ಕಾಲ್ ಸೆಂಟರ್ ಮೂಲಕ ಆಸ್ಪತ್ರೆಗಳಲ್ಲಿನ ರಿಯಾಲಿಟಿ ಚೆಕ್ -ಸಚಿವ ಅರವಿಂದ ಲಿಂಬಾವಳಿ

ಬಸವ ನಾಡು

ಬೆಂಗಳೂರು: ಆಸ್ಪತ್ರೆಗಳಲ್ಲಿರುವ ವಾಸ್ತವ ಸ್ಥಿತಿಗತಿಗಳನ್ನು ತಿಳಿಯಲು ಕಾಲ್ ಸೆಂಟರ್ ಗಳ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್ ಕೂಡ ಮಾಡಲಾಗುತ್ತದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಮತ್ತು ಕಾಲ್ ಸೆಂಟರ್ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಬೆಂಗಳೂರಿನ ಯಶವಂತಪುರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕರೋನ ಸೋಂಕಿತರಿಗೆ ನೆರವು ನೀಡಲು ಸ್ಥಾಪಿಸಿರುವ 1912 ಸಹಾಯವಾಣಿಯ ಹೆಚ್ಚುವರಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದರಿಂದ ಆಸ್ಪತ್ರೆಗಳಿಂದ ಬಿಡುಗಡೆಯಾಗುವ ರೋಗಿಗಳು ಮತ್ತು ದಾಖಲಾಗುವ ರೋಗಿಗಳ ನಿಖರ ಮಾಹಿತಿ, ಬೆಡ್ ಗಳ ಲಭ್ಯತೆ ಬಗ್ಗೆ ವಾಸ್ತವ ವರದಿಗಳು ಸೊಗಲು ಸಾಧ್ಯವಾಗುತ್ತದೆ. ಈ ಹಿಂದೆ 1912 ಸಹಾಯವಾಣಿಯಲ್ಲಿ 60 ಮಾರ್ಗಗಳಿದ್ದವು. ಈಗ ಅದಕ್ಕೆ ಹೆಚ್ಚುವರಿಯಾಗಿ 70 ಮಾರ್ಗಗಳನ್ನು(ಸೀಟರ್) ಸೇರಿಸಲಾಗಿದೆ ಎಂದು ಅವರು ತಿಳಿಸಿದರು.
ಈವರೆಗೂ ಈ ಸಹಾಯವಾಣಿಗೆ ಕರೆ ಮಾಡಿದಾಗ 12 ರಿಂದ 20 ನಿಮಿಷಗಳ ಕಾಯಬೇಕಿತ್ತು. ಆದರೆ ಈ ಹೆಚ್ಚುವರಿ ಕರೆ ಮಾರ್ಗಗಳನ್ನು ಸ್ಥಾಪಿಸಿರುವುದರಿಂದ ಈಗ ಕರೆ ಮಾಡಿದ ಕೂಡಲೇ ಸೇವೆ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು.

ಈ ಕಾಲ್ ಸೆಂಟರ್ ನಲ್ಲಿ ವೈದ್ಯರು ಸಹ ಉಪಸ್ಥಿತರಿದ್ದು, ವಲಯಗಳಿಗೆ ಕರೆ ವರ್ಗಾವಣೆ ವಿಳಂಬವಾದಲ್ಲಿ ಅವರೇ ಸ್ವತಃ ಮಾತನಾಡಿ, ಅಗತ್ಯ ವೈದ್ಯಕೀಯ ಸಲಹೆ ಸೂಚನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಈ ಕಾಲ್ ಸೆಂಟರ್ ಆಸ್ಪತ್ರೆಗಳ ರಿಯಾಲಿಟಿ ಚೆಕ್ ಜೊತೆಗೆ ಟ್ರಯೇಜಿಂಗ್ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಈ ಕೇಂದ್ರವನ್ನು ಸ್ಥಾಪಿಸುವ ಮೂಲಕ ಎಲ್ಲಾ ವಲಯಗಳನ್ನು ಒಳಗೊಂಡಂತೆ 9 ವಾರ್ ರೂಮ್ ಮತ್ತು ಒಂದು ಕೇಂದ್ರ ವಾರ್ ರೂಮ್ ಮೇಲಿನ ಒತ್ತಡ ಕಡಿಮೆ ಮಾಡಲಾಗಿದೆ. ಜೊತೆಗೆ ಇದರಿಂದ ವಾರ್ ರೂಮ್ ಮತ್ತು ಕಾಲ್ ಸೆಂಟರ್ ಗಳ ಕಾರ್ಯ ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಶಾಸಕ ಮುನಿರತ್ನ,
ಬಿ ಬಿ ಎಂ ಪಿ ಯ ಮುಖ್ಯ ಆಯುಕ್ತ ಗೌರವ್ ಗುಪ್ತಾ, ವಿಶೇಷ ಆಯುಕ್ತ ರಂದೀಪ್, ಸಹಾಯವಾಣಿ ನೋಡಲ್ ಅಧಿಕಾರಿ ವಿಪಿನ್ ಸಿಂಗ್ ಸೇರಿದಂತೆ ಉನ್ನತ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌