ಗ್ರಾಮೀಣ ಪ್ರದೇಶದ ಕೊರೊನಾ ರೋಗಿಗಳಿಗೆ ಕೂಡಲೇ ಚಿಕಿತ್ಸೆ ನೀಡಲು ಡಿಸಿಎಂ ಗೋವಿಂದ ಕಾರಜೋಳ ಸೂಚನೆ

ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಕೊರೊನಾ ಲಕ್ಷಣ ಕಂಡು ಬಂದವರನ್ನು ತಕ್ಷಣ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಜಯಪುರದಲ್ಲಿ ನೂತನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆ ನಡೆಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣಪುಟ್ಟ ಮನೆಗಳಲ್ಲಿ ಗ್ರಾಮಸ್ಥರು ವಾಸಿಸುತ್ತಿರುವುದರಿಂದ ಕುಟುಂಬದ ಸದಸ್ಯರಲ್ಲಿ ಸೋಂಕು ವೇಗವಾಗಿ ಹರಡಲು ಕಾರಣವಾಗುತ್ತಿದೆ. ಆದ್ದರಿಂದ ಕೊರೊನಾ ಲಕ್ಷಣಗಲು ಕಂಡು ಬಂದ ತಕ್ಷಣ ನಿಗದಿತ ಔಷಧಿ ನೀಡಬೇಕು. ಅಲ್ಲದೇ, ಪಾಸಿಟಿವ್ ಪ್ರಕರಣ ಕಂಡು ಬಂದ ತಕ್ಷಣ ಅವರನ್ನು ಕೋವಿಡ್ ಕೇರ್ ಸೆಂಟರ, ನಿಗದಿತ ಆಸ್ಪತ್ರೆ, ಕ್ವಾರಂಟೇನ್ ಕೇಂದ್ರಕ್ಕೆ ಸೇರಿಸುವಂತೆ ಅವರು ಸೂಚನೆ ನೀಡಿದರು.

ಕೊರೊನಾ ಲಕ್ಷಣ ಹೊಂದಿರುವವರಿಗೆ ಆರ್ ಎಂ ಪಿ ವೈದ್ಯರು ಸಹ ಚಿಕಿತ್ಸೆ ಒದಗಿಸುವ, ವಿನಾಕಾರಣ ಕಾಲಹರಣ ಮಾಡುವುದನ್ನು ತಪ್ಪಿಸಬೇಕು. ಇಂಥ ವೈದ್ಯರು ತೀವ್ರ ಉಸಿರಾಟ ತೊಂದರೆ, ತೀವ್ರತರ ಕೊರೊನಾ ಲಕ್ಷಣ ಹೊಂದಿದವರಿಗೆ ಚಿಕಿತ್ಸೆ ನೀಡದಂತೆ ಆರೋಗ್ಯ ಇಲಾಖೆಯಿಂದ ತಿಳಿಸಿ ಹೇಳಬೇಕು. ಕೊರೊನಾ ಲಕ್ಷಣಗಳಿಗೆ ಗ್ರಾಮಸ್ಥರು ಸ್ಥಳೀಯ ಔಷಧಿ ಬಳಸದೇ ನಿಗದಿತ ಔಷಧಿ, ಮಾತ್ರೆಗಳನ್ನು ಮಾತ್ರ ಬಳಸಲು ಮನವರಿಕೆ ಮಾಡಬೇಕು. ಕೊರೊನಾ ನಿವಾರಣೆಗಾಗಿ ಇರುವ ನಿಗದಿತ ಔಷಧಿಯನ್ನು ಪೂರೈಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪಾಸಿಟಿವ್ ಬರುವಂತಹವರನ್ನು ತಕ್ಷಣ ನಿಗದಿತ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆಗೆ ಒಳಪಡಿಸಬೇಕು. ಇದರಿಂದ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡಲು ಸಾಧ್ಯ. ಆಯಾ ತಾಲೂಕು ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಮತ್ತು ಇತರೆ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 6 ಕೆಎಲ್. ಆಕ್ಸಿಜನ್ ಟ್ಯಾಂಕ್ ಲಭ್ಯವಿದ್ದು, ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೂ 6 ಕೆಎಲ್ ಆಕ್ಸಿಜನ್ ಟ್ಯಾಂಕ್ ಒಂದನ್ನು ಅಳವಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಅವರು, ಈ ಕುರಿತು ತಾವು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರ ಬೆಳಗಾವಿ, ಹುಬ್ಬಳ್ಳಿ ಮತ್ತು ಇತರೆ ಜಿಲ್ಲೆಗಾಗಿ ಆಕ್ಸಿಜನ್ ಪೂರೈಕೆಗಾಗಿ ಆರು ಟ್ಯಾಂಕರ್ ಗಳನ್ನು ನೀಡಿದ್ದು, ವಿಜಯಪುರ ಜಿಲ್ಲೆಯ ನೆರವಿಗಾಗಿ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಆಕ್ಸಿಜನ್ ಟ್ಯಾಂಕರ್ ನ ನೆರವು ಪಡೆಯುವಂತೆ ಡಿಸಿಎಂ ಸೂಚನೆ ನೀಡಿದರು.

ಕಾರೊನಾದಿಂದ ಮೃತರಾಗುವ ಕೊರೋನಾ ವಾರಿಯರ್ಸಗಳಿಗೆ ಮೆಡಿಕಲ್ ರಿಎಂಬರ್ಸಮೆಂಟ್ ನೀಡುವ ಕುರಿತು ಶೀಘ್ರದಲ್ಲಿಯೇ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದ ಅವರು ವಿಜಯಪುರಕ್ಕೆ 40 ಆಕ್ಸಿಜನ್ ಕಾನ್ಸಂಟ್ರೇಟರ್ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಮಾತನಾಡಿ, ಜಿಲ್ಲೆಯಲ್ಲಿ 1300ಕ್ಕೂ ಹೆಚ್ಚು ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 100 ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಬೇರೆ ಜಿಲ್ಲೆಯಿಂದ ರೋಗಗಳು ಬರುತ್ತಿರುವುದರಿಂದ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೊರೊನಾ ಗಂಭೀರ ಸ್ವರೂಪದ ಪ್ರಕರಣಗಳು ಇಳಿಮುಖವಾಗುತ್ತಿದೆ. ಗ್ರಾಮಾಂತರ ಪ್ರದೇಶಕ್ಕೆ ಹೆಚ್ಚಿನ ಗಮನ ನೀಡಲಾಗಿದೆ. ವಿನೂತನ ತಂತ್ರಾಂಶದ ಮೂಲಕ ಬೆಡ್ ನಿರ್ವಹಣೆಯಲ್ಲಿ ಬೆಂಗಳೂರು ನಂತರ ವಿಜಯಪುರನಲ್ಲಿ ಅತ್ಯುತ್ತಮ ಕಾರ್ಯ ನಡೆಯುತ್ತಿದೆ. ಇತರೆ ಜಿಲ್ಲೆಗಳಿಗೆ ಈ ತಂತ್ರಾಂಶ ಮಾದರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ರೋಗಿಗಳನ್ನು ಪತ್ತೆ ಮಾಡಲು ಕಾರ್ಯ ಪಡೆಗಳು ಸಕ್ರಿಯವಾಗಿವೆ. ಲಕ್ಷಣ ಉಳ್ಳವರಿಗೆ ನಿಗದಿತ ಔಷಧಿ ಮಾತ್ರೆಗಳನ್ನು ಪೂರೈಸುತ್ತಿವೆ. ಈವರೆಗೆ 328 ಕೊರೊನಾ ಪಾಸಿಟಿವ್ ರೋಗಿಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಮೀಪದಲ್ಲಿಯೇ ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಕೊರೊನಾ ರೋಗಿಗಳಿಗೆ ಟಂಟಂ, ಕ್ರೂಜರ್, ಆಂಬುಲೆನ್ಸ್ ಗಳ ಮೂಲಕ ಆಸ್ಪತ್ರೆಗಳಿಗೆ ರವಾನಿಸಲು ಆಯಾ ಪಿಡಿಓಗಳು ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದರು.

ಈ ಸಭೆಯಲ್ಲಿ ವಿಜಯಪುರ ಎಸ್ಪಿ ಅನುಪಮ್ ಅಗ್ರವಾಲ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪಸೆ, ಡಾ. ಗಲಗಲಿ. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶರಣಪ್ಪ ಕಟ್ಟಿ. ಜಿಲ್ಲಾಸ್ಪತ್ರೆ ಸಿಎಂಓ ಡಾ. ಲಕ್ಕಣ್ಣವರ. ಡಾ. ಮಲ್ಲನಗೌಡ ಬಿರಾದಾರ, ಕೊರೊನಾ ವ್ಯಾಕ್ಸಿನ್ ನೋಡಲ್ ಅಧಿಕಾರಿ ಡಾ. ಮಹೇಶ ನಾಗರಬೆಟ್ಟ ಸೇದಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌