ಬೆಳಿಗ್ಗೆ ಬೇಡಿಕೆಯಿಟ್ಟ ಶಾಸಕ ಎಂ. ಬಿ. ಪಾಟೀಲ- ಸಂಜೆ ವೇಳೆಗೆ ತಥಾಸ್ತು ಎಂದು ಆದೇಶ ಹೊರಡಿಸಿದ ಸಿಎಂ

ಬೆಂಗಳೂರು: ಬೆಳಿಗ್ಗೆಯಷ್ಟೇ ತಮ್ಮನ್ನು ಭೇಟಿ ಮಾಡಿದ್ದ ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಬೇಡಿಕೆಗೆ ಸಂಜೆ ವೇಳೆಗೆ ಸಿಎಂ ಬಿ. ಎಸ್. ಯಡಿಯೂರಪ್ಪ ತಥಾಸ್ತು ಎಂದು ಆದೇಶ ಹೊರಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ಭಾಗದ 16 ಕೆರೆಗಳಿಗೆ ತಿಡಗುಂದಿ ಅಕ್ವಾಡಕ್ಟ ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಎಂ. ಬಿ. ಪಾಟೀಲ ಅವರು ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. ಬಬಲೇಶ್ಬರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರ ಮನವಿಗೆ ಕೂಡಲೇ ಸ್ಪಂದಿಸಿದ್ದು, ರೂ. 140 ಕೋ. ವೆಚ್ಚದ ಯೋಜನೆಯನ್ನು ಕೃಷ್ಣಾ ಭಾಗ್ಯ ಜಲನಿಗಮದಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ ಹೊರಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಎಲ್ಲಾ ಭಾಗಗಳಿಗೆ ಎಂ. ಬಿ. ಪಾಟೀಲ್ ಅವರ ಅವಧಿಯಲ್ಲಿ ನೀರಾವರಿ ಸೌಲಭ್ಯ ದೊರಕಿದೆ. ಆದರೆ, ಇಂಡಿ ತಾಲೂಕಿನ ಅತ್ಯಂತ ಬರಪೀಡಿತ ಪ್ರದೇಶದ 16 ಕೆರೆಗಳನ್ನು ತುಂಬಿಸುವ ಯೋಜನೆ ಮಾತ್ರ ಬಾಕಿ ಉಳಿದಿತ್ತು. ಈ ಯೋಜನೆ ಜಾರಿಗೊಳಿಸಲು ಶತಾಯ ಗತಾಯ ಪ್ರಯತ್ನ ಮುಂದುವರೆಸಿದ್ದ ಶಾಸಕ ಎಂ. ಬಿ. ಪಾಟೀಲ ಅವರು, ಈ ಹಿಂದೆ ಆಡಳಿತಾತ್ಮಕ ಅನುಮೋದನೆ ಪಡೆಯುವಲ್ಲಿ ಸಫಲರಾಗಿದ್ದರು. ಆರ್ಥಿಕ ಅನುಮೋದನೆ ಇಲ್ಲದ ಹಿನ್ನೆಲೆ ಕಾಮಗಾರಿ ಆರಂಭವಾಗಿರಲಿಲ್ಲ.

ಶುಕ್ರವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಈ ಯೋಜನೆಯ ಅಗತ್ಯತೆ ಕುರಿತ ಮನದಟ್ಟು ಮಾಡಿದ್ದರು. ಅಲ್ಲದೇ, ರೈತರ ಹಿತದೃಷ್ಠಿಯಿಂದ ಕೂಡಲೇ ಆರ್ಥಿಕ ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಿದ್ದರು. ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ‌, ಸಂಜೆ ವೇಳೆಗೆ ಅನುದಾನ ಬಿಡುಗಡೆ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈಗ ಸರಕಾರದ ಅಧೀನ ಕಾರ್ಯದರ್ಶಿ ರವೀಂದ್ರ ಕೊಂಡ ರೂ. 140 ಕೋ. ಅಂದಾಜು ಮೊತ್ತದ ಕಾಮಗಾರಿಯನ್ನು ಯುಕೆಪಿ ಹಂತ-3ರ ಅಡಿ ವ್ಯವಸ್ಥಾಪಕ ನಿರ್ದೇಶಕರು ಕೃಷ್ಣಾ ಭಾಗ್ಯ ಜಲನಿಗಮ ಇವರಿಗೆ ಮುಂದಿನ ಕ್ರಮ ವಹಿಸುವಂತೆ ತಿಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ದೇಶಿಸಿದ್ದಾರೆ.

ಸಿಎಂ ಸ್ಪಂದನೆಗೆ ಶಾಸಕ ಎಂ. ಬಿ. ಬಿ. ಪಾಟೀಲ ಕೃತಜ್ಞತೆ

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಂ.‌ ಬಿ. ಪಾಟೀಲ, ವಿಜಯಪುರ ಜಿಲ್ಲೆಯ ಜನತೆಯ ಪರವಾಗಿ 16 ಕೆರೆಗಳನ್ನು ತುಂಬಿಸಲು ಆರ್ಥಿಕ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಯೋಜನೆ ಜಾರಿಯಾಗುವ ಮೂಲಕ ಜಿಲ್ಲೆಯ ಎಲ್ಲ ಭಾಗಗಳ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಿದ ತೃಪ್ತಿ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌