ಕೋವಿಡ್ ಸೇವಾ ನಿರತ ವಿಜಯಪುರ ವೈದ್ಯೆಯ ಜೊತೆ ಸಿಎಂ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆ

ವಿಜಯಪುರ: ಕೋವಿಡ್-19 ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯದ ನಾನಾ ಜಿಲ್ಲೆಗಳಲ್ಲಿ ರೋಗಿಗಳ ಚಿಕಿತ್ಸೆಯಲ್ಲಿ ನಿರತ ವೈದ್ಯರ ಜತೆ ವರ್ಚುವಲ್ ಸಭೆ ಮೂಲಕ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ವಿಜಯಪುರದ ವೈದ್ಯೆ ಡಾ. ಮೀನಾಕ್ಷಿ ಮುತ್ತಪ್ಪನವರ ಈ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿರುವ ತಮ್ಮ ಗೃಹ ಕಚೇರಿ ಕೃಷ್ಣದಿಂದ ವರ್ಚುವಲ್ ಮೂಲಕ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಡಾ.ಮೀನಾಕ್ಷಿ ಮುತ್ತಪ್ಪನವರಿಗೆ ಎಷ್ಟು ದಿನಗಳಿಂದ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಆಗ ಡಾ. ಮೀನಾಕ್ಷಿ ಮುತ್ತಪ್ಪನವರ ತಾವು ಕಳೆದ ವರ್ಷ ಕೋವಿಡ್-19 ಪ್ರಾರಂಭದ ದಿನದಿಂದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ದಿನದ 6 ಗಂಟೆಗಳ ಕಾಲ ಸರದಿ(ಪಾಳಿಯಲ್ಲಿ ) 12 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದು, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು, ರಕ್ತವನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಿ ಬಂದಂತಹ ರಿಪೋರ್ಟನ್ನು ಆಧರಿಸಿ ಕೋರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಬೆಳಿಗ್ಗೆ ಮತ್ತು ರಾತ್ರಿ ವೇಳೆಯಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.

ಆಗ ಸಿಎಂ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದೀರಾ? ಎಂದು ಕೇಳಿದ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ. ಮೀನಾಕ್ಷಿ ಮುತ್ತಪ್ಪನವರ, ಕೋವಿಶೀಲ್ಡ್ ವ್ಯಾಕ್ಸಿನ್ ನ್ನು ನಾಲ್ಕು ತಿಂಗಳ ಹಿಂದೆ ತೆಗೆದುಕೊಂಡಿದ್ದೇನೆ. ಎರಡನೇ ಡೋಸ್ ಕೂಡ ಪಡೆದಿರುವುದಾಗಿ ತಿಳಿಸಿದರು.

ನೀವು ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೀರಿ. ಮನೆಯಲ್ಲಿ ಹೇಗೆ ಇರುತ್ತೀರಾ? ಎಂದು ಸಿಎಂ ಪ್ರಶ್ನಿಸಿದರು. ತಾವು ಮನೆಯಲ್ಲಿ ಐಸೋಲೇಷನ್ ನಲ್ಲಿರುವುದಾಗಿ ತಿಳಿಸಿದ ಡಾ. ಮೀನಾಕ್ಷಿ ಮುತ್ತಪ್ಪನವರ, ಪ್ರತ್ಯೇಕ ರೂಮಿನಲ್ಲಿ ಒಬ್ಬರೇ ಇರುತ್ತೇನೆ. ಆಸ್ಪತ್ರೆಯಿಂದ ಬಂದ ಕೂಡಲೇ ಸ್ಯಾನಿಟೈಸರ್ ಮಾಡಿಕೊಂಡು ಸ್ನಾನ ಮಾಡಿ ನಂತರ ಒಬ್ಬರೇ ಅಡುಗೆಯನ್ನು ಮಾಡಿಕೊಳ್ಳುತ್ತೇನೆ. ಮನೆಯ ಸದಸ್ಯರಿಂದ ಅಂತರವನ್ನು ಕಾಯ್ದುಕೊಂಡು ಒಬ್ಬರೇ ಮುನ್ನೆಚ್ಚರಿಕೆಯಿಂದ ಇರುವುದಾಗಿ ಅವರು ಸಿಎಂಗೆ ತಿಳಿಸಿದರು.

ವೈದ್ಯಕೀಯ ಸಿಬ್ಬಂದಿ ಅಮೂಲ್ಯ ಆಸ್ತಿ

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಪಾಯವನ್ನು ಲೆಕ್ಕಿಸದೇ ಕಾರ್ಯದ ಒತ್ತಡದ ಮಧ್ಯೆಯೂ ನಿರಂತರವಾಗಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್ ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿ ನಮ್ಮ ಅಮೂಲ್ಯ ಆಸ್ತಿ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಸೇವೆಯನ್ನು ಬಣ್ಣಿಸಿದರು.

ಇಂಥ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸರಕಾರ ಬದ್ಧವಿದೆ. ಸೋಂಕು ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಮಾನವೀಯತೆ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಸೋಂಕಿತರು ಹಾಗೂ ತಮ್ಮ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಕರೆ ನೀಡಿದರು.

ಈ ಸಂದರ್ಭದಲ್ಲಿ ಬೆಂಗಳೂರು, ಬಳ್ಳಾರಿ, ಕಲಬುರಗಿ, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ಹನ್ನೊಂದು ಜಿಲ್ಲೆಗಳ ಕೋವಿಡ್ ಕರ್ತವ್ಯ ನಿರತ ವೈದ್ಯರ ಜತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಗಳು ಕೊರೊನಾ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಕೇಳಿದರು.

Leave a Reply

ಹೊಸ ಪೋಸ್ಟ್‌