಲ್ಲಿ ನಾನಾ ಯೋಜನೆಗಳು ಅನುಷ್ಠಾನಗೊಳ್ಳುವ ಬಗೆಯನ್ನು ಅವರು ವಿವರಿಸಿದರು.
ವಿಜಯಪುರ ತಾಲೂಕಿನ 17 ಗ್ರಾಮ ಪಂಚಾಯಿತಿಗಳ 267 ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಿಡಿಓ ಗಳಾದ ಪಿ. ಡಿ. ನಿಲೇಕಣಿ, ಜಯಶ್ರೀ ಪವಾರ, ಜಾಫರ ಕಲಾದಗಿ, ಎಸ್. ಐ. ಗದ್ದಗಿಮಠ, ರಾಜಶೇಖರ ಬಿರಾದಾರ, ರಾಜೇಶ ಗಾಯಕವಾಡ, ಮಹಾಂತಮ್ಮ ಬಿರಾದಾರ, ವಿ. ಸಿ. ಮೇತ್ರಿ, ಎಂ. ವಿ. ಘಂಟಿ, ಎ. ಎಸ್. ಲೋಣಾರಮಠ, ಆಯೇಷಾ ಸಾಲೋಟಗಿ, ಆರ್. ಎನ್. ಬಿರಾದಾರ ಸೇರಿದಂತೆ ವಿಜಯಪುರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ರಜನಿಕಾಂತ ನಿಂಬಾಳಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

ಹೊಸ ಪೋಸ್ಟ್‌