ಕರ್ನಾಟಕ, ಕೇರಳದಲ್ಲಿ ಯೋಗ, ಆಯುರ್ವೇದ ಕಲಿಕೆಗೆ ಜಪಾನ್ ಜನರನ್ನು ಸೆಳೆಯಲು ಕ್ರಮ- ಜಪಾನ ರಾಯಭಾರ ಕಚೇರಿಯೆ ಡೆಪ್ಯೂಟಿ ಕೌನ್ಸುಲ್

ವಿಜಯಪುರ: ಭಾರತದ ಯೋಗ ಮತ್ತು ಆಯುರ್ವೇದ ವಿಶ್ವದ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಜಪಾನ ಪ್ರವಾಸಿಗರನ್ನು ಕರ್ನಾಟಕ ಮತ್ತು ಕೇರಳದಲ್ಲಿ ಯೋಗ ಮತ್ತು ಆಯುರ್ವೇದ ಕಲಿಕೆಗೆ ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿರುವ ಜಪಾನ ರಾಯಭಾರ ಕಚೇರಿಯ ಡೆಪ್ಯೂಟಿ ಕೌನ್ಸುಲ್ ಕಟ್ಸುಮಸಾ ಮರುಓ ತಿಳಿಸಿದ್ದಾರೆ.

ವಿಜಯಪುರದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ನೂತನ ಕ್ರೀಡಾ ಸಂಕೀರ್ಣ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ-ಜಪಾನ ರಾಜತಾಂತ್ರಿಕ ಸಂಬಂಧಗಳ 70ನೇ ಸ್ಥಾಪನಾ ದಿನಾಚರಣೆ ಅಂಗವಾಗಿ ಉಪನ್ಯಾಸ ನೀಡಿದ ಅವರು, ಭಾರತ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಜಪಾನ ಕೂಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಭಾರತದೊಂದಿಗಿನ ಮಧುರ ಬಾಂಧವ್ಯವನ್ನು ಸದಾ ಮುಂದುವರೆಸಲು ಬಯಸುತ್ತದೆ. ನಮ್ಮ ರಾಜತಾಂತ್ರಿಕ ಕಚೇರಿಯ ಮೂಲಕ ಸಾಂಸ್ಕೃತಿಕ ವಿನಿಯಮಯದ ಅಂಗವಾಗಿ ಸಂಸ್ಕೃತಿ, ಆಹಾರ, ಸಂಗೀತ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪರಸ್ಪರ ವಿನಿಮಯ ಮಾಡಲು ಬಯಸುತ್ತೇವೆ ಎಂದು ತಿಳಿಸಿದರು.

ಬಿ ಎಲ್ ಡಿ ಇ ಡೀಮ್ಡ್ ವಿವಿಯಲ್ಲಿ ಸ್ಪೋರ್ಟ್ ಕಾಂಪ್ಲೆಕ್ಸ್ ಉದ್ಘಾಟಿಸಿದ ಕಟ್ಸುಮಾಸಾ ಮರಾಓ.

ಮಾಜಿ ಸಚಿವ, ಬಿ. ಎಲ್. ಡಿ. ಇ. ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆ ಸಾಂಸ್ಕೃತಿಕ ಹಿರಿಮೆ ಹೊಂದಿದ್ದು, ನಮ್ಮ ರೈತರು ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುಡ್‍ಪಾರ್ಕ್‍ನಲ್ಲಿ ಜಪಾನ ತಂತ್ರಜ್ಞಾನವನ್ನು ಪರಿಚಯಿಸುವುದು ಮತ್ತು ಜಪಾನನಲ್ಲಿ ಬೆಳೆಯುವ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿ ಮತ್ತು ಮಾವು ತಳಿಗಳನ್ನು ನಮ್ಮ ಜಿಲ್ಲೆಗೆ ಪರಿಚಯಿಸಲು ಕೌನ್ಸುಲೇಟ್ ಕಚೇರಿ ಮುಂದಾಗಬೇಕು ಎಂದು ಕೋರಿದರು.

ವಿಜಯಪುರ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಜಗತ್ತಿನ ನಾನಾ ರಾಷ್ಟ್ರಗಳ ಪ್ರವಾಸಿಗರಿಗೆ ನಮ್ಮ ಭಾಗವನ್ನು ಪರಿಚಯಿಸಲು ತಮ್ಮ ತಂತ್ರಜ್ಞಾನ, ನೆರವು ಬೇಕು. ಜಗತ್ತಿನ ಜಪಾನಿನ ಪ್ರಮುಖ ಕಂಪನಿಗಳಾದ ಸೋನಿ, ಹಿಟಾಚಿ, ಪ್ಯಾನಾಸೋನಿಕ್ ಘಟಕಗಳನ್ನು ವಿಜಯಪುರದಲ್ಲಿ ಸ್ಥಾಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಸ್ಪೋರ್ಟ್ ಕಾಂಪ್ಲೆಕ್ಸ್ ಉದ್ಘಾಟಿಸಿ ಶಾಸಕ ಎಂ. ಬಿ. ಪಾಟೀಲ ಜೊತೆ ಟಿಟಿ ಆಟವಾಡಿದ ಕಟ್ಸುಮಾಸಾ ಮರಾಓ.

ಮುಂದಿನ ಎರಡು ಅಥವಾ ಮೂರು ದಶಕಗಳ ಕಾಲ ವಿಶ್ವದಲ್ಲಿ ಕೃತಕ ಬುದ್ಧಿಮತ್ತೆಗಳ ಕಾಲ ಉನ್ನತ ಸ್ಥಾನದಲ್ಲಿ ಇರಲಿದೆ. ತಮ್ಮ ಜಪಾನ ರಾಷ್ಟ್ರ ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅದರ ನೆರವು ನಮ್ಮ ವೈದ್ಯಕೀಯ ಕಾಲೇಜಿಗೆ ಮತ್ತು ಇಲ್ಲಿನ ವೈದ್ಯರಿಗೆ ದೊರೆತರೆ ಇನ್ನು ಹೆಚ್ಚಿನ ಸೇವೆಯನ್ನು ನಮ್ಮ ಭಾಗದಲ್ಲಿ ಮಾಡಲು ಸಾಧ್ಯವಾಗುತ್ತದೆ ಎಂದು ಎಂ. ಬಿ. ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ನಡೆದ ಸಂವಾದದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ವೈದ್ಯರಾದ ಡಾ. ಕುಶಾಲ ದಾಸ, ಡಾ. ಶೋಲ್ಮೋನ್ ಚೋಪಡೆ, ಡಾ. ವಿಜಯಲಕ್ಷ್ಮೀ ಹಾದಿಮನಿ, ಡಾ. ಸಯ್ಯದ ಇನಾಮದಾರ, ಡಾ. ಪ್ರಮೋದ ಬರಗಿ, ಡಾ. ಸಾಕ್ಷಿ ಭಾಟಿಯಾ ಸಂವಾದದಲ್ಲಿ ಭಾಗವಹಿಸಿದ್ದರು.

ರೂ. 6 ಕೋ. ವೆಚ್ಚದಲ್ಲಿ ಬಿ ಎಲ್ ಡಿ ಇ ಆವರಣದಲ್ಲಿ ನಿರ್ಮಿಸಿರುವ ನೂತನ ಕ್ರೀಡಾ ಸಂಕೀರ್ಣ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಜಿಮ್ ವ್ಯವಸ್ಥೆ. ಬಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ಈಜುಕೊಳ ಹೊಂದಿದೆ.

ಈ ಕಾರ್ಯಕ್ರಮದಲ್ಲಿ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ, ಸಂಸ್ಥೆಯ ನಿರ್ದೇಶಕರಾದ ಸಂಗು ಸಜ್ಜನ, ಬಸನಗೌಡ ಎಂ. ಪಾಟೀಲ, ಡಾ. ಅರುಣ ಇನಾಮದಾರ, ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌