ಕೊರೊನಾ ನಿಯಂತ್ರಣ ಕುರಿತು ಸಚಿವ ಮುರುಗೇಶ ನಿರಾಣಿ ಅವರಿಂದ ವಿಜಯಪುರದಲ್ಲಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ

ಬಸವ ನಾಡು

ವಿಜಯಪುರ- ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಕೊರೊನಾವನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣ ಕುರಿತು ಸಭೆ ನಡೆಸಿದ ಅವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಬಳ್ಳಾರಿ, ಚಾಮರಾಜನಗರ, ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ಹೋಲಿಸಿದಾಗ, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮುತು ವರ್ಜಿಯಿಂದ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.


ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಶೇ. 20 ದಾಟಿದ್ದು ವಿಜಯಪುರ ಜಿಲ್ಲೆಯಲ್ಲಿ ಶೇ. 11 ರಷ್ಟು ಮಾತ್ರ ಇದೆ. ರಾಜ್ಯದಲ್ಲಿ ವಿಜಯಪುರ ಜಿಲ್ಲೆ 27ನೇ ಸ್ಥಾನದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 19 ಸಾವಿರ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ನಾನಾ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಪ್ರತಿ ದಿನ 350 ರಿಂದ 400 ಸರಾಸರಿಯಲ್ಲಿ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ.

ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವ್ಯವಸ್ಥೆ ಮಾಡಲಾಗುತ್ತಿದ್ದು. ಆಕ್ಸಿಜನ್ ಹಾಗೂ ರೆಮಡಿಸಿವಿರ್ ಎಂಜಿಕ್ಷನ್ ಸಮಸ್ಯೆ ಪರಿಹಾರಕ್ಕೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಅದರಂತೆ ಅಧಿಕಾರಿಗಳನ್ನು ನೇಮಿಸಿ ಔಷಧಿಗಳ ಸಮಸ್ಯೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುರುಗೇಶ ನಿರಾಣಿ ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಈವರೆಗೆ ರೆಮಡಿಸಿವಿರ್ ಎಂಜೆಕ್ಷನ್ ಕೊರತೆಯಾಗಿಲ್ಲ. ವೈದ್ಯರ ಸಲಹೆ ಮತ್ತು ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಮಾತ್ರ ಈ ಲಸಿಕೆ ಪಡೆಯುವಂತೆ ಕೊರೊನಾ ಸೋಂಕಿತರಲ್ಲಿ ಮನವಿ ಮಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ನಿವಾರಣೆಗೆ ಅವಶ್ಯಕ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆಕ್ಸಿಜನ್ ಅಧಿಕ ಪ್ರಮಾಣದಲ್ಲಿದ್ದರೆ ಖಾಲಿ ಸಿಲಿಂಡರ್ ಗಳ ಕೊರತೆ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸ್ಥಳೀಯವಾಗಿ, ಧಾರವಾಡ ಮತ್ತು ಬಳ್ಳಾರಿ ಗಳಿಂದ ಆಕ್ಸಿಜನ್ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಏಕಕಾಲಕ್ಕೆ ಎರಡು ಸಲಕರಣೆಗಳನ್ನು ಹೊಂದಿರುವ ಆಕ್ಸಿಜನ್ ಪೂರೈಕೆ ಯಂತ್ರವನ್ನು ಪ್ರತಿ ಜಿಲ್ಲೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು ಹಾಗೂ ನರ್ಸ್ ಗಳು ತಮ್ಮ ಜೀವನದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಿದ್ದು, ವಿಜಯಪುರ ಜಿಲ್ಲಾಡಳಿತ ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.


ಅದರಂತೆ ನಾನಾ ಕೈಗಾರಿಕೆಗಳ ವಿಶೇಷವಾಗಿ ಸಕ್ಕರೆ ಕಾರ್ಖಾನೆ ಮತ್ತು ಡಿಸ್ಟಿಲರಿ ಮೂಲಕ ಆಕ್ಸಿಜನ್ ತಯಾರಿಕೆಗೂ ಕೋರಲಾಗಿದೆ. ಮುಧೋಳದಲ್ಲಿ ತಮ್ಮ ಕಾರ್ಖಾನೆಗಳಲ್ಲಿ ಕೂಡ ಮುಂದಿನ ಮೂರು ತಿಂಗಳಲ್ಲಿ ಆಕ್ಸಿಜನ್ ತಯಾರಿಸುವ ಘಟಕ ಸಹ ಸ್ಥಾಪನೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದ ಮುರುಗೇಶ ನಿರಾಣಿ, ಎಲ್ಲರೂ ಈ ರೋಗ ನಿಯಂತ್ರಣಕ್ಕಾಗಿ ಪಕ್ಷಾತೀತವಾಗಿ ಪ್ರಯತ್ನಿಸೋಣ ಎಂದು ಹೇಳಿದರು.
ರೆಮಿಡಿಸಿವಿರ್ ಎಂಜೆಕ್ಷನ್ ನ್ನು ಪ್ರತಿಯೊಬ್ಬ ಕೊರೊನಾ ಸೋಂಕಿತರಿಗೆ ಹಾಕಿಸಬೇಕು ಎಂಬ ಬೇಡಿಕೆ ಸರಿಯಲ್ಲ. ವೈದ್ಯರ ಸಲಹೆ ಮೇರೆಗೆ ಮಾತ್ರ ಅದನ್ನು ಪಡೆಯಬೇಕು. ಗರಿಷ್ಠ ಪ್ರಮಾಣದಲ್ಲಿ ಈ ಲಸಿಕೆ ಪಡೆಯಲು ಪ್ರಯತ್ನಿಸಲಾಗುವುದು. ಪ್ರತಿದಿನ ಜಿಲ್ಲಾಧಿಕಾರಿಗಳ ಮೂಲಕ ಕೊರೊನಾ ನಿಯಂತ್ರಣ ಕುರಿತು ಮಾಹಿತಿ ಸಹ ಪಡೆಯಲಾಗುತ್ತಿದ್ದು, ನಾನಾ ಕೊರತೆಗಳು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದಾಗಿ ಸಚಿವ ಮುರುಗೇಶ ನಿರಾಣಿ ಇದೇ ಸಂದರ್ಭದಲ್ಲಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌