ಸಿಎಂ ಪರ ಬ್ಯಾಟಿಂಗ್ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಯತ್ನಾಳ ವಾಗ್ದಾಳಿ

ವಿಜಯಪುರ: ಸಿಎಂ ಬಿ. ಎಸ್. ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಲಿಂಗಾಯಿತ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಲಿಂಗಾಯತ ನಾಯಕರು ದಿವಾಳಿಯಾಗಿದ್ದಾರೆ. ಅವರಿಗೆ ಏನು ಕಿಮ್ಮತ್ತಿಲ್ಲ. ಮಂತ್ರಿಯಾಗಬೇಕಾದರೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕಾಲು ಹಿಡಿದು ಆಗ್ತಾರೆ. ತಾಕತ್ತಿದ್ದರೇ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಎಂದು ಲಿಂಗಾಯತರ ಘೋಷಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಎಂ. ಬಿ. ಪಾಟೀಲ ಅವರರನ್ನಾದರೂ ಸಿಎಂ ಅಭ್ಯರ್ಥಿ ಎಂದು ಮಾಡಲಿ. ಸುಮ್ಮನೇ ಯಡಿಯೂರಪ್ಪ ಬಗ್ಗೆ ಇಷ್ಟೊಂದು ಕಾಳಜಿ, ಪ್ರೀತಿ ಶಾಮನೂರು ಅವರಿಗ್ಯಾಕೆ ಉಕ್ಕಿ ಹರಿಯುತ್ತಿದೆ ಎಂದು ಯತ್ನಾಳ ಅವರು ಶಾಮನೂರು ಶಿವಶಂಕರಪ್ಪ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಪ್ರೈವೆಟ್ ಲಿಮಿಟೆಡ್ ಕಂಪನಿ. ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದ್ದೆ, ಬಿಜೆಪಿ ತಟ್ಟೆಯಲ್ಲಿ ಬಿದ್ದ ನೋಣದ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಹೊಸದಾಗಿ ಯಡಿಯೂರಪ್ಪ ಮಗಳು ಮೂವರು ಮಂದಿಯ ಪ್ರವೈಟ್ ಲಿಮಿಟೆಡ್ ಇದೆ. ವೀರಶೈವ ಮಹಾಸಭೆಯಿಂದ ಬಿಜೆಪಿ ಹಾಳಾಗುತ್ತದೆ. ಯಡಿಯೂರಪ್ಪ ತೆಗೆದರೆ ಹಾಳಾಗುತ್ತೆ ಎಂದು ಹೇಳಲು ಇವರು ಯಾರು? ವೀರಶೈವ ಮಹಾಸಭಾ ಕೋಟ ಇಟ್ಟುಕೊಂಡು ಮಂತ್ರಿಯಾಗಲಿಕ್ಕೆ ಉಪಯೋಗ ತೆಗೆದುಕೊಂಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಶಾಮನೂರು ಕಾಣಿಕೆ‌ ಏನು ಇಲ್ಲ. ಯಡಿಯೂರಪ್ಪ ಪರವಾಗಿ ಮಾತನಾಡುವ ನೈತಿಕತೆ ಇವರಿಗಿಲ್ಲ ಎಂದು ಯತ್ನಾಳ ಟೀಕಿಸಿದ್ದಾರೆ.

ಬಿಜೆಪಿ‌ ನಾಯಕ ಬದಲಾವಣೆ ಮಾಡೋದು ಕೇಂದ್ರ ಹೈಕಮಾಂಡ್ ಕೈಯಲ್ಲಿದೆ. ಬಿಜೆಪಿ ನಾಯಕತ್ವದ ಬಗ್ಗೆ ಮಾತನಾಡೋಕೆ‌ ಇವರಿಬ್ಬರು ಯಾರು? ಎಂದು ಎಂ. ಬಿ. ಪಾಟೀಲ ಮತ್ತು ಶಾಮನೂರು ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. ಲಿಂಗಾಯತರ ಮೂಲಕ ಬಿಜೆಪಿಯನ್ನು ಮುಗಿಸುವುದಕ್ಕೆ ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ ಪ್ಲ್ಯಾನ್ ಮಾಡಿದ್ದಾರೆ. ಎಂ. ಬಿ. ಪಾಟೀಲ ಮತ್ತು ಶಾಮನೂರು ಶಿವಶಂಕರಪ್ಪ ಅವರಿಗೆ ಬಿಜೆಪಿ ಆಂತರಿಕ ವಿಚಾರ ಮತ್ತು ಸಿಎಂ ಪರವಾಗಿ ಮಾತನಾಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಿಟ್ಟರೆ ಲಿಂಗಾಯಿತರೆಲ್ಲರೂ ಕಾಂಗ್ರೆಸ್ಸಿಗೆ ಹೋಗಲು ಸಾಧ್ಯವಿಲ್ಲ. ರಾಜ್ಯದ ಮತದಾರರು ಜಾಣರಿದ್ದಾರೆ. ಇನ್ನೋಬ್ಬ ವೀರಶೈವ ಲಿಂಗಾಯತನನ್ನು ಸಿಎಂ ಮಾಡಿದರೆ ಅವರಿಗೇನು ತಕರಾರು? ನಿಮ್ಮ ಪಕ್ಷದಲ್ಲಿ ಏನಿದೆ ನೋಡಿಕೊಳ್ಳಿ. ನಮ್ಮ ಪಕ್ಷದಲ್ಲಿ ಯಾರನ್ನು ನಾಯಕ ಮಾಡಬೇಕು ಏನು ಎಂಬುದನ್ನು ನಮ್ಮ ಪಕ್ಷದವರು ನಿರ್ಧಾರ ಮಾಡತ್ತಾರೆ ಎಂದು ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

Leave a Reply

ಹೊಸ ಪೋಸ್ಟ್‌