ಕಳೆದ ವಾರ ಯಡಿಯೂರಪ್ಪ ಇಂದು ಯತ್ನಾಳ ವಿಕ್ಟರಿ ಸಿಂಬಾಲ್- ಯತ್ನಾಳ ಗೆಲುವಿನ ಸಂಕೇತ ತೋರಿಸಿರುವ ಹಿಂದಿರುವ ಗುಟ್ಟೇನು?

ವಿಜಯಪುರ: ಕಳೆದ ವಾರ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ ತೆರಳಿದ ಮೇಲೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಮ್ಮ ಕೈಯಿಂದ ವಿಕ್ಟರಿ ಸಿಂಬಾಲ್ ತೋರಿಸುವ ಮೂಲಕ ನಸುನಕ್ಕಿದ್ದರು.

ಇಂದು ಇದೇ ರೀತಿ ವಿಜಯಪುರ ನಗರ ಬಿಜೆಪಿ ಶಾಸಕ ಮತ್ತು ಬಿಜೆಪಿಯಲ್ಲಿ ಬಂಡಾಯ ನಾಯಕ ಎಂದೇ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ ಯತ್ನಾಳ, ವಿಜಯಪುರದಲ್ಲಿ ವಿಕ್ಟರಿ ಸಿಂಬಾಲ್ ತೋರಿಸುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.

ಅರುಣ ಸಿಂಗ್ ರಾಜ್ಯಕ್ಕೆ ಬಂದು ಹೋದ ಮೇಲೆ ಸಿಎಂ ಬಿ. ಎಸ್. ಯಡಿಯೂರಪ್ಪ ಖುರ್ಚಿ ಗಟ್ಟಿಯಾಗಿದೆ ಎಂದೇ ಚರ್ಚೆಯಾಗುತ್ತಿದೆ. ಆದರೆ, ಈಗ ವಿಜಯಪುರದಲ್ಲಿ ಶಾಸಕ ಯತ್ನಾಳ ಮಾಧ್ಯಮಗಳ ಕ್ಯಾಮೆರಾಗಳ ಎದುರು ಯಾವುದೇ ಪ್ರತಿಕ್ರಿಯೆ ನೀಡದೇ ಕೇವಲ ವಿಕ್ಟರಿ ಸಿಂಬಾಲ್ ತೋರಿಸಿರುವುದು ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ವಾರ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಬೆಂಗಳೂರಿಗೆ ಆಗಮಿಸಿ ನಾಯಕತ್ವ ಬದಲಾವಣೆ, ಸರಕಾರ ಮತ್ತು ಬಿಜೆಪಿಯಲ್ಲಿರುವ ಗೊಂದಲಗಳಿಗೆ ತೆರೆ ಎಳೆಯಲು ಸಾಕಷ್ಟು ಸಭೆಗಳನ್ನು ನಡೆಸಿದ್ದರು. ಆದರೆ, ಆಗ ಯತ್ನಾಳ ಅವರ ಭೇಟಿಗೆ ನಿರಾಕರಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ನಂತರ ಫೇಸ್ ಬುಕ್ ನಲ್ಲಿ ತಮ್ಮದೇ ಶೈಲಿಯಲ್ಲಿ ಈ ಸುದ್ದಿಯನ್ನು ನಿರಾಕರಿಸಿದ್ದ ಯತ್ನಾಳ, ಸುಳ್ಳು ಸುದ್ದಿ ಬಿತ್ತರಿಸಬೇಡಿ ಎಂದು ಟಾಂಗ್ ನೀಡಿದ್ದರು.

ಈಗ ವಿಜಯಪುರದಲ್ಲಿರುವ ಯತ್ನಾಳ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಯತ್ನಾಳ ಕೇವಲ ವಿಕ್ಟರಿ ಸಿಂಬಾಲ್ ತೋರಿಸುವ ಮೂಲಕ ಮುಂದೆ ಸಾಗಿದ್ದಾರೆ. ಮಾಧ್ಯಮಗಳ ಕ್ಯಾಮರಾ ಎದುರು ವಿಕ್ಟರಿ ಸಿಂಬಾಲ್ ತೋರಿಸಿ ಸುಮ್ಮನೆ ಹೋದ ಯತ್ನಾಳ್, ಪತ್ರಕರ್ತರು ಮಾತನಾಡಿಸಲು ಎಷ್ಟೇ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ನೀಡದೇ ಕೇವಲ ವಿಕ್ಟರಿ ಸಿಂಬಾಲ್ ತೋರಿಸಿರುವುದು ಕುತೂಹಲ ಕೆರಳಿಸಿದೆ.

ವಿಜಯಪುರ ನಗರದ ಅಡಕಿ ಗಲ್ಲಿಯಲ್ಲಿ ಭೂಮಿ ಪೂಜೆ ನಿಮಿತ್ಯ ಆಗಮಿಸಿದ್ದ ಯತ್ನಾಳ್ ಮಾಧ್ಯಮಗಳ ಎದುರು ಯಾವುದೇ ಪ್ರತಿಕ್ರಿಯೆ ನೀಡದೇ ಗೌಪ್ಯತೆ ಕಾಪಾಡಿಕೊಂಡಿರುವುದು ಈಗ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.

Leave a Reply

ಹೊಸ ಪೋಸ್ಟ್‌