ಚಿಕ್ಕಗಲಗಲಿ ಬ್ಯಾರೇಜಿಗೆ ಶಾಸಕ ಎಂ. ಬಿ. ಪಾಟೀಲರಿಂದ ಬಾಗೀನ ಅರ್ಪಣೆ- ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು ಎಂದ ಮಾಜಿ ಸಚಿವ

ವಿಜಯಪುರ: ಜಲಸಂಪನ್ಮೂಲ ಇಲಾಖೆ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಚಿಕ್ಕಗಲಗಲಿ ಬ್ಯಾರೇಜಿಗೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ವಕ್ಷೇತ್ರ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ರೂ. 54 ಕೋ. ವೆಚ್ಚದ ನೂತನ ಬ್ರಿಡ್ಜ್-ಕಂ-ಬಾಂದಾರ ತುಂಬಿ ಹರಿಯುತ್ತಿದೆ. ಈ ಬ್ಯಾರೇಜಿಗೆ ಎಂ. ಬಿ. ಪವಾಟೀಲ ಗಂಗಾಪೂಜೆ ನೆರವೇರಿಸಿ, ಬಾಗೀನ ಅರ್ಪಿಸಿ ಅವರು ಮಾತನಾಡಿದರು.
ಬಳಿಕ ಮಾತನಾಡಿದ ಅವರು, ಜನರು ಜನಪ್ರತಿನಿಧಿಗಳಿಗೆ ಅಧಿಕಾರದ ಅವಕಾಶ ಕೊಟ್ಟಾಗ, ಇಚ್ಛಾಶಕ್ತಿ ಪ್ರದರ್ಶಿಸಿ ಅಭಿವೃದ್ಧಿಗಾಗಿ ಶ್ರಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಚಿಕ್ಕಗಲಗಲಿ ಬ್ಯಾರೇಜ್ ಗೆ ಗಂಗಾಪೂಜೆ ಸಲ್ಲಿಸಿದ ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ

2013-18ರ ಅವಧಿಯಲ್ಲಿ ತಾವು ಜಲಸಂಪನ್ಮೂಲ ಸಚಿವರಾಗಿ ತಮಗೆ ಅಧಿಕಾರ ಸಿಕ್ಕಾಗ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರಾಜ್ಯಾದ್ಯಂತ ಚಾಲನೆ ನೀಡಿದ್ದೆ. ತಮ್ಮ ಅವಧಿ ಪೂರ್ಣಗೊಳ್ಳುವ ಮುಂಚೆಯೇ ಕೆಲವು ಯೋಜನೆಗಳನ್ನು ಉದ್ಘಾಟಿಸಿದ್ದೆ. ನಾವೇ ಶಂಕುಸ್ಥಾಪನೆ ಮಾಡಿ, ನಾವೇ ಉದ್ಘಾಟನೆ ಮಾಡುವ ಭಾಗ್ಯ ಸಿಗುವುದು ಅಪರೂಪ ಎಂದು ಅವರು ಹೇಳಿದರು.

2014ರಲ್ಲಿ ಈ ಭಾಗದ ರೈತ ಮುಖಂಡರುಗಳು ಇಲ್ಲಿ ಹೊಸ ಬ್ಯಾರೇಜ್ ನಿರ್ಮಿಸಲು ಬೇಡಿಕೆ ಸಲ್ಲಿಸಿದ್ದರು. ಟ್ರಿಬ್ಯೂನಲ್ ಮತ್ತು ನ್ಯಾಯಾಲಯಗಳ ವ್ಯಾಜ್ಯದ ತೊಂದರೆ ಇರುವದರಿಂದ ಹೊಸ ಬ್ಯಾರೇಜ್ ನಿರ್ಮಿಸುವುದು ಅಸಾಧ್ಯವಾಗಿತ್ತು. 50 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಬ್ಯಾರೇಜ್ ಸುಸ್ಥಿತಿಯಲ್ಲಿ ಇರಲಿಲ್ಲ. ಅದನ್ನು ಎತ್ತರಿಸಲು ತಾಂತ್ರಿಕ ತೊಂದರೆಯೂ ಕೂಡ ಇತ್ತು. ಪಕ್ಕದ ತೆಲಂಗಾಣದಲ್ಲಿ ಜಾಕೆಟಿಂಗ್ ಮಾದರಿಯಲ್ಲಿ ಹಾಲಿ ಬ್ಯಾರೇಜ್‍ನ್ನು ಬಲಪಡಿಸಿ, ಎತ್ತರಿಸುವ ಕಾಮಗಾರಿ ಮಾಡಿದ್ದರು. ಅದೇ ಮಾದರಿಯಲ್ಲಿ ಇಲ್ಲಿ ತಂತ್ರಜ್ಞಾನ ಅಳವಡಿಸಿ 50 ವರ್ಷಗಳ ಹಿಂದಿನ ಬ್ಯಾರೇಜ್‍ನ್ನು ಜಾಕೆಟಿಂಗ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಎತ್ತರಿಸಲಾಗಿದೆ. ಇದು ಕರ್ನಾಟಕದ ಮಟ್ಟಿಗೆ ಹೊಸ ಪ್ರಯೋಗ ಎಂದು ತಿಳಿಸಿದರು.

ಚಿಕ್ಕಗಲಗಲಿ ಬ್ಯಾರೇಜ್ ಗೆ ಗಂಗಾಪೂಜೆ ಸಲ್ಲಿಸಿ ಮಾತಚನಾದ ವಿಜಯಪುರ ಜಿಲ್ಲೆಯ ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ

ಕೋರ್ತಿ-ಕೋಲ್ಹಾರದಲ್ಲಿ ರೂ. 32 ಕೋ. ವೆಚ್ಚದಲ್ಲಿ, ಗಲಗಲಿಯಲ್ಲಿ ರೂ. 34 ಕೋ. ವೆಚ್ಚದಲ್ಲಿ ಒಟ್ಟು ರೂ. 66 ಕೋ. ಆರಂಭದಲ್ಲಿ ಮಂಜೂರಾತಿ ನೀಡಲಾಗಿತ್ತು. ವಿನ್ಯಾಸದಲ್ಲಿ ಬದಲಾವಣೆ, ಜಿ ಎಸ್ ಟಿ ಹೆಚ್ಚಳ ಮತ್ತು ಹೆಚ್ಚುವರಿ ಕಾಮಗಾರಿ ಸೇರಿ ಗಲಗಲಿ ಬ್ಯಾರೇಜ್ ಗೆ ಒಟ್ಟು ರೂ. 54 ಕೋ. ಖರ್ಚು ಮಾಡಲಾಗಿದೆ. ಗಲಗಲಿ ಬ್ಯಾರೇಜ್ ನಿಂದ ಹಿಪ್ಪರಗಿ ಬ್ಯಾರೇಜ್ ವರೆಗೆ ನೀರು ನಿಂತಿದೆ. ಇದರಿಂದ ಪ್ರತಿ ವರ್ಷ ಬೇಸಿಗೆಯಲ್ಲಿ ಮಹಾರಾಷ್ಟ್ರದ ಮುಂದೆ ನೀರಿಗಾಗಿ ಕೈಯೊಡ್ಡುವ ಬೇಡಿಕೆ ಕಡಿಮೆ ಆಗಲಿದೆ ಎಂದು ಮಾಜಿ ಸಚಿವರು ತಿಳಿಸಿದರು.

ತುಬಚಿ-ಬಬಲೇಶ್ವರ ಯೋಜನೆಯಿಂದ ಈಗಾಗಲೇ ಮಹಾರಾಷ್ಟ್ರದ ಜತ್ತ ತಾಲೂಕಿನ ಹಳ್ಳಿಗಳಿಗೆ ನೀರು ಕೊಡಲಾಗುತ್ತಿದ್ದು, ಅದರ ಬದಲಾಗಿ ಮಹಾರಾಷ್ಟ್ರದಿಂದ ಬೇಸಿಗೆಯಲ್ಲಿ ನಮ್ಮ ಬ್ಯಾರೇಜ್‍ಗಳಿಗೆ ನೀರು ಪಡೆಯುವ ಪ್ರಯತ್ನ ನಡೆದಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಕೃಷ್ಣಾ ನದಿ ನೀರಿನಿಂದ ಭರ್ತಿಯಾಗಿರುವ ಚಿಕ್ಕಗಲಗಲಿ ಬ್ಯಾರೇಜ್ ವೀಕ್ಷಿಸಿದ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ

ನಂದಿ ಸಕ್ಕರೆ ಕಾರ್ಖಾನೆ ಭಾಗದಲ್ಲಿ ಆಸ್ಪತ್ರೆಗಳ ಕೊರತೆಯಿದ್ದು, ಪ್ರಾಥಮಿಕ ಆರೊಗ್ಯ ಕೇಂದ್ರ ಆರಂಭಿಸಬೇಕು ಎಂದು ಸ್ಥಳೀಯರು ಸಲ್ಲಿಸಿದ ಮನವಿಗೆ ನೀವು ಸ್ಥಳಾವಕಾಶ ಕೊಟ್ಟರೆ, ಬಿ ಎಲ್ ಡಿ ಇ ಸಂಸ್ಥೆಯಿಂದಲೇ ಇಲ್ಲಿ ಚಿಕ್ಕ ಆಸ್ಪತ್ರೆ ನಿರ್ಮಿಸುವುದಾಗಿ ಎಂ. ಬಿ. ಪಾಟೀಲ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಹಿರಿಯ ಸಹಕಾರಿ ಧುರೀಣ ಎಚ್. ಎಸ್. ಕೊರಡ್ಡಿ, ಜಿ. ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಶಿವನಗೌಡ ಪಾಟೀಲ ಯಡಹಳ್ಳಿ, ಮುತ್ತು ವಾಸನ್ನ ದೇಸಾಯಿ, ಎಚ್. ಆರ್. ಬಿರಾದಾರ, ಬಸನಗೌಡ ಪಾಟೀಲ, ರಾಮಣ್ಣ ಶೇಬಾನಿ ಸೇರಿದಂತೆ ಚಿಕ್ಕಗಲಗಲಿ, ಹೊಸೂರು, ಜಂಬಗಿ, ಬಬಲಾದ, ಶಿರಬೂರ, ಕಣಬೂರ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ಗಿರೀಶ ಪಾಟೀಲ ಶಿರಬೂರ ಪ್ರಾಸ್ತಾವಿಕ ಮಾತನಾಡಿದರು.

Leave a Reply

ಹೊಸ ಪೋಸ್ಟ್‌