ಲಿಥಿಯನ್‌ -ಅಯಾನ್‌ ಸೆಲ್‌ ಉತ್ಪಾದನೆ ಕಂಪನಿ ಸಿ4ವಿ ಯಿಂದ ರಾಜ್ಯದಲ್ಲಿ ರೂ. 4000 ಕೋ. ಹೂಡಿಕೆಗೆ ಒಪ್ಪಂದ- ಜಗದೀಶ ಶೆಟ್ಟರ

ಬೆಂಗಳೂರು: ಲಿಥಿಯನ್‌- ಅಯಾನ್‌ ಸೆಲ್‌ ಉತ್ಪಾದನೆ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಅಮೇರಿಕಾದ ಸಿ4ವಿ ರಾಜ್ಯದಲ್ಲಿ ರೂ. 4000 ಕೋ. ಹೂಡಿಕೆ ಮಾಡಲು ಮುಂದಾಗಿದ್ದು, ಇದು ರಾಜ್ಯದ ಎಲೆಕ್ಟ್ರಿಕ್‌ ಸೆಲ್‌ ಉತ್ಪಾದನೆ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಿಶ್ವದ ಪ್ರಮುಖ ಲಿಥಿಯನ್‌ -ಅಯಾನ್‌ ಸೆಲ್‌(Li-Ion) ಸೆಲ್‌ ಉತ್ಪಾದನಾ ಕಂಪನಿಯ ಪ್ರತಿನಿಧಿಗಳೊಂದಿಗೆ ಒಡಂಬಡಿಕೆಯ ನಂತರ ಮಾತನಾಡಿದ ಅವರು, ಸಿ4ವಿ ಕಂಪನಿ ನೂರಕ್ಕೂ ಹೆಚ್ಚು ಪೇಟೆಂಟ್‌ ಗಳನ್ನು ಹೊಂದಿರುವ ಹಾಗೂ ಲಿಥೀಯಮ್‌ ಬ್ಯಾಟರಿ ಸೆಲ್‌ ಉತ್ಪಾದನೆ ಹಾಗೂ ತಂತ್ರಜ್ಞಾನ ಹೊಂದಿರುವ ಪ್ರಮುಖ ಕಂಫನಿಯಾಗಿದೆ. ರಾಜ್ಯದಲ್ಲಿ ಈ ಕಂಪನಿಯ ರೂ. 4015 ಕೋ. ಮಾಡಲಿದ್ದು, ಇದರಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಸಚಿವ ಜಗದೀಶ ಶೆಟ್ಟರ ಸಮ್ಮುಖದಲ್ಲಿ ಲಿಥಿಯಾನ್ -ಅಯಾನ್‌ ಸೆಲ್‌ ಉತ್ಪಾದನೆ ಕಂಪನಿ ಸಿ4ವಿ ಜೊತೆ ರಾಜ್ಯ ಸರಕಾರದ ಒಪ್ಪಂದ

ಈ ಕಂಪನಿ ರಾಜ್ಯದಲ್ಲಿ 5 GWh ಪ್ಲಾಂಟನ್ನು ಸ್ಥಾಪಿಸಲಿದೆ. ಮುಂದಿನ ವರ್ಷ ಇದರ ಕಾಮಗಾರಿ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ಇತ್ತೀಚಿಗೆ ಹೊರ ತಂದಿರುವ ನೂತನ ಇಎಸ್‌ಡಿಎಂ ನೀತಿ ಹಾಗೂ ಎಲೆಕ್ಟ್ರಿಕ್‌ ವೆಹಿಕಲ್‌ ನೀತಿಯಲ್ಲಿನ ಅಮೂಲಾಗ್ರ ಬದಲಾವಣೆಯ ಮೂಲಕ ಹಸಿರು ಭವಿಷ್ಯಕ್ಕೆ ಮುನ್ನಡಿಯನ್ನು ಬರೆದಿದ್ದೇವೆ. ಪರಿಸರ ಮಾಲಿನ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೆಲ್‌ ಉತ್ಪಾದನೆ ಕ್ಷೇತ್ರ ಪ್ರಮುಖ ಪಾತ್ರವಹಿಸಲಿದೆ. ಈ ನಿಟ್ಟಿನಲ್ಲಿ ಈ ಕ್ಷೇತ್ರಕ್ಕೆ ಅಗತ್ಯವಿರುವ ಸಹಕಾರವನ್ನು ರಾಜ್ಯ ಸರಕಾರ ಈಗಾಗಲೇ ನೀಡುತ್ತಿದೆ. ಪ್ರಮುಖ ಕಂಪನಿ ರಾಜ್ಯದಲ್ಲಿ ಹೂಡಿಕೆಗೆ ಮುಂದಾಗಿರುವುದರಿಂದ ಇನ್ನಷ್ಟು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ರಾಜ್ಯದಲ್ಲಿ ಕೈಗಾರಿಕೆಯ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರಗಳನ್ನು ನಮ್ಮ ಸರಕಾರ ನೀಡಲು ಸಿದ್ದವಿದೆ ಎಂದು ಸಚಿವ ಜಗದೀಶ ಶೆಟ್ಟರ ಇದೇ ಸಂಧರ್ಭದಲ್ಲಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜಕುಮಾರ ಖತ್ರಿ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್‌ ಕೃಷ್ಣ, ಸಿ4ವಿ ಕಂಪನಿಯ ಸಿಇಓ ಶೈಲೇಶ್‌ ಉಪ್ರೇತಿ, ಉಪಾಧ್ಯಕ್ಷ ಕುಲದೀಪ್‌ ಗುಪ್ತಾ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ, ಇನ್‌ವೆಸ್ಟ್‌ ಕರ್ನಾಟಕ ಫೋರಂ ನ ಸಿಓಓ ಬಿ.ಕೆ ಶಿವಕುಮಾರ್ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌