ಕೊರೊನಾ 2ನೇ ಅಲೆ ಹೆಚ್ಚಳ ಹಿನ್ನೆಲೆ ಮದುವೆ, ಗ್ರಂಥಾಲಯ, ಅಂಗಡಿ ಮುಂಗಟ್ಟುಗಳ ವ್ಯಾಪ್ತಿಯಲ್ಲಿ ಮುಂಜಾಗ್ರತೆ ಕೈಗೊಳ್ಳಿ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ಬಸವ ನಾಡು

ವಿಜಯಪುರ- ಕೊರೊನಾ 2ನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಗೃತಗೊಳ್ಳುವ ಜೊತೆಗೆ ಹೆಚ್ಚಿನ ಜನ ಸೇರುವಂಥ ಕಲ್ಯಾಣ ಮಂಟಪ, ಅಂಗಡಿ ಮುಂಗಟ್ಟುಗಳು ಮತ್ತು ಗ್ರಂಥಾಲಯಗಳ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದ್ದಾರೆ.
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಾನಾ ಕಲ್ಯಾಣ ಮಂಟಪ, ಸಾರ್ವಜನಿಕ ಗ್ರಂಥಾಲಯ ಅಧಿಕಾರಿಗಳು ಮತ್ತು ನಾನಾ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿದ ಅವರು, ಕೊರೊನಾ 2ನೇ ಅಲೆ ಹೆಚ್ಚಾಗುತ್ತಿದ್ದು, ಈ ಕುರಿತು ಈಗಿನಿಂದಲೇ ಎಚ್ಚರಿಕೆ ವಹಿಸುವ ಅಗತ್ಯವಿದೆ. ಈ ಕುರಿತು ಗಂಭೀರ ಪರಿಸ್ಥಿತಿಯನ್ನು ಅರಿತು ಸಮಾಲೋಚನಾ ಸಭೆ ಕರೆಯಲಾಗಿದ್ದು, ತಮ್ಮ ಆರ್ಥಿಕ ಚಟುವಟಿಕೆ, ದಿನನಿತ್ಯದ ಜೀವನೋಪಾಯ, ಉದ್ಯೋಗದ ಜೊತೆಗೆ ಸರಕಾರ ನೀಡಿದ ಕೊರೊನಾ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಕೊರೊನಾ ನಿಯಮ ಪಾಲಿಸದವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಸಹ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಎಲ್ಲ ವ್ಯಾಪಾರಸ್ಥರು ತಪ್ಪದೇ ಕೊರೊನಾ ನಿಯಂತ್ರಣ ನಿಯಮಗಳನ್ನು ಪಾಲಿಸಬೇಕು. ಪ್ರತಿ ಅಂಗಡಿ ಮುಂಗಟ್ಟುಗಳಲ್ಲಿ, ಕಲ್ಯಾಣ ಮಂಟಪಗಳಲ್ಲಿ ಹಾಗೂ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರವನ್ನು ಕಾಪಾಡಬೇಕು. ಸ್ಯಾನಿಟೈಜರ್, ಹ್ಯಾಂಡ್‍ಗ್ಲೌಸ್ ಬಳಸುವುದು ಸೇರಿದಂತೆ ಸೂಚಿಸಲಾಗಿರುವ ಎಲ್ಲ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.


ಜನರ ಒಳ್ಳೆಯ ಮತ್ತು ಅವರ ಜೀವದ ಹಿತ ದೃಷ್ಟಿಯಿಂದ ಈ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆಯ ಬಗ್ಗೆ ಮಹಾನಗರ ಪಾಲಿಕೆಗೆ ತಪ್ಪದೆ ಮಾಹಿತಿ ಒದಗಿಸಬೇಕು. ಕಲ್ಯಾಣ ಮಂಟಪದೊಳಗೆ ನಿಯಮಾವಳಿಯಂತೆ 200ಕ್ಕೂ ಹೆಚ್ಚು ಜನರು ಸೇರುವಂತಿಲ್ಲ. ಎಸ್‍ಒಪಿ ಪ್ರಕಾರ ನಿಯಮ ಪಾಲಿಸಬೇಕು. ತೆರೆದ ಸ್ಥಳಗಳಲ್ಲಿ 500 ಜನರಿಗೆ ಅವಕಾಶವಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಜರ್ ಬಳಸುವುದು, ಮುಖ್ಯ ದ್ವಾರದಲ್ಲಿ ಕೊರೊನಾ ನಿಯಮಗಳ ಪಾಲನೆ ಬಗ್ಗೆ ತಪ್ಪದೇ ಮಾಹಿತಿ ಅಳವಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಕಾನೂನಿನ ರೀತ್ಯ ದಂಡ ಸಹ ವಿಧಿಸಲಾಗುವುದು ಎಂದು ಪಿ. ಸುನೀಲ ಕುಮಾರ ಸೂಚನೆ ನೀಡಿದರು.
ಕೊರೊನಾ ನಿಯಂತ್ರಣ ನಿಯಮ ಉಲ್ಲಂಘಿಸಿದರೆ ಪ್ರಥಮ ಬಾರಿಗೆ ಎಚ್ಚರಿಕೆ, ಎರಡನೇ ಬಾರಿಗೆ ದಂಡ ಹಾಗೂ ಮೂರನೇ ಬಾರಿಗೆ ಕಠಿಣ ಕ್ರಮಕ್ಕೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಎಚ್ಚರಿಕೆ ನೀಡಿದ ಬಗ್ಗೆ ದಾಖಲೀಕರಣ ಮತ್ತು ಜೀವನೋಪಾಯಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಅಗತ್ಯ ವಸ್ತುಗಳ ಮಾರಾಟದ ಸಂದರ್ಭದಲ್ಲಿ ಯೋಜನಾಬದ್ಧವಾಗಿ ವಸ್ತುಗಳ ಮಾರಾಟ, ಅವಶ್ಯಕ ಮಾರ್ಗಸೂಚಿಗಳ ಪಾಲನೆ ಮತ್ತು ಸಾಧ್ಯವಿದ್ದಲ್ಲಿ ಗ್ರಾಹಕರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವ ಬಗ್ಗೆಯೂ ಚಿಂತನೆ ನಡೆಸಬೇಕು. ಕಲ್ಯಾಣ ಮಂಟಪ, ವ್ಯಾಪಾರಸ್ಥರು ಮತ್ತು ಗ್ರಂಥಾಲಯ ವ್ಯಾಪ್ತಿಯಲ್ಲಿ ಸರಕಾರ ನೀಡಿದ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ತಿಳಿಸಿದರು.
ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆ ಸಮಾರಂಭ ಸೇರಿದಂತೆ ಇನ್ನೀತರ ಕಡೆಗಳಲ್ಲಿ ಸೂಕ್ತ ನಿಗಾ ಇಡಲು ನಗರ ಸ್ಥಳೀಯ ವ್ಯಾಪ್ತಿಯಲ್ಲಿ ಆಯಾ ಮುಖ್ಯಾಧಿಕಾರಿಗಳು ಮತ್ತು ಜಿಲ್ಲಾ ಕೇಂದ್ರದಲ್ಲಿ ಮಹಾನಗರ ಪಾಲಿಕೆ ಆಯುಕ್ತರು, ಉಪವಿಭಾಗಾಧಿಕಾರಿಗಳು ಮತ್ತು ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗುವುದು. ತಾಲೂಕಾ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳ, ತಹಶೀಲ್ದಾರರು ಮತ್ತು ತಾ. ಪಂ. ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ತಹಶೀಲ್ದಾರಗಳ ಮೂಲಕ ನಿಗಾ ಇಡಲಾಗುವುದು. ಅವರು ಯಾವುದೇ ಪರಿಸ್ಥಿತಿಯಲ್ಲಿ ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಸರಕಾರದ ಮಾರ್ಚ್ 24 ರ ಅಧಿಸೂಚನೆಯಂತೆ ನಾನಾ ಸಾರ್ವಜನಿಕ ಸಭೆ ಸಮಾರಂಭ ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕೊರೊನಾ ನಿಯಮ ಪಾಲಿಸುವ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ. ಮಾಸ್ಕ್ ಧರಿಸದೆ ಇರುವ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೂ. 250, ಇತರ ಪ್ರದೇಶಗಳಲ್ಲಿ ರೂ. 100 ದಂಡ ವಿಧಿಸಲಾಗುತ್ತಿದೆ. ಅದರಂತೆ ಮಂಗಲ ಕಾರ್ಯಾಲಯ ಮತ್ತು ಇತರೆ ಕಾರ್ಯಕ್ರಮಗಳ ಸಂದರ್ಭದಲ್ಲಿ ನಿಯಮ ಪಾಲಿಸದೆ ಇದ್ದ ಸಂದರ್ಭದಲ್ಲಿ ರೂ. 5000 ದಿಂದ ರೂ. 10000 ವರೆಗೆ ದಂಡ ವಿಧಿಸಲು ಅವಕಾಶವಿದೆ. ಇನ್ನು ಮುಂದೆ ವ್ಯಾಪಾರ ನಡೆಸುವ ಅಂಗಡಿ ಮುಂಗಟ್ಟುಗಳ ಮುಂದೆ ಸಾಮಾಜಿಕ ಅಂತರಕ್ಕಾಗಿ ಬಾಕ್ಸ್ ಮಾರ್ಕ್ ಹಾಕಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮಾಸ್ಕ್ ಧರಿಸದೇ ಇರುವವರನ್ನು ಕಡ್ಡಾಯವಾಗಿ ಮಾಸ್ಕ್ ಧರಿಸಲು ತಿಳಿ ಹೇಳಬೇಕು. ಕೊರೊನಾ ಮಾರ್ಗಸೂಚಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಅಂಟಿಸಿರಬೇಕು. ಹ್ಯಾಂಡ್‍ಗ್ಲೌಸ್, ಫೇಸ್‍ಶೀಲ್ಡ್ ಹಾಕಿಕೊಳ್ಳಬೇಕು. ಪ್ರತಿ ಶಾಪಿಂಗ್ ಕಾಂಪ್ಲೇಕ್ಸ್‍ಗಳಲ್ಲಿ ನಿಯಮ ಪಾಲಿಸಬೇಕು. ನಾಳೆ ಸಂಜೆಯೊಳಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಯಾವುದೇ ಸಂದರ್ಭದಲ್ಲಿ ಕಾನೂನು ಉಲ್ಲಂಘನೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಮಾತನಾಡಿ, ವಿಜಯಪುರ ನಗರದಲ್ಲಿ ನಡೆಯುವ ಮದುವೆಗಳ ಬಗ್ಗೆ ಮಹಾನಗರ ಪಾಲಿಕೆಗೆ ಮಾಹಿತಿ ನೀಡಬೇಕು. ಎಸ್‍ಒಪಿ ಪ್ರಕಾರ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿ, ಸಾರ್ವಜನಿಕ ಸಭೆ ಸಮಾರಂಭ, ಮದುವೆ ಸಮಾರಂಭ, ಖಾಸಗಿ ಸಮಾರಂಭ, ಅಂತ್ಯ ಸಂಸ್ಕಾರ, ಕೋಚಿಂಗ್ ಕ್ಲಾಸ್ ನಡೆಸುವ ಮತ್ತು ಮಂಗಲ ಕಾರ್ಯಾಲಯ, ಗ್ರಂಥಾಲಯಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

Leave a Reply

ಹೊಸ ಪೋಸ್ಟ್‌