ಗಣೇಶೋತ್ಸವಕ್ಕಾಗಿ ಗುಂಡೇಟು ತಿನ್ನಲೂ ಸಿದ್ಧ- ಕೊರೊನಾ ಹೆಸರಲ್ಲಿ ನಿರ್ಬಂಧಿಗೆ ಹೆದರಲ್ಲ- ಯತ್ನಾಳ

ವಿಜಯಪುರ: ಗಣೇಶೋತ್ಸವಕ್ಜಾಗಿ ಗುಂಡೇಟು ತಿನ್ನಲೂ ಸಿದ್ಧ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕೊರೊನಾ ಹೆಸರಿನಲ್ಲಿ ನಿರ್ಬಂಧ ಹೇರಬೇಡಿ ಎಂದು ಆಲಮಟ್ಟಿಯಲ್ಲಿ ಮುಖ್ಯಮಂತ್ರಿಗಳಿಗೂ ಹೇಳಿದ್ದೇನೆ ಎಂದು ತಿಳಿಸಿದರು.

ಕೊರೊನಾ ಲಸಿಕೆ ಹಾಕುವುದರಲ್ಲಿ ವಿಜಯಪುರ ನಗರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕೊರೊನಾ 3ನೇ ಅಲೆ ನಮ್ಮ ಮೇಲೆ ಹೆಚ್ಚಿಗೆ ಪರಿಣಾಮ ಬೀರುವುದಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಆದರೂ, ಇಲ್ಲಿ ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ವಿಧಿಸುತ್ತಿದ್ದಾರೆ. ಕೊರೊನಾ ಕೇವಲ ಶನಿವಾರ ಮತ್ತು ರವಿವಾರ ಮಾತ್ರ ಬರುತ್ತದಾ? ಎಂದು ಪ್ರಶ್ನಿಸಿದರು.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ.

ಮೊದಲೇ ಜನ ಹೈರಾಣಾಗಿದ್ದಾರೆ. ಶನಿವಾರ ಮತ್ತು ರವಿವಾರ ಮಾತ್ರ ಕೊರೊನಾ ತಿರುಗಾಡುತ್ತಾ? ಸೋಮವಾರ, ಶುಕ್ರವಾರ ಬರುವುದಿಲ್ಲವಾ? ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದೀರಿ. ರಾತ್ರಿ ಮಾತ್ರ ಕೊರೊನಾ ತಿರುಗಾಡುತ್ತಾ? ಇದನ್ನು ವೈಜ್ಞಾನಿಕವಾಗಿ ಹೇಗೆ ಹೇಳುತ್ತಾರೋ ನನಗಂತೂ ಗೊತ್ತಿಲ್ಲ. ಮಾಡುವವರು ಎಲ್ಲವನ್ನೂ ಮಾಡುತ್ತಾರೆ. ಮಾಸ್ಕ್ ಕೂಡ ಧರಿಸುವುದಿಲ್ಲ. ಆದರೆ, ಗಣೇಶೋತ್ಸವಗಳಿಗೆ ನಿರ್ಬಂಧ ವಿಧಿಸುತ್ತಾರೆ. ಇಷ್ಟೇ ಜನ ಇರಬೇಕು, ಆಚರಣೆ ಹೀಗೇ ಇರಬೇಕು ಎಂದು ಹೇಳುತ್ತಾರೆ. ಇದರಲ್ಲಿ ಅರ್ಥವಿದೆಯಾ ಎಂದು ಅವರು ಪ್ರಶ್ನಿಸಿದರು.

ಸಿಎಂ ಜೊತೆ ನಡೆದ ಸಭೆಯಲ್ಲಿ ಹೇಳಿದ್ದೇನೆ. ಈ ಸಭೆಯಲ್ಲಿಯೇ ಎಸ್ಪಿ, ಡಿಸಿ ಇದ್ದಾರೆ. ಗಣೇಶೋತ್ಸವದ ಮೇಲೆ ಮಾತ್ರ ಕಾನೂನು ಮಾಡಿದರೆ ನಾನು ನಿರ್ಬಂಧ ಜಾರಿ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದ್ದೇನೆ ಎಂದು ಹೇಳಿದರು.

ನಿರ್ಬಂಧ ಉಲ್ಲಂಘಿಸಿದರೆ ಹೆಚ್ಚೆಂದರೆ ನನ್ನ ಮೇಲೆ ಗುಂಡು ಹಾಕಬಹುದು. ಆಗ ಕರ್ನಾಟಕದ ತುಂಬ ಸುದ್ದಿಯಾಗುತ್ತದೆ. ಸತ್ತರೂ ಹೆಸರು ಮಾಡಿ ಹೋಗಬೇಕು ಎಂದು ಯತ್ನಾಳ ಖಾರವಾಗಿ ಎಚ್ಚರಿಕೆ ನೀಡಿದರು.

10 ಸಾವಿರ ಜನರನ್ನು ಸೇರಿಸಿ ಸಭೆ ಮಾಡುತ್ತಿದ್ದೀರಾ. ಗಣೇಶೋತ್ಸವದ ಬಗ್ಗೆ ಮಾತ್ರ ಯಾಕೆ ಕೊರೊನಾ ನೆನಪಾಗುತ್ತದೆ. ಗಣೇಶೋತ್ಸವಕ್ಕೆ ಮಾತ್ರ ಯಾಕೆ ನಿರ್ಬಂಧ ವಿಧಿಸುತ್ತಿದ್ದೀರಾ ಎಂದು ಮುಖ್ಯಮಂತ್ರಿಯವರನ್ನು ಕೇಳಿದ್ದೇನೆ. ಹಾಕುವುದಿದ್ದರೆ ಎಲ್ಲರಿಗೂ ನಿರ್ಬಂಧ ಹಾಕಿ ಎಂದು ಹೇಳಿದ್ದೇನೆ ಎಂದು ಅವರು ತಿಳಿಸಿದರು.

ಹೀಗಾಗಿ ಗಣೇಶೋತ್ಸವಗಳಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಡಿಸಿ ಮತ್ತು ಎಸ್ಪಿಯವರಿಗೆ ಆದೇಶ ಮಾಡಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಮಾಡುವರು ಯಾರೂ ಅಂಜಬೇಡಿ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

Leave a Reply

ಹೊಸ ಪೋಸ್ಟ್‌