ಕೊರೊನಾ ಕೈಮಿರಿದೆ- ಜನ ಜಾಗೃತಿ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ- ಎಂಎಲ್‌ಸಿ ಸುನಿಲಗೌಡ ಪಾಟೀಲ ಎಚ್ಚರಿಕೆ

ಬಸವ ನಾಡು

ವಿಜಯಪುರ- ಕೊರೊನಾ ಎರಡನೇ ಅಲೆ ಈಗಾಗಲೇ ತನ್ನ ತೀವ್ರತೆಯನ್ನು ತೋರಿದ್ದು, ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕೊರೊನಾ ಮೊದಲನೇ ಹಂತದಲ್ಲಿ ನಾವು ಕಲಿಯದ ಪಾಠಗಳನ್ನು ಎರಡನೇ ಅಲೆ ಸಂದರ್ಭದಲ್ಲಿ ಕಲಿಯಬೇಕಾಗಿತ್ತು. ಆದರೆ ನಾವು ನಮ್ಮ ನಿರ್ಲಕ್ಷದಿಂದ ಈ ಬಾರಿಯೂ ಮಾಸ್ಕ್ ಧರಿಸದಿರುವುದು, ಸ್ಯಾನಿಟೈಸರ್ ಬಳಸದಿರುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡದೆ ಸಂತೆ, ಮದುವೆ, ಗುಂಪು ಗೂಡುವಿಕೆ ಇತ್ಯಾದಿಗಳನ್ನು ಮುಂದುವರೆಸಿದ ಪರಿಣಾಮ ಅದರ ಬೆಲೆಯನ್ನು ಈಗ ತೆರಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಬೆಡ್‍ಗಳು ದೊರಕುತ್ತಿಲ್ಲ. ರೋಗಿಗಳಿಗೆ ಆಕ್ಸಿಜನ್ ಪೂರೈಸಲು ಸಾಧ್ಯವಾಗುತ್ತಿಲ್ಲ. ರೆಮಿಡಿಶಿವಿರ್ ಇಂಜೆಕ್ಷನ್ ಲಭ್ಯವಿಲ್ಲ. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲರೂ ಹರಸಾಹಸ ಪಡುತ್ತಿದ್ದಾರೆ. ಭಗವಂತನೇ ನಮ್ಮನ್ನು ಕಾಪಾಡಬೇಕು ಹೊರತು ಸರಕಾರವಲ್ಲ. ಮುಂದಿನ ವಾರ ಪರಿಸ್ಥಿತಿ ಇನ್ನೂ ಹೆಚ್ಚಿಗೆ ಉಲ್ಬಣವಾಗುವ ಲಕ್ಷಣಗಳಿದ್ದು ದಯವಿಟ್ಟು ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು ಎಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನಿಲಗೌಡ ಪಾಟೀಲ ಸಾರ್ವಜನಿಕರಲ್ಲಿ ಕಳಕಳಿಯಿಂದ ವಿನಂತಿಸಿದ್ದಾರೆ.

Leave a Reply

ಹೊಸ ಪೋಸ್ಟ್‌