ಬರದ ನಾಡಿನ ಭಗೀರಥನಿಗೆ 30ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಸನ್ಮಾನ- ಏಕೆ ಗೊತ್ತಾ?

ವಿಜಯಪುರ: ಬರದ ನಾಡಿನ ಭಗೀರಥ ಎಂದೇ ಖ್ಯಾತರಾಗಿರುವ ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರನ್ನು 30ಕ್ಕೂ ಹೆಚ್ಚು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದ್ದಾರೆ.

ವಿಜಯಪುರ ನಗರದ ಜಾಲಹಳ್ಳಿ ಮಠದಲ್ಲಿ ಜಿಲ್ಲೆಯ ಸರ್ವ ಮಠಾಧೀಶರ ಪರವಾಗಿ ಎಂ. ಬಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಕೈಗೊಂಡ ನೀರಾವರಿ ಯೋಜನೆಗಳು ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಿ ಕೋಟಿ ವೃಕ್ಷ ಅಭಿಯಾನ ಆರಂಭಿಸಿ ಬರದ ನಾಡಿನಲ್ಲಿ ಅರಣ್ಯೀಕರಣಕ್ಕೆ ನಾಂದಿ ಹಾಡಿದ್ದು ಈ ಸನ್ಮಾನಕ್ಕೆ ಪ್ರಮುಖ ಕಾರಣವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಾಲಹಳ್ಳಿಯ ಜಗದಾರಾದ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಾವಿರಾರು ಕಿಲೋಮೀಟರ್ ಉದ್ದದ ಕಾಲುವೆಗಳ ಮೂಲಕ ಕೆರೆ, ಬಾಂದಾರಗಳು ಹಾಗೂ ಹಳ್ಳ-ಕೊಳ್ಳಗಳನ್ನು ತುಂಬಿದ್ದರಿಂದ ಜಿಲ್ಲೆ ಇದೀಗ ನಂದನವನವಾಗಿ ಮಾರ್ಪಾಟ್ಟಿದೆ. ಅಂತರ್ಜಲವೂ ವೃದ್ಧಿಯಾಗಿ ರೈತರ ಆದಾಯ ಹತ್ತು ಪಟ್ಟು ಹೆಚ್ಚಿದ್ದಲ್ಲದೇ ಭೂಮಿಯ ಮೌಲ್ಯವೂ ಹೆಚ್ಚಾಗಲು ಮಾಜಿ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲರ ಕರ್ತತ್ವ ಶಕ್ತಿ ಕಾರಣ ಎಂದು ಹೇಳಿದರು.

ಪಂಚನದಿಗಳ ನಾಡು ಎಂದೇ ಖ್ಯಾತಿ ಹೊಂದಿದ ವಿಜಯಪುರ ಜಿಲ್ಲೆ ಸದಾ ಬರಗಾಲದಿಂದ ಕೂಡಿದ್ದರಿಂದ ಇಲ್ಲಿನ ಜನ ದುಡಿಯಲು ಗುಳೆ ಹೋಗುವದು ಅನಿವಾರ್ಯವಾಗಿತ್ತು. ಇದರಿಂದ ರೈತರ ಬದುಕು ತೀವ್ರ ತೊಂದರೆಯಲ್ಲಿತ್ತು. ವಿಜಯಪುರ ಜಿಲ್ಲೆಯವರೇ ಆದ ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರಿಂದಾಗಿ ಇಂದು ಬರಗಾಲ ಪ್ರದೇಶ ಎಂಬ ಹಣೆಪಟ್ಟಿ ಬದಲಾಗಲು ಕಾರಣವಾಗಿದೆ ಎಂದು ತಿಳಿಸಿದರು.

ಖೇಡಗಿ ವಿರಕ್ತಮಠದ ಶ್ರೀ ಶಿವಬಸವ ರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿಸ ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನದ ಮೂಲಕ ಜಿಲ್ಲೆಯಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸುವ ಆಂಧೋಲನಕ್ಕೆ ಎಂ. ಬಿ. ಪಾಟೀಲ ಅವರು ಚಾಲನೆ ನೀಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲಿ ಅಲ್ಲಲ್ಲಿ ನೆಡುತೋಪುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿದೆ. ಹಸಿರೀಕರಣದ ಫಲವಾಗಿ ಈಗ ನಮ್ಮ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಮಳೆಯಾಗುತ್ತಿದೆ. ಇದಕ್ಕೆ ಕೋಟಿ ವೃಕ್ಷ ಅಭಿಯಾನ ಕಾರಣ ಎನ್ನುವುದನ್ನು ಕೆಲ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.

ನಾಗಠಾಣದ ಉದಯೇಶ್ವರ ಮಠದಾಧೀಶ ಶ್ರೀ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಭಕ್ತರ ಹಿತವೇ ಮಠಾಧಿಪತಿಗಳ ಹಿತ. ಭಕ್ತರು ಚೆನ್ನಾಗಿದ್ದರೆ ಮಠಾಧಿಪತಿಗಳು ಖುಷಿಯಾಗಿರುತ್ತಾರೆ. ಇಡೀ ಜಿಲ್ಲೆಯ ಜನರ ಬದುಕನ್ನು ಬಂಗಾರಗೊಳಿಸಿದ ಎಂ. ಬಿ. ಪಾಟೀಲ ಅವರನ್ನು ಜಿಲ್ಲೆಯ ಸಮಸ್ತ ಮಠಾಧಿಪತಿಗಳ ಪರವಾಗಿ ನಾವಿಂದು ಅಭಿನಂದಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಂಥನಾಳ ವೃಷಭಲಿಂಗ ಶ್ರೀಗಳು, ಮಮದಾಪುರದ ಅಭಿನವ ಮುರುಗೇಂದ್ರ ಸ್ವಾಮೀಜಿ, ಕೋಲ್ಹಾರ ಕಲ್ಲಿನಾಥ ದೇವರು, ಮಾಗಣಗೇರಿ, ತಡವಲಗಾ, ಡವಳಗಿ, ಬಾಗೇವಾಡಿ, ಹತ್ತಳ್ಳಿ, ಗೊಳಸಾರ, ರೋಡಗಿ, ಆಲಮೇಲ, ಅರ್ಜುಣಗಿ, ಯಂಕಂಚಿ, ದೇವರಹಿಪ್ಪರಗಿ, ಅಗರಖೇಡ, ಕುಮಸಗಿ, ಅಥರ್ಗಾ, ಮಲಘಾಣ, ಜಕನೂರ, ಬೊಮ್ಮನಹಳ್ಳಿ, ಇಂಚಗೇರಿ, ಗುಂಡಕನಾಳ ಮಠದ ಶ್ರೀಗಳು ಸೇರಿದಂತೆ 30ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌