ಮುಳುಗಡೆ ಜಮೀನು ಬೆಲೆ ಪರಿಷ್ಕರಣೆಗೆ ಆಗ್ರಹ- ಶಾಸಕ ಎಂ. ಬಿ. ಪಾಟೀಲ ನೇತೃತ್ವದಲ್ಲಿ ಕಂದಾಯ ಸಚಿವರನ್ನು ಭೇಟಿ ಮಾಡಿದ ಕೃಷ್ಣಾ ತೀರದ ರೈತರು

ಬೆಂಗಳೂರು: ಆಲಮಟ್ಟಿ ಜಲಾಷಯವನ್ನು 524.256 ಮೀ. ಎತ್ತರಿಸಿದಾಗ ಮುಳುಗಡೆಯಾಗುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಾನಾ ಗ್ರಾಮಗಳ ಜಮೀನಿಗೆ ನಿಗದಿ ಪಡಿಸಲಾಗಿರುವ ಪರಿಹಾರದ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಿಸುವಂತೆ ಆಗ್ರಹಿಸಿ ಈ ಭಾಗದ ರೈತರು ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿ ರೈತರ ನಿಯೋಗ ಕಂದಾಯ ಸಚಿವ ಆರ್. ಅಶೋಕ ಅವರನ್ನು ಭೇಟಿ ಮಾಡಿ ಆಗ್ರಹಿಸಿದರು.

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಆಣೆಕಟ್ಟನ್ನು 524.256 ಮೀ. ಎತ್ತರಿಸುವುದರಿಂದ ಅಂದಾಜು ಸುಮಾರು 14 ಗ್ರಾಮಗಳ 75 ಸಾವಿರ ಎಕರೆ ಭೂಮಿ ಮುಳುಗಡೆಯಾಗಲಿದೆ. ಇದರಿಂದಾಗಿ ಬಬಲೇಶ್ವರ ತಾಲೂಕಿನ 14 ಗ್ರಾಮಗಳು ಮುಳುಗಡೆಯಾಗಲಿವೆ. ಈ ಭೂಸ್ವಾಧೀನಕ್ಕೆ 2015-16ರಲ್ಲಿ ಮಾರ್ಗಸೂಚಿ ಬೆಲೆಯನ್ನು ನಿಗದಿ ಪಡಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ಬೀಳಗಿ ತಾಲೂಕಿನ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಮಾಡಲಾಗಿದೆ. ಆದರೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ 14 ಗ್ರಾಮಗಳ ಜಮೀನುಗಳ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ರೈತರು ಶಾಸಕ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಮಾತನಾಡಿ, ಮಾರ್ಗಸೂಚಿಯ ಬೆಲೆ ಮತ್ತು ಮುಳುಗಡೆಯಾಗಲಿರುವ ಭೂಪ್ರದೇಶಗಳ ವಿವರಗಳನ್ನು ಕಂದಾಯ ಸಚಿವರಿಗೆ ತಿಳಿಸಿದರು. ಈ ರೈತರ ಬೇಡಿಕೆ ನ್ಯಾಯಯುತವಾಗಿದ್ದು, ಮುಳುಗಡೆಯಾಗುವ ಇತರೆ ತಾಲೂಕುಗಳಿಗೆ ತಾರತಮ್ಯ ಮಾಡದೇ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ಸಂತ್ರಸ್ಥರ ಮನವಿಯನ್ನು ಸರಕಾರ ಕೂಲಕುಂಷವಾಗಿ ಪರಿಶೀಲನೆ ಮಾಡಿ ರೈತರಿಗೆ ಅನಕೂಲವಾಗುವಂತೆ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಉಪಾಧ್ಯಕ್ಷ ಎಚ್. ಆರ್. ಬಿರಾದಾರ, ಜಿ. ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಮಾಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಎಚ್. ಎಸ್. ಕೋರಡ್ಡಿ, ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ರಾಜೇಂದ್ರ ದೇಸಾಯಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಸಿದ್ದಣ್ಣ ದೇಸಾಯಿ, ರಾಮಣ್ಣ ಶೇಬಾನಿ, ವೆಂಕಣ್ಣ ಬಿದರಿ ಹಾಗೂ ಮುಖಂಡರಾದ ಪ್ರಭುಸ್ವಾಮಿ ಹಿರೇಮಠ, ಡಾ. ಎಂ. ಎಚ್. ಪಾಟೀಲ ಸೇರಿದಂತೆ ಜೈನಾಪುರ, ದೇವರ ಗೆಣ್ಣೂರ, ಶಿರಬೂರ, ಹೊಸೂರ, ಜಂಬಗಿ, ಕಣಬೂರ, ಲಿಂಗದಳ್ಳಿ ಮುಂತಾದ ಗ್ರಾಮಗಳ ರೈತ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌