ಕೃಷ್ಣಾ ಮೇಲ್ದಂಡೆ ಯೋಜನೆ-3 ಹಂತದ ಯೋಜನೆ ಸಾಕಾರಕ್ಕೆ ಬದ್ಧ- ಗೋವಿಂದ ಕಾರಜೋಳ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಅಲ್ಲದೇ, ಅಂತಾರಾಜ್ಯ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಅವರು ವಿಧಾನ ಪರಿಷತ್ತಿನಲ್ಲಿ ಘೋಷಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ ಸಚಿವರು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ಮತ್ತು ಇತರರು ಪ್ರಸ್ತಾಪಿಸಿದ ಅಲ್ಪ ಕಾಲಾವಧಿ ಚರ್ಚೆಗೆ ಸಚಿವರು ಉತ್ತರ ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆಯಡಿ 2013ರಿಂದ ಇಲ್ಲಿಯವರೆಗೆ ಮಾಡಲಾದ ವೆಚ್ಚದ ವಿವರಗಳನ್ನು ನೀಡಿದ ಸಚಿವರು 2013 ರಿಂದ 2018ರವರೆಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರೂ. 7728.80 ಕೋ. ಮಾತ್ರ ವೆಚ್ಚ ಮಾಡಲಾಗಿದೆ. ‌2018 ರಿಂದ 2019ರ ಜುಲೈವರೆಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೂ. 1295.50 ಕೋ. ವೆಚ್ಚ ಮಾಡಲಾಗಿದೆ. ‌ಜುಲೈ 2019ರಿಂದ ಹಾಲಿ ಸರಕಾರದ ಅವಧಿಯಲ್ಲಿ ರೂ. 3326.70 ಕೋ. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಒಂದು ಸವಾಲಾಗಿದೆ. ಏಕೆಂದರೆ ಇಲ್ಲಿ ಬಹುದೊಡ್ಡ ಪ್ರಮಾಣದ ಭೂಸ್ವಾಧೀನವಾಗಬೇಕಾಗಿದೆ 2013ರ ಹೊಸ ಭೂಸ್ವಾಧೀನ ಕಾಯಿದೆಯಿಂದ ಭೂಸ್ವಾಧೀನದ ದರ ಹೆಚ್ಚಾಗಿದೆ ‌1.34 ಲಕ್ಷ ಎಕರೆ ಭೂಸ್ವಾಧೀನ ಆಗಬೇಕಾಗಿದೆ. ಇದರಿಂದಾಗಿ ಒಟ್ಟು ರೂ. 78000 ಕೋ. ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.

ಬ್ರಿಟೀಷರ ಕಾಲದಿಂದಲೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೋರಾಟ ಪ್ರಾರಂಭವಾಗಿದ್ದು ಅಂದು ನಮ್ಮ ರಾಜ್ಯದಿಂದ ಮುಂಬೈ ಸರಕಾರದಲ್ಲಿ ಶಾಸಕರಾಗಿದ್ದ ಬಾಬು ಹುಜರೆಯವರು ಸಹ ಹೋರಾಟ ಮಾಡಿ ಜೈಲಿಗೆ ಹೋಗಿದ್ದರು. ಮುಂಬೈ ಪ್ರಾಂತದ ಅಧಿಕಾರದ ಸಂದರ್ಭದಲ್ಲಿಯೇ ಕೊಯ್ನಾ ಅಣೆಕಟ್ಟು ನಿರ್ಮಿಸಿ 37 ಟಿಎಂಸಿ ನೀರನ್ನು ತಾಳಿಕೋಟಿವರೆಗೆ ತರಲು ಯೋಜನೆ ರೂಪಿಸಲಾಗಿತ್ತು. ಅಷ್ಟರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಆಯ್ತು. ಮೈಸೂರು ಮತ್ತು ಮುಂಬೈ ಸರಕಾರಗಳು ರಚನೆಯಾದವು. ಆಗ ಮುಂಬೈ ಪ್ರಾಂತದ ಸರಕಾರ ರೂ. 2 ಕೋ. ಹಣವನ್ನು ಮೈಸೂರು ಸರಕಾರ ನೀಡಿದರೆ ನೀರಾವರಿ ಯೋಜನೆ ಕಾರ್ಯಗತಗೊಳಿಸುವುದಾಗಿ ತಿಳಿಸಿತ್ತು. ಆದರೆ ಮೈಸೂರು ಸರಕಾರ ಇದಕ್ಕೆ ಒಪ್ಪಲಿಲ್ಲ. ಒಂದು ವೇಳೆ ಒಪ್ಪಿದ್ದರೆ 40 ವರ್ಷಗಳ ಹಿಂದೆಯೇ ಅಖಂಡ ವಿಜಯಪುರ ಜಿಲ್ಲೆ ನೀರಾವರಿಯ ಸೌಲಭ್ಯ ಪಡೆಯುತ್ತಿತ್ತು ಎಂದು ಸಚಿವರು ಹಲವಾರು ವಿಷಯಗಳನ್ನು ಸದನದ ಗಮನಕ್ಕೆ ತಂದರು.

ಅದಾದ ಮೇಲೆ 1964ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರನ್ನು ಬಂಗಾರದಲ್ಲಿ ತುಲಾಭಾರ ಮಾಡಿದರೂ ಸಹ ರೂ‌ 52 ಕೋ. ವೆಚ್ಚದ ಅಂದಿನ ಆಲಮಟ್ಟಿ ಅಣೆಕಟ್ಟೆಯ ಕಾರ್ಯ ತ್ವರಿತಗತಿಯಿಂದ ಸಾಗಲಿಲ್ಲ. ಅಂತರರಾಜ್ಯ ಜಲ ವಿವಾದಗಳ ಕಾಯಿದೆಯ ಅನ್ವಯ ರಚಿತವಾಗಿದ್ದ ಕೃಷ್ಣಾ ನ್ಯಾಯಾಧಿಕರಣ-2 (ಬ್ರಿಜೇಷ್ ಕುಮಾರ್ ಆಯೋಗ) ತನ್ನ ಅಂತಿಮ ಐ-ತೀರ್ಪನ್ನು 2010ರಲ್ಲಿ ನೀಡಿದ ಮೇಲೆ 2011-12ರಲ್ಲಿಯೇ ಒಂದು ವಿಸ್ತೃತ ಯೋಜನೆ ವರದಿಯನ್ನು ಸಿದ್ದಪಡಿಸಿ 130 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಆದಾದ ನಂತರ ಹೆಚ್ಚು ಪ್ರಗತಿ ಆಗಲೇ ಇಲ್ಲ. ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವ ಸಂದರ್ಭದಲ್ಲಿ ಒಬ್ಬರೇ ಒಬ್ಬರು ಸಂತ್ರಸ್ತರು ಉಳಿಯಬಾರದು ಎಂಬ ಪ್ರಾಮಾಣಿಕ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಕಳೆದ ಹಲವಾರು ವರ್ಷಗಳಲ್ಲಿ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ. ಇದರಿಂದ ನಮ್ಮ ಸರಕಾರದ ಜವಾಬ್ದಾರಿ ದ್ವಿಗುಣವಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ ರೂ. 10 ಸಾವಿರ ಕೋ. ಖರ್ಚು ಮಾಡುವುದಾಗಿ ಅಂದಿನ ನೀರಾವರಿ ಸಚಿವರು ಘೋಷಿಸಿದ್ದರು. ಆದರೆ ಆ ಸರ್ಕಾರದ ಅವಧಿಯಲ್ಲಿ ಕೇವಲ ರೂ. 7728.80 ಕೋ. ಮಾತ್ರ ವೆಚ್ಚ ಮಾಡಲಾಗಿದೆ ಎಂದು ಸಚಿವರು ಸದನದ ಗಮನಕ್ಕೆ ತಂದರು.

ಎತ್ತಿನಹೊಳೆ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದ ಸದಸ್ಯರ ಪ್ರಶ್ನೆಗಳಿಗೆ ಉತ್ತರವಾಗಿ ಎತ್ತಿನಹೊಳೆ ಯೋಜನೆಯ ವಿವರಗಳನ್ನು ಒದಗಿಸಿದರು ಅವರು ಭೂಸ್ವಾಧೀನ ಪ್ರಕ್ರಿಯೆಯಲ್ಲಿದ್ದ ಅಡೆತಡೆಗಳೆಲ್ಲ ನಿವಾರಣೆಯಾಗುತ್ತಿದ್ದು, ಭೈರಗೊಂಡು ಜಲಾಶಯದ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆಗೆ ಏಕರೂಪದ ಪರಿಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದ ಕೆಲವು ಬದಲಾವಣೆಗಳನ್ನು ಅನಿವಾರ್ಯವಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಸದನದ ಗಮನಕ್ಕೆ ತಂದರು.

Leave a Reply

ಹೊಸ ಪೋಸ್ಟ್‌