ಬೆಂಗಳೂರಿನ ಎಎಸ್‌ಸಿ ಕೇಂದ್ರದಲ್ಲಿ ಕೋವಿಡ್‌ ಕೇರ್ ಸೆಂಟರ್ ಸ್ಥಾಪನೆ ಕುರಿತು ಸೇನಾಧಿಕಾರಿಗಳ ಜೊತೆ ಡಿಸಿಎಂ ಅಶ್ವತ್ಥನಾರಾಯಣ ಚರ್ಚೆ

ಬೆಂಗಳೂರು: ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಕಮಾಂಡ್‌ ಆಸ್ಪತ್ರೆ ಬಳಿ ಇರುವ ಆರ್ಮಿಗೆ ಸೇರಿರುವ ಎಎಸ್‌ಸಿ ಕೇಂದ್ರ ಮತ್ತು ಕಾಲೇಜಿನಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪನೆ ಕುರಿತು ಸೇನೆ ಅಧಿಕಾರಿಗಳ ಜೊತೆ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಮತ್ತು ಡಿಸಿಎಂ ಡಾ. ಸಿ. ಎನ್. ‌ಅಶ್ವತ್ಥನಾರಾಯಣ ಮಾತುಕತೆ ನಡೆಸಿದ್ದಾರೆ.

ಎಎಸ್‌ಸಿ ಕಮಾಂಡರ್‌ ಲೆಫ್ಟಿನೆಂಟ್‌ ಬಿ. ಕೆ. ರೆಸಪಾಸ್‌ ವಾಲ್‌ ಅವರೊಂದಿಗೆ ಮಾತುಕತೆ ನಡೆಸಿದ ಅವರು, ಎಎಸ್‌ಸಿ ಸೆಂಟರ್‌ನಲ್ಲಿ ಕನಿಷ್ಠ 500 ಬೆಡ್‌ಗಳ ಕೋವಿಡ್‌ ಕೇರ್ ಕೇಂದ್ರ ಸ್ಥಾಪನೆಯ ಪ್ತಸ್ತಾಪನೆ ಮಾಡಿದರು. ಈ ಕೋವಿಡ್‌ ಕೇರ್‌ ಸೆಂಟರ್ ಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಸರಕಾರ ಒದಗಿಸಲಿದೆ. ಸೇನೆಯ ವತಿಯಿಂದ ವೈದ್ಯರು, ಸಿಬ್ಬಂದಿ ಮತ್ತು ಅರೆವೈದ್ಯ ಸಿಬ್ಬಂದಿಯನ್ನು ಒದಗಿಸುವಂತೆ ಅವರು ಮನವಿ ಮಾಡಿದರು.

ಕೊರೊನಾ ಎರಡನೇ ಮತ್ತು ಮೂರನೇ ಅಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೇಂದ್ರದಲ್ಲಿ ಕೋವಿಡ್‌ ಕೇರ್‌ ಸ್ಥಾಪನೆಗೆ ಅವಕಾಶ ನೀಡಬೇಕು. ನಾನಾ ಹಂತಗಳಲ್ಲಿ ಇಲ್ಲಿ ಮೂಲ ಸೌಕರ್ಯವನ್ನು ಹೆಚ್ಚಿಸಬಹುದು ಎಂದು ಅವರು ತಿಳಿಸಿದರು. ಡಿಸಿಎಂ ಮನವಿಗೆ ಬಿ. ಕೆ. ರೆಸಪಾಸ್‌ ವಾಲ್‌ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಅಲ್ಲದೇ, ಕೊರೊನಾ ವಿರುದ್ಧ ಸರಕಾರ ನಡೆಸುತ್ತಿರುವ ಹೋರಾಟಕ್ಕೆ ಸೇನೆಯೂ ಹೆಗಲು ಕೊಡಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಎಸ್‌ಸಿ ಕೇಂದ್ರದಲ್ಲಿ ಕೊರೊನಾ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಲೆಫ್ಟಿನೆಂಟ್‌ ಬಿ. ಕೆ. ರೆಸಪಾಸ್‌ ವಾಲ್‌ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿ, ಅವುಗಳನ್ನು ತೋರಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಡಿಸಿಎಂ ಕಾರ್ಯದರ್ಶಿ ಪ್ರದೀಪ್‌ ಪ್ರಭಾಕರ, ಭಾರತ ಸ್ಕೌಟ್ಸ ಮತ್ತು ಗೈಡ್ಸ ನ ರಾಜ್ಯ ಸರಕಾರದ ಸಲಹೆಗಾರರಾದ ಜಿ. ಎಂ. ಬಾಬು ಮುಂತಾದವರು ಉಪಸ್ಛಿತರಿದ್ದರು.

Leave a Reply

ಹೊಸ ಪೋಸ್ಟ್‌