ಜಲಸಂಪನ್ಮೂಲ ಯೋಜನೆಗಳ ತ್ವರಿತ ಅನುಷ್ಠಾನ- ಭೂಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಲು ಸಚಿವ ಗೋವಿಂದ ಕಾರಜೋಳ ಸೂಚನೆ

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಲು ಪ್ರಮುಖವಾಗಿರುವ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಿ, ಕಾಮಗಾರಿಗಳನ್ನು ಅನುಷ್ಠಾನ ಮಾಡಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ‌ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿನೆ ನೀಡಿದ್ದಾರೆ‌.

ಕರ್ನಾಟಕ ನೀರಾವರಿ ನಿಗಮದಲ್ಲಿ ನಡೆದ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯ ನಿಗಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು‌

ಕೃಷ್ಣಾ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಗಳಡಿ ಅನುಷ್ಠಾನಗೊಳಿಸುತ್ತಿರುವ ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ, ಮಹಾದಾಯಿ ಕಣಿವೆಯ ಕಳಸಾ ಮತ್ತು ಬಂಡೂರು ನಾಲಾ ತಿರುವು ಯೋಜನೆಗಳ ನವಲಿ ಸಮತೋಲನಾ ಜಲಾಶಯ ನಿರ್ಮಾಣ, ಯೋಜನಾ ಕಾಮಗಾರಿಗಳ ಪ್ರಸ್ತುತ ಹಂತದ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವಿವರಗಳನ್ನು ಚರ್ಚೆ ನಡೆಸಿದರು.

ಮೇಕೆದಾಟು ಯೋಜನೆಯ ಪ್ರಸ್ತುತ ಹಂತದ ವಿವರಗಳನ್ನು ಹಾಗೂ ಕಾನೂನಾತ್ಮಕ ಕ್ರಮಗಳ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖವಾಗಿ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಅಗತ್ಯ ಭೂಸ್ವಾಧೀನ ಪ್ರಕರಣಗಳಿಗೆ ಆದ್ಯತೆ ಮೇಲೆ ಭೂಪರಿಹಾರ ನೀಡುವ ನಿಟ್ಟಿನಲ್ಲಿ ನಿಗಮಗಳಡಿ ಸೂಕ್ತ corpus fund ಸ್ಥಾಪಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು‌. ಭೂಸ್ವಾಧೀನ ಪ್ರಕ್ರಿಯೆಯನ್ನು ತೀವ್ರಗತಿಯಲ್ಲಿ ಜರುಗಿಸಲು ಪ್ರಮುಖವಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಮತ್ತು ಇತರೆ ಸಂಬಂಧಿತ ಅನೇಕ ಅಧಿಕಾರಿ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತಾಗಿ ಸರಕಾರದ ಅನುಮೋದನೆಗಾಗಿ ಪ್ರತ್ಯೇಕ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಚಿವರು ಸೂಚಿಸಿದರು.

ಏತ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಹಲವು ಯೋಜನೆಗಳಲ್ಲಿ ಜಾಕ್‌ವೆಲ್ ಕಂ ಪಂಪ್ ಹೌಸ್‌ಗಳ ನಿರ್ಮಾಣಗಳನ್ನು ಪೂರ್ಣಗೊಳಿಸದೇ ಪೈಪ್‌ಲೈನ್ ಅಳವಡಿಕೆಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಬಿಲ್ ಪಾವತಿ ಮಾಡುತ್ತಿರುವ ಕುರಿತು ಚರ್ಚಿಸಲ್ಪಟ್ಟು ಇನ್ನು ಮುಂದೆ ಜಾಕ್‌ವೆಲ್ ಕಂ ಪಂಪ್ ಹೌಸ್‌ನ ಶೇ.50 ರಷ್ಟು ಪ್ರಗತಿ ಸಾಧಿಸಿದ ನಂತರವಷ್ಟೇ ಪೈಪ್‌ಲೈನ್ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಈಗಾಗಲೇ ಮುಕ್ತಾಯ ಹಂತದಲ್ಲಿರುವ ಯೋಜನಾ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಲು ಸಚಿವರು ಸೂಚಿಸಿದರು.

ಇನ್ನು ಮುಂದೆ ಸೂಕ್ಷ್ಮ ನೀರಾವರಿ ಯೋಜನೆಗಳ ಬದಲಾಗಿ ಫಲಾನುಭವಿ ರೈತರ ಮತ್ತು ರೈತ ಸಮೂಹಗಳ ಜಮೀನುಗಳಡಿ ನೀರಿನ ಸಂಗ್ರಹಣ ತೊಟ್ಟಿಗಳನ್ನು ನಿರ್ಮಿಸಿ ನೀರು ಒದಗಿಸುವುದು. ಸದರಿ ಸಂಗ್ರಹಣೆಯಿಂದ ರೈತರು ತಮ್ಮ ಸ್ವಂತ ಪೈಪ್‌ಲೈನ್ ಅಳವಡಿಕೆಗಳಿಂದ ನೀರಾವರಿಗೆ ನೀರನ್ನು ಬಳಸಲು ಅವಕಾಶಗಳನ್ನು ಕಲ್ಪಿಸುವ ಕುರಿತು ಫಲಾನುಭವಿ ರೈತರ ಸರ್ವೆ ನಂಬರ್‌ಗಳಿಗೆ ಸೂಕ್ತ ಔಟ್ಲೆಟ್ ಗಳನ್ನು ನಿರ್ಮಿಸುವುದು ಮತ್ತು ಅಲ್ಲಿಂದ ರೈತರು ತಮ್ಮ ಹೊಲಗಳಿಗೆ ನೀರನ್ನು ಪಡೆಯುವ ವ್ಯವಸ್ಥೆ ಕುರಿತಾಗಿ ಸೂಕ್ತವಾಗಿ ಮಾರ್ಪಾಡುಗೊಳಿಸುವ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಗೋವಿಂದ ಕಾರಜೋಳ ಸೂಚಿಸಿದರು.

ನಿಗಮಗಳಡಿ ಅನುಷ್ಟಾನಗೊಳಿಸುತ್ತಿರುವ ಅನೇಕ ಕೆರೆ ತುಂಬಿಸುವ ಯೋಜನೆಗಳು ಮತ್ತು ಏತ ನೀರಾವರಿ ಯೋಜನೆಗಳ ಸಫಲತೆ ಕುರಿತಾಗಿ ಯೋಜನೆಗಳ ಮೌಲ್ಯಮಾಪನ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ಆದೇಶ ನಡೆಸಿದರು‌

ಈಗಾಗಲೇ ನೀರಾವರಿ ಸೌಲಭ್ಯ ಕಲ್ಪಿಸಿರುವ ಯೋಜನೆಗಳಡಿ ನೀರಾವರಿ ವಂಚಿತಗೊಂಡ suffering atchkat ನಿಖರವಾದ ಕ್ಷೇತ್ರ ಗುರುತಿಸಲು ಮತ್ತು ಈ ನಿಟ್ಟಿನಲ್ಲಿ ಸಕರಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ನಿಗಮಗಳಡಿ ನೀರಾವರಿ ಯೋಜನೆಗಳ ಅನುಷ್ಟಾನದ ಜೊತೆಗೆ ಪಾಲನೆ ಮತ್ತು ಪೋಷಣೆ ಜವಾಬ್ದಾರಿ ಹೊಂದಿದ್ದು, ನಿಗಮಗಳ ವ್ಯಾಪ್ತಿಯ ಅನೇಕ ವಿಭಾಗ ಮತ್ತು ಉಪ ವಿಭಾಗಗಳಡಿ ಕೊರತೆಯಿರುವ ಸಹಾಯಕ ಎಂಜಿನಿಯರ, ಕಿರಿಯ ಎಂಜಿನಿಯರ್ ಹುದ್ದೆಗಳನ್ನು ಚರ್ಚಿಸಲ್ಪಟ್ಟು ಪ್ರಸ್ತುತ ನಿಗಮಗಳ ಹಂತದಲ್ಲಿ ಯೋಜನಾವಾರು ಅಧೀಕ್ಷಕ ಅಭಿಯಂತರರುಗಳ ವ್ಯಾಪ್ತಿಯಲ್ಲಿನ ವಿಭಾಗ ಉಪವಿಭಾಗಗಳಡಿ ಖಾಲಿ ಇರುವ ಮಂಜೂರಾದ ಹುದ್ದೆಗೆ ಎದುರಾಗಿ ಅಲ್ಲಿಯ ಯೋಜನೆಗಳಿಗೆ trainee Engineers ಗಳ ನೇಮಕಾತಿ ಬಗ್ಗೆ ಪರಿಶೀಲಿಸಿ ನಿಗಮಗಳ ಮಂಡಳಿ ಸಭೆಯಲ್ಲಿ ಪ್ರಸ್ತಾವನೆಗಳನ್ನು ಮಂಡಿಸಲು ಸೂಚಿಸಿದರು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಅಂಗನವಾಡಿ ಕಟ್ಟಡ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ವಿದ್ಯಾರ್ಥಿಗಳ ವಸತಿ ನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ಸಚಿವ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.

ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶಸಿಂಗ್ ಮತ್ತು ಕಾರ್ಯದರ್ಶಿ ಎನ್. ಲಕ್ಷ್ಮಣರಾವ್ ಪೇಶ್ವೆ ಅವರು ಯೋಜನಾ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು

ಈ ಸಭೆಯಲ್ಲಿ ಕೆ ಎನ್‌ ಎನ್‌ ಎಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಜೈಪ್ರಕಾಶ, ಕೆ ಬಿ ಜೆ ಎನ್‌ ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಚಿಣಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌