ಮುದ್ದೇಬಿಹಾಳ ಸಾರಿಗೆ ಸಿಬ್ಬಂದಿ ಮಾನವೀಯತೆ- ರಾತ್ರಿಯಲ್ಲಿ ಇವರು ಮಾಡಿದ ಕಾರ್ಯವೇನು ಗೊತ್ತಾ?

ವಿಜಯಪುರ: ಬಸವ ನಾಡಿನ ಸಾರಿಗೆ ಸಿಬ್ಬಂದಿಯ ಈ ಮಾನವೀಯ ಕಾರ್ಯ ಇಲಾಖೆಯ ಗೌರವ ಕೂಡ ಹೆಚ್ಚಲು ಕಾರಣವಾಗಿದೆ. ಇವರ ಈ ಕಾರ್ಯಕ್ಕೆ ಈಗ ಜನಮೆಚ್ಚುಗೆ ವ್ಯಕ್ತವಾಗಿದ್ದು, ತಮ್ಮ ಸೇವಗೆ ಜನರಿಂದ ಸಿಕ್ಕ ಪ್ರತಿಕ್ರಿಯಿಂದ ಇಲಾಖೆಯ ಸಿಬ್ಬಂದಿಯೂ ಖುಷ್ ಆಗಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಶನಿವಾರ ರಾತ್ರಿ 10 ಗಂಟೆಯ ಸಮಯ ಸುಮಾರಿಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಒಂದೂವರೆ ತಿಂಗಳ ಹುಷಾರಿಲ್ಲದ ಮಗುವನ್ನು ತಾಯಿ ತನ್ನ ಮಡಿಲಿನಲ್ಲಿ ಮಲಗಿಸಿಕೊಂಡಿದ್ದಳು. ಈ ಮಹಿಳೆಯ ಜೊತೆ ಆಕೆಯ ತಾಯಿ ಹಾಗೂ ಗಂಡ ಕೂಡ ಇಲ್ಲಿಯೇ ಇದ್ದರು. ಆ ಬಾಣಂತಿ ಮಹಿಳೆಯ ಹೆಸರು ಶಂಕ್ರಮ್ಮ ನಾಲತವಾಡ. ಆಕೆಯ ಊರು ಯಾದಗಿರಿ ಜಿಲ್ಲೆಯ ನಾರಾಯಣಪುರ. ತನ್ನೂರಿಗೆ ತೆರಳೇಬಿಕಿದ್ದರೂ ಬಸ್ ನಿಲ್ದಾಣಕ್ಕೆ ಬಂದಾಗ ರಾತ್ರಿ 9.30ಕ್ಕೆ ಮುದ್ದೇಬಿಹಾಳದಿಂದ ನಾರಾಯಣಪುರಕ್ಕೆ ಮೊಕ್ಕಾಂ ಗೆ ಹೋಗುತ್ತಿದ್ದ ಬಸ್ಸು ಕೊರೊನಾ ಕಾರಣದಿಂದಾಗಿ ರದ್ದಾಗಿತ್ತು. ಅಷ್ಟೇ ಅಲ್ಲ, ರಾತ್ರಿ ಇದೇ ವೇಲೆ ಸೋಲಾಪುರದಿಂದ ರಾಯಚೂರಿಗೆ ಹೋಗಬೇಕಿದ್ದ ಬಸ್ಸು ಸಂಚಾರ ಕೂಡ ರದ್ದಾಗಿದ್ದು ಇವರ ಆತಂಕ ಹೆಚ್ಚಾಗಲು ಕಾರಣವಾಗಿತ್ತು.

ಇಂಥ ದುಸ್ಥಿತಿಯಲ್ಲಿ ಅನಾರೋಗ್ಯದಿಂದಿರುವ ಮಗುವಿನ ಸಮೇತ ಎಲ್ಲರೂ ಬಸ್ ನಿಲ್ದಾಣದಲ್ಲಿಯೇ ಕಾಲ ಕಲೆಯಬೇಕಾಗಿತ್ತು. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಹಸಿರು ತೋರಣ ಬಳಗದ ಸದಸ್ಯ ಮಹಾಬಲೇಶ್ವರ ಗಡೇದ ಅವರು ಮುದ್ದೇಬಿಹಾಳ ಬಸ್ ಡಿಯೋ ಮ್ಯಾನೇಜರ್ ರಾಹುಲ ಹೊನಸೂರೆ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೇ, ಬಾಣಂತಿ ಹಾಗೂ ಮಗುವನ್ನು ಅವರೂರಿಗೆ ಕಳಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಆಗ ಡಿಪೋ ಮ್ಯಾನೇಜರ್ ರಾಹುಲ ಹೊನಸೂರೆ ಅವರು ರಾತ್ರಿಯ ವೇಳೆ ಘಟಕದಲ್ಲಿ ಕರ್ತವ್ಯದ ಮೇಲಿದ್ದ ನಿಯಂತ್ರಣಾಧಿಕಾರಿ ನಿಂಗಣ್ಣ ತಳವಾರ ಅವರಿಗೆ ಸಾಧ್ಯವಾದಷ್ಟೂ ಪ್ರಯತ್ನ ಮಾಡಿ ಯಾವುದಾದರೂ ಬಸ್ ಕಳುಹಿಸುವಂತೆ ಸೂಚನೆ ನೀಡಿದ್ದಾರೆ.

ತಂಪು ಗಾಳಿಯ ಚಳಿಯಲ್ಲಿ ಪರದಾಡುತ್ತಿದ್ದ ಹಸುಗೂಸನ್ನು ನೋಡಿದ ನಿಂಗಣ್ಣ ತಳವಾರ ಅವರು ತಡ ಮಾಡದೇ ಬೇರೆ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಬೇರೆ ಊರಿನಿಂದ ಮುದ್ದೇಬಿಹಾಳಕ್ಕೆ ಮೊಕ್ಕಾಂ ಗೆ ಬಂದಿರುವ ಬಸ್ಸುಗಳ ಚಾಲಕರು ಈ ಕೆಲಸ ಮಾಡಲು ಒಪ್ಪುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಆಗ, ಬೇರೆ ಕಡೆ ಒಪ್ಪಂದದ ಮೇಲೆ (ಸಿಸಿ) ಹೊರಟಿದ್ದ ಚಾಲಕ ಆರ್. ಎಸ್. ಹೂಗಾರ ಅವರನ್ನು ಒಪ್ಪಿಸಿದ ತಳವಾರ ಅವರು ಸ್ವತಃ ಬಾಣಂತಿ ಸಮೇತ ಬಸ್ಸಿಗಾಗಿ ಕಾಯುತ್ತಿದ್ದ 13 ಜನರಿಗೆ ತಾವೇ ಟಿಕೇಟ್ ಕೊಟ್ಟು ಊರು ತಲುಪಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ನಾಲತವಾಡದ ಬಟ್ಟೆ ವ್ಯಾಪಾರಿ ಬಸಣ್ಣ ಶಿವಪ್ಪ ಮೇಗಲಮನಿ, ವಿಜಯಪುರದಿಂದ ನಾಲತವಾಡಕ್ಕೆ ಹೊಗೇಬಿಕಿದ್ದ ನಮಗೆ ಹತ್ತೇ ನಿಮಿಷದಲ್ಲಿ ಹುಬ್ಬಳ್ಳಿ ಬಸ್ಸು ತಪ್ಪಿತು, ನಾವೇನು ಎಲ್ಲಿಯಾದರೂ ವಾಸ್ತವ್ಯ ಮಾಡಬಹುದಿತ್ತು, ಆದರೆ ಬಡ ಬಾಣಂತಿ ಮತ್ತು ಮಗುವಿನ ಸ್ಥಿತಿ ಬೇರೆಯಾಗಿತ್ತು. ಅವರ ಸ್ಥಿತಿ ನೋಡಿ ಮಧ್ಯರಾತ್ರಿಯಲ್ಲಿಯೂ ಬಸ್ಸಿನ ಅನುಕೂಲ ಮಾಡಿದ ಘಟಕ ವ್ಯವಸ್ಥಾಪಕರು, ನಿಯಂತ್ರಣಾಧಿಕಾರಿ ಮತ್ತು ಚಾಲಕ ರಾಚಪ್ಪ ಹೂಗಾರ ಅವರಿಗೂ ಪುಣ್ಯ ಬರಲಿ ಎಂದು ಮನಸಾರೆ ಹಾರೈಸಿದ್ದಾರೆ.

ಮೊಕ್ಕಾಂ ಬಸ್ ಆರಂಭಿಸಲು ಮನವಿ

ಈ ಮಧ್ಯೆ, ರಾತ್ರಿ 8.30ರ ನಂತರ ನಂತರ ನಾಲತವಾಡ, ವೀರೇಶ ನಗರ, ನಾರಾಯಣಪೂರಕ್ಕೆ ಹೋಗಲು ಬಸ್ಸುಗಳಿಲ್ಲ. ಈ ಮುಂಚೆ ಇದ್ದ 9.30ರ ನಾರಾಯಣಪೂರ ವಸ್ತಿ ಬಸ್ ನ್ನು ಮತ್ತೆ ಶುರು ಮಾಡಬೇಕು. ಇದರಿಂದ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಮುಗಿಸಿ ಊರಿಗೆ ಹೋಗುವವರಿಗೆ ಅನುಕೂಲ ಆಗುತ್ತದೆ ಎಂದು ಶರಣು ಬಸಪ್ಪ ಚಿನಿವಾರ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದಾರೆ.
ಮೊಕ್ಕಾಂ ಬಸ್ ಆರಂಭಿಸಲು ಕ್ರಮ

ಈ ನಡುವೆ, ಕೊರೊನಾ ಹಿನ್ನೆಲೆಯಲ್ಲಿ ಬಹಳಷ್ಟು ಬಸ್ಸುಗಳನ್ನು ರದ್ದು ಮಾಡಲಾಗಿದೆ. ಸೋಮವಾರ ಅಥವಾ ಮಂಗಳವಾರ ಮೊ ಕ್ಕಾಂ ಬಸ್ಸುಗಳನ್ನು ಪುನಾರಂಭಿಸಲಾಗುವುದು ಎಂದು ಮುದ್ದೇಬಿಹಾಳ ಬಸ್ ಡಿಪೋ ಮ್ಯಾನೇಜರ್ ರಾಹುಲ ಹೊನಸೂರೆ ತಿಳಿಸಿದ್ದಾರೆ.

 

Leave a Reply

ಹೊಸ ಪೋಸ್ಟ್‌