ವಿಜಯಪುರ ವಿಮಾನ ನಿಲ್ದಾಣ- ಕಾರ್ಯಾಚರಣೆಗೆ ಮುಂದಾದ ಟರ್ಬೋ ಏರ್‌ಲೈನ್ ಕಂಪನಿ – ಡಿಸಿಎಂ ಗೋವಿಂದ ಎಂ. ಕಾರಜೋಳ

ಬೆಂಗಳೂರು: ವಿಜಯಪುರ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲು ಮೆ. ಟರ್ಬೋ ಏರಲೈನ್ ಕಂಪನಿ ಮುಂದೆ ಬಂದಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

ವಿಜಯಪುರ ವಿಮಾನ ನಿಲ್ದಾಣದಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ ಎಟಿಆರ್ 72 ವಿಮಾನವನ್ನು ಹಾರಾಟ ನಡೆಸಲು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಹೊಂದಿವೆ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯು ತ್ವರಿತಗತಿಯಿಂದ ನಡೆಯುತ್ತಿದ್ದು, ಈ ಕಾಮಗಾರಿಯನ್ನು 2022ರ ಮಾರ್ಚ್ ಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದಾಗಿದೆ. ಈಗಾಗಲೇ ಕಾಮಗಾರಿಯು ತ್ವರಿತಗತಿಯಾಗಿ ಗುರಿ ಮೀರಿ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ನಿರಂತರವಾಗಿ ತಾವು ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲನೆ ನಡೆಸುತ್ತಿದ್ದು, ಈ ವಿಮಾನ ನಿಲ್ದಾಣದ ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನತೆಗೆ ವಿಮಾನಯಾನ ಕೈಗೊಳ್ಳಲು ಇದರಿಂದ ಅನುವಾಗಲಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮತ್ತು ಉಭಯ ಜಿಲ್ಲೆಗಳ ಜನಪ್ರತಿನಿಧಿಗಳ ಒತ್ತಾಸೆಯಂತೆ ಪಾರಂಪರಿಕ ತಾಣಗಳ ತೊಟ್ಟಿಲು, ಪ್ರವಾಸೋದ್ಯಮ ಸ್ಥಳಗಳ ಸಂಗಮ, ತೋಟಗಾರಿಕೆ ಜಿಲ್ಲೆಗಳಾದ ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಗಳು, ನೆರೆಯ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬಹುದಿನಗಳ ಕನಸಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ನನಸು ಮಾಡಲು ಸದಾಶಯ ಹೊಂದಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಅನುದಾನ ನೀಡಿ ಈ ಯೋಜನೆಯ ಯಶಸ್ವಿಗೆ ಕಾರಣೀಭೂತರಾಗಿದ್ದಾರೆ. ಸ್ಥಳೀಯ, ದೇಶ ಲ-ವಿದೇಶಗಳ ಪ್ರವಾಸಿಗರು, ನಾಗರೀಕರು ಸುಲಭವಾಗಿ ವಿಮಾನಯಾನ ನಡೆಸಿ, ಈ ಐತಿಹಾಸಿಕ, ಪಾರಂಪರಿಕ, ಪ್ರವಾಸೋದ್ಯಮ ತಾಣಗಳಿಗೆ ಪ್ರವಾಸ ಕೈಗೊಳ್ಳಲು ಅನುವಾಗಲಿದೆ. ತಾವು ನೀಡಿದ ವಾಗ್ದಾನದಂತೆ ವಿಮಾನ ನಿಲ್ದಾಣವು ಶೀಘ್ರವಾಗಿ ನಿರ್ಮಾಣವಾಗಿ ಕಾರ್ಯಾಚರಣೆಯೂ ಪ್ರಾರಂಭವಾಗಲಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ತಾವು ಅಭಿನಂದಿಸುವುದಾಗಿ ಡಿಸಿಎಂ ಗೋವಿಂದ ಕಾರಜೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌