ಹುತಾತ್ಮ ಯೋಧನ ಕುಟುಂಬಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ರೂ. 5 ಲಕ್ಷ ಸಹಾಯ ಧನ ನೀಡಿದ ಶಾಸಕ‌ ಶಿವಾನಂದ ಪಾಟೀಲ

ವಿಜಯಪುರ: ದೇಶಕ್ಕಾಗಿ ಹುತಾತ್ಮನಾದ ವೀರಯೋಧ ಕಾಶಿರಾಯ ಬೊಮ್ಮನಹಳ್ಳಿ ಸೇವೆ ಅಪ್ರತಿಮವಾಗಿದೆ. ಯುವಕರು ಸೇನೆಗೆ ಸೇರಲು ನಾವು ಪ್ರೇರೇಪಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಅವರು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಹುತಾತ್ಮ ಕಾಶಿರಾಯ ಬೊಮ್ಮನಹಳ್ಳಿ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ರೂ. 5 ಲಕ್ಷ ಸಹಾಯ ಧನದ ಚೆಕ್ ವಿತರಿಸಿ ಮಾತನಾಡಿದರು.

ಕಾಶಿರಾಯ ಬೊಮ್ಮನಹಳ್ಳಿ ಆಕಸ್ಮಿಕವಾಗಿ ವೀರ ಮರಣ ಹೊಂದಿದ್ದಾರೆ. ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಅವರಲ್ಲಿರುವ ದೇಶಪ್ರೇಮ ಇಡೀ ಭಾರತ ದೇಶ ಮೆಚ್ಚುವಂಥದ್ದು. ಇಂದು ಉಕ್ಕಲಿ ಗ್ರಾಮ ಹಾಗೂ ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ಅಂಥ ವೀರಯೋಧರನ್ನು ಪಡೆದ ನಾವು ಪುಣ್ಯವಂತರು. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಅವರು ಹೇಳಿದರು.

ಕುಟುಂಬ ಸದಸ್ಯರ ಮನವಿಯನ್ನು ಸ್ವೀಕರಿಸಿದ ಶಾಸಕರು, ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ,ಹೆಚ್ಚಿನ ಸಹಾಯಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಗ್ರಾಮಸ್ಥರ ಬೇಡಿಕೆಯಂತೆ ಯೋಧರ ಸ್ಮಾರಕ ನಿರ್ಮಾಣಕ್ಕಾಗಿ ನಮ್ಮ ಶಾಸಕರ ಅನುದಾನದಿಂದ ಹಣ ಮಂಜೂರು ಮಾಡಿ ಸ್ಮಾರಕ ನಿರ್ಮಾಣಕ್ಕೆ ನಾವು ,ನೀವೆಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಹೇಳಿದರು.

ಹಿಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕುಟುಂಬಗಳಿಗೂ ಕೂಡ ಡಿಸಿಸಿ ಬ್ಯಾಂಕ್ ಸಹಾಯ ಮಾಡಿದೆ ಶಿವಾನಂದ ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ್ ಗುಡದಿನ್ನಿ, ನಿರ್ದೇಶಕರಾದ ಗುರುಶಾಂತ ನಿಡೋಣಿ. ಬ್ಯಾಂಕಿನ ಸಿಇಓ ಬಿರಾದಾರ, ಬ್ಯಾಂಕನ ಸಿಬ್ಬಂದಿಗಳು, ಊರಿನ ಹಿರಿಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರು, ಗ್ರಾಮಸ್ಥರು, ಯೋಧರಾದ ಕಿಶನ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌