ವಿಜಯಪುರ ಜಿಲ್ಲಾಡಳಿತದ ಮನೆ-ಮನೆ ಸಮೀಕ್ಷೆಗೆ ಶಾಸಕ ಎಂ. ಬಿ. ಪಾಟೀಲ ಶ್ಲಾಘನೆ, ಕೊರೊನಾ ಮುಗಿಯುವವರೆಗೂ ಮುಂದುವರೆಸಲು ಸಲಹೆ

ವಿಜಯಪುರ: ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮನೆ-ಮನೆ ಸಮೀಕ್ಷೆಯನ್ನು ಯಶಸ್ವಿಯಾಗಿ ಮಾಡಿ, ಕೊರೊನಾ ಸೋಂಕಿತರ ಪತ್ತೆಗೆ ಕೈಗೊಂಡ ಕ್ರಮವನ್ನು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಶ್ಲಾಘಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅವರು ಮನೆ-ಮನೆ ಸಮೀಕ್ಷೆ ಮಾಡಿ, ಅಗತ್ಯವಿದ್ದರಿಗೆ ಹೆಲ್ತ್ ಕಿಟ್ ನೀಡಿ, ಹೋಬಳಿವಾರು ಕೊವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಿ ಮತ್ತು ನಿರಂತರ ಜಾಗೃತಿ ಮೂಡಿಸಲು ಕರಪತ್ರಗಳನ್ನು ನೀಡಿರುವ ವಿಜಯಪುರ ಜಿಲ್ಲಾಡಳಿತದ ಕ್ರಮ ಶ್ಲಾಘಿಸುತ್ತೇನೆ.

ಇದಕ್ಕಾಗಿ ಮುತುವರ್ಜಿ ವಹಿಸಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಜಿ. ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋವಿಂದ ರೆಡ್ಡಿ ಸೇರಿದಂತೆ ಜಿಲ್ಲಾ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆಯ ಹಾಗೂ ಗ್ರಾಮ ಪಂಚಾಯಿತಿಗಳ ಎಲ್ಲ ಸಿಬ್ಬಂದಿ ಮತ್ತು ವಿಶೇಷವಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ಕಷ್ಟ ಕಾಲದಲ್ಲಿಯೂ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದಕ್ಕಾಗಿ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಸಮೀಕ್ಷೆಯನ್ನು ಒಂದೇ ಬಾರಿ ಮಾಡಿ ನಿಲ್ಲಿಸದೇ, ಈ ಮಹಾಮಾರಿ ಅಂತ್ಯವಾಗುವವರೆಗೂ ಮುಂದುವರೆಸಿಕೊಂಡು ಹೋಗಬೇಕು. ಇದು ಆಯಾ ಪ್ರದೇಶಗಳಲ್ಲಿ ಹರಡುತ್ತಿರುವ ಸೋಂಕು ಪತ್ತೆ ಹಚ್ಚಲು, ಜನರಲ್ಲಿ ಆತ್ಮವಿಶ್ವಾಸ ತುಂಬಲು, ಕೋವಿಡ್ ಕೇರ್ ಕೇಂದ್ರದಲ್ಲಿ ಸೋಂಕಿತರ ಐಸೋಲೇಶನ್ ಮಾಡಲು ಮತ್ತು ತೀವ್ರ ತೊಂದರೆ ಇದ್ದವರಿಗೆ ಆಸ್ಪತ್ರೆಗೆ ದಾಖಲಿಸಲು ಈ ಪ್ರಕ್ರಿಯೆ ಅನಕೂಲವಾಗುತ್ತದೆ ಎಂದು ಎಂ. ಬಿ. ಪಾಟೀಲ ಹೇಳಿದ್ದಾರೆ.

Leave a Reply

ಹೊಸ ಪೋಸ್ಟ್‌