ಸಿಎಂ ಭೇಟಿ ಮಾಡಿದ ಶಾಸಕ‌ ಎಂ. ಬಿ. ಪಾಟೀಲ- ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬಿಸಲು ಅನುದಾನಕ್ಕೆ ಮನವಿ

ಬೆಂಗಳೂರು: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 16 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುದಾನ ಒದಗಿಸುವಂತೆ ಆಗ್ರಹಿಸಿ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ.‌ ಪಾಟೀಲ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವಿನಂತಿ ಮಾಡಿದರು.

ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಯಡಿಯೂರಪ್ಪ ಅ ರನ್ನು ಭೇಟಿ ಮಾಡಿ ಚರ್ಚಿಸಿದ ಎಂ. ಬಿ. ಪಾಟೀಲ ಅವರು, ಭೀಮಾನದಿ ಪಾತ್ರದಲ್ಲಿ ನೀರಿನ ಕೊರತೆಯ ಕಾರಣ ಇಂಡಿ ಭಾಗದ ಕೆಲವು ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗಿಲ್ಲ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೃಷ್ಣಾ ನದಿ ನೀರನ್ನು ಎತ್ತಿ, ಭೀಮಾ ಭಾಗದ ಈ ಹಳ್ಳಿಗಳಿಗೆ ನೀರು ಒದಗಿಸಲು ಏಷ್ಯಾದಲ್ಲಿಯೇ ಅತೀ ದೊಡ್ಡ 16 ಕಿ. ಮೀ. ಉದ್ದದ ತಿಡಗುಂದಿ ಅಕ್ವಾಡಕ್ಟ್ ನಿರ್ಮಿಸಿ, ಅಲ್ಲಿಂದ ಕಾಲುವೆ ಮೂಲಕ ಇಂಡಿ ಭಾಗದ 65 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ಮತ್ತು 16 ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ. ಅಕ್ವಾಡಕ್ಟ್ ಹಾಗೂ ಕಾಲುವೆ ಕಾರ್ಯ ಮುಗಿದಿದ್ದು, ನೀರು ಹರಿಸಲಾಗಿದೆ. ತಿಡಗುಂದಿ ಕಾಲುವೆಯಿಂದ ಲಿಫ್ಟ್ ಮಾಡಿ 16 ಕೆರೆಗಳನ್ನು ತುಂಬಿಸುವ ಯೋಜನೆಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆದರೆ, ಹಣಕಾಸಿನ ಲಭ್ಯತೆ ಇಲ್ಲದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ. ಇಂಡಿ ತಾಲೂಕಿನ ಅತೀ ಬರಗಾಲ ಪೀಡಿತ ಈ ಹಳ್ಳಿಗಳು ಕುಡಿಯುವ ನೀರು ಹಾಗೂ ನೀರಾವರಿಯಿಂದ ವಂಚಿತರಾಗಿ ತತ್ತರಿಸಿವೆ. ಆದರೂ ಇಲ್ಲಿನ ಜನ ಅಲ್ಪ ನೀರಿನಲ್ಲಿಯೇ ವಿಶ್ವಪ್ರಸಿದ್ದ ಲಿಂಬೆ, ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವರಿಗೆ ನೆರವಾಗಲು ವಿಶೇಷ ಗಮನ ಹರಿಸಿ, ಹಣಕಾಸಿನ ನೆರವು ಒದಗಿಸಿದರೆ ಇಂಡಿ ಭಾಗ ನೀರಾವರಿಗೆ ಒಳಪಡುತ್ತದೆ. ಅಲ್ಲದೇ, ತಿಡಗುಂದಿ ಅಕ್ವಾಡೆಕ್ಟ್ ನಿರ್ಮಿಸಿದ ಉದ್ದೇಶವು ಸಫಲವಾಗುತ್ತದೆ ಎಂದು ಎಂ. ಬಿ. ಪಾಟೀಲ ಮುಖ್ಯಮಂತ್ರಿಗಳಿಗೆ ವಿನಂತಿ ಮಾಡಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಗತ್ಯ ಆರ್ಥಿಕ ನೆರವು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರು ಸಂಪಾದಿಸಿದ ಶಿವಾನುಭ ಪತ್ರಿಕೆಗಳನ್ನು ಮರುಮುದ್ರಿಸಿ, ಸಂಪುಟಗಳ ರೂಪದಲ್ಲಿ ಹೊರ ತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆರ್ಥಿಕ ನೆರವು ಒದಗಿಸಲು ಮುಖ್ಯಮಂತ್ರಿಗಳಿಗೆ ಬಿ. ಎಲ್. ಡಿ. ಇ ಸಂಸ್ಥೆಯ ಪರವಾಗಿ ಎಂ. ಬಿ. ಪಾಟೀಲ ಅವರು ವಿನಂತಿಸಿದಾಗ ಮುಖ್ಯಮಂತ್ರಿಗಳು ಶಿವಾನುಭವ ಪತ್ರಿಕೆಗಳ ಸಮಗ್ರ ಸಂಪುಟಗಳನ್ನು ಹೊರತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೆರವು ಒದಗಿಸುವುದಾಗಿ ತಿಳಿಸಿದರು ಎಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌