ಹುಣಸೆಗಿಡ ಕೋರ್ಟ್ ನಿಂದ ಬನ್ನಿಗಿಡ ಕೋರ್ಟ್ ವರೆಗಿನ ತಮ್ಮ ವೃತ್ತಿ ಜೀವನದ ನೆನಪಿನ ಬುತ್ತಿ ಬಿಚ್ಚಿಟ್ಟ ನ್ಯಾಯವಾದಿ ಅರ್ಜುನ ಮಿಸಾಳೆ

ಬಸವ ನಾಡು

ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಗೂ ನ್ಯಾಯಾಂಗ ಇಲಾಖೆಗೂ ಅದರದೇ ಆದ ಇತಿಹಾಸವಿದೆ. ಹಿರಿಯ ನ್ಯಾಯವಾದಿ ಅರ್ಜುನ ಮಿಸಾಳೆ ಅವರು ತಾವು ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಆರಂಭಿಸಿದಾಗಿನಿಂದ ಇಂದಿನವರೆಗಿನ ನ್ಯಾಯಾಲಯಗಳು ಮತ್ತು ಅವುಗಳ ಸ್ಥಳಗಳ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ನ್ಯಾಯವಾದಿ ಅರ್ಜುನ್ ಮಿಸಾಳೆ ಅವರ ಫೇಸ್ ಬುಕ್ ವಾಲ್ ನಿಂದ ಪಡೆಯಲಾದ ಮಾಹಿತಿ ಇಲ್ಲಿದೆ.

https://m.facebook.com/story.php?story_fbid=1142085802903653&id=100013067313581

ವಿಜಯಪುರ ನ್ಯಾಯಾಲಯಗಳು- “ಹುಣಸೆಗಿಡ ಕೋರ್ಟ್” ದಿಂದ “ಬನ್ನಿಗಿಡ ಕೋರ್ಟ್” ವರೆಗೆ ನಡೆದು ಬಂದ ದಾರಿ:
ನಾವು 1986 ರಲ್ಲಿ ವಕೀಲ ವೃತ್ತಿಗೆ ಬಂದಾಗ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಇದ್ದ ಅದಿಲ್ ಶಾಹಿ ಕಾಲದ ಕಟ್ಟಡದಲ್ಲಿ ಮೇಲಿನ ಅಂತಸ್ತಿನಲ್ಲಿ ಎರಡು ಜಿಲ್ಲಾ , ಕೆಳಗೆ ಎರಡು ಸಿವಿಲ್ ಹಾಗೂ ಒಂದು ಮುನ್ ಶೀಪ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದ್ದವು. ಕೆಳಗಿನಿಂದ ಮೇಲೆ ಹೋಗಬೇಕಾದರೆ ಒಂದು ಇಕ್ಕಟ್ಟ ಆದ ದಾರಿ ಇದ್ದು ಒಂದು ಸಲಕ್ಕೆ ಒಬ್ಬರೇ ಹೋಗ ಬಹುದಾಗಿತು. ಹಿರಿಯ ವಕೀಲರಿಗೆ ಒಂದು ಕೋಣೆ ( bar room) ಹಾಗೂ ಕಿರಿಯರಿಗೆ ಒಂದು ಕೋಣೆ ಇದ್ದು ಅದರ ಮೇಲೆ ವಾಚನಾಲಯ ಇತ್ತು. ಆಗ ಕೇವಲ ಒಬ್ಬರೇ ವಕೀಲರ ಹತ್ತಿರ car ಇದ್ದು ಕೆಲವರ ಹತ್ತಿರ ಸ್ಕೂಟರ್, ಮೋಟಾರ್ ಸೈಕಲ್, moped ಇದ್ದವು, ಬಹಳಷ್ಟು ಹಿರಿಯ ವಕೀಲರು ಟಾಂಗಾದಲ್ಲಿ ಬರುವುದು ರೂಢಿಯಲ್ಲಿ ಇತ್ತು. ನಾವೆಲ್ಲ ಕಿರಿಯ ವಕೀಲರು ನಡೆದುಕೊಂಡು ಬರುತ್ತಿದೇವು. JMFC II ನ್ಯಾಯಾಲಯ ಆಗಿನ ಉಪ ವಿಭಾಗಾಧಿಕಾರಿ ಕಚೇರಿ ಪಕ್ಕದಲ್ಲಿ ಇತ್ತು , ಅದನ್ನು “ಹುಣಸೆ ಗಿಡ” ಕೋರ್ಟ್ ಅಂತ ಕೂಡ ಕರೆಯುತ್ತಿದ್ದರು, ಕಾರಣ ಅಲ್ಲಿ ಒಂದು ದೊಡ್ಡ ಹುಣಸೆ ಗಿಡ ಇತ್ತು. ಕಕ್ಷೆದಾರರು ಹುಣಸೆ ಗಿಡದ ಕೆಳಗೆ ಕುಳಿತು ತಮ್ಮ ಪ್ರಕರಣದ ದಾರಿ ಕಾಯುತ್ತಿದ್ದರು. ಪ್ರಕರಣ ಮುಗಿದ ನಂತರ ವಕೀಲರು ಹಾಗೂ ಕಕ್ಷೆದಾರರು ಕೂಡಿ Class IV canteen ದಲ್ಲಿ tea/ನಾಸ್ಟಾಗೆ ಹೋಗುತ್ತಿದ್ದರು, ಅಲ್ಲಿ ಸಿಗುತ್ತಿದ್ದ ಮಕ್ ನ pedha, halwa, bhaji, ಬ್ರೆಡ್ ಉಸಳ,ಬಾಂಬೆ ಚಿವಡಾ, ಗೋಲ್ಡನ್ ಚಹಾ ಅತಿಶಯ ಸ್ವಾದಿಷಟ್ ಕರವಾಗಿರುತ್ತಿದ್ದವು! ನಾವು ಕಿರಿಯ ವಕೀಲರಿಗೆ ಕೆಲ ಒಂದು ಸಲ ಕಕ್ಷೆದಾರರಿಂದ ಸಿಕ್ಕ ನಾಸ್ಟಾ ಚಹಾನೇ ಆವತ್ತಿನ fee!


1992 ರಲ್ಲಿ ಎರಡು ಜಿಲ್ಲಾ ನ್ಯಾಯಾಲಯಗಳು ಬಾಗಲಕೋಟೆ ರಸ್ತೆಯಲ್ಲಿ ನಿರ್ಮಾಣವಾದ ಹೊಸ ಸಂಕೀರ್ಣದಲ್ಲಿ ಸ್ಥಳಾಂತರಗೊಂಡವು. ಹಿರಿಯ ಶ್ರೇಣಿ ನ್ಯಾಯಾಲಯಗಳ ಸ್ಥಾಪನೆ ಆಯಿತು ಹಾಗೂ ಅವುಗಳಿಗೆ MVC ಪ್ರಕರಣಗಳನ್ನು ನಡೆಸಲು ಅಧಿಕಾರ ಕೊಡಲಾಯಿತು.
1997 ರಲ್ಲಿ ವಿಜಯಪುರ ಜಿಲ್ಲಾ ವಿಭಜನೆಗೊಂಡು ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮುಧೋಳ, ಬೀಳಗಿ, ಹುನಗುಂದ ಹಾಗೂ ಬಾಗಲಕೋಟೆ ತಾಲೂಕುಗಳ ಹೊಸ ಜಿಲ್ಲೆಯಾಗಿ ಅಲ್ಲಿಯ ಪ್ರಕರಣಗಳು ಬಾಗಲಕೋಟೆಗೆ ವರ್ಗಾವಣೆಗೊಂಡವು. ಬಹಳಷ್ಟು ಕ್ರಿಮಿನಲ್ ಹಾಗೂ ಭೂಸ್ವಾಧೀನ ಪ್ರಕರಣಗಳು ಬಾಗಲಕೋಟೆಗೆ ವರ್ಗಾವಣೆ ಆದುದರಿಂದ ವಕೀಲರಿಗೆ ನಿರಾಸೆ ಆಯಿತು.


1999 ರಲ್ಲಿ ನ್ಯಾಯಾಲಯಗಳ ಸಂಕೀರ್ಣದ ಉದ್ಘಾಟನೆಯಾಗಿ ಉಳಿದ ನ್ಯಾಯಾಲಯಗಳು ಕೂಡ ಹೊಸ ಸಂಕೀರ್ಣಕ್ಕೆ ಬಂದವು. ಇಲ್ಲಿಂದ ಅಪಘಾತ ವಿಮೆ ಪರಿಹಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತ ಹೋಯಿತು ಹಾಗೂ ಪರಿಹಾರದ ಮೊತ್ತ ಕೂಡ ಹೆಚ್ಚಾಗುತ್ತ ಹೋಯಿತು. ಈ ಹಂತದಲ್ಲಿ ಲೋಕ ಅದಾಲತ್ ವೇದಿಕೆಯ ಉದಯ ವಾಯಿತು ಹಾಗೂ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇತ್ಯರ್ಥ ವಾಗ ಹತ್ತಿದವು. ಸರಕಾರದ ಉದಾರ ನೀತಿ ಇಂದಾಗಿ ಹೊಸ ಹೊಸ ವಿಮೆ ಕಂಪೆನಿಗಳು ಉದಯ ವಾದವು ಹಾಗೂ ಅವುಗಳಲ್ಲಿ ಪೈಪೋಟಿ ಶುರುವಾಯಿತು.
15.04.2021 ರಂದು ಮೂರು ಜಿಲ್ಲಾ ನ್ಯಾಯಾಲಯ ಗಳು ಹೊಸದಾಗಿ ನಿರ್ಮಾಣಗೊಂಡ ಸುಸಜ್ಜಿತ ಕಟ್ಟಡ ಕ್ಕೆ ಸ್ಥಳಾಂತರಗೊಂಡವು, ಇನ್ನು ಕೆಲವು ದಿನಗಳಲ್ಲಿ ಉಳಿದ ಮೂರು ಜಿಲ್ಲಾ ನ್ಯಾಯಾಲಯಗಳು ಕೂಡ ಹೊಸ ಕಟ್ಟಡದ ಒಂದನೇ ಅಂತಸ್ತಿನಲ್ಲಿ ಸ್ಥಳಾಂತರ ಆಗುತ್ತಿವೆ. ಇನ್ನು ಹಂತ ಹಂತವಾಗಿ ಹೊಸ ಕಟ್ಟಡದ ಎರಡನೇ ಹಾಗೂ ಮೂರನೆಯ ಅಂತಸ್ತುಗಳ ಕೆಲಸ ಮುಗಿದ ನಂತರ ಉಳಿದ ನ್ಯಾಯಾಲಯಗಳು ಕೂಡ ಅಲ್ಲಿ ಹೋಗಬಹುದು.
35 ವರ್ಷಗಳ ಹಿಂದೆ ನಾವು ನೋಡಿದ ನ್ಯಾಯಾಲಯಗಳಿಗೂ ಈಗಿನ ಸುಸಜ್ಜಿತ ನ್ಯಾಯಾಲಯಗಳಿಗೂ ಭೂಮಿ ಆಕಾಶದ ಅಂತರವಿದೆ.
ಹೊಸ ಕಟ್ಟಡದ ಹತ್ತಿರ ಒಂದು ಅತೀ ಪವಿತ್ರವಾದ ಬನ್ನಿ ಗಿಡ ಇದೆ, ಅದಕ್ಕೆ ಪೂಜೆ ಕೂಡ ಮಾಡಲಾಗುತ್ತಿದೆ.
“ಹುಣಸೆ ಗಿಡ” ದಿಂದ “ಬನ್ನಿ ಗಿಡ” ದವರೆಗಿನ ಈ 35 ವರ್ಷಗಳ ಸುದೀರ್ಘ ಪಯಣ ಅದೆಷ್ಟು ಸುಂದರವಾಗಿದೆ ಅಲ್ಲವೇ?
ಈ ರೀತಿ ಹಿರಿಯ ನ್ಯಾಯವಾದಿ ಅರ್ಜುನ ಮಿಸಾಳೆ ತಮ್ಮ ನ್ಯಾಯವಾದಿ ವೃತ್ತಿಯ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

Leave a Reply

ಹೊಸ ಪೋಸ್ಟ್‌