ದೇಶಕ್ಕೆ ದೊಡ್ಡ ನಾಯಕರನ್ನು ಕೊಡುಗೆ ನೀಡಿದ್ದು ಹಿಂದುಳಿದ ವರ್ಗ- ಆ ನಾಯಕತ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಕುಟ ಪ್ರಾಯ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಹಿಂದುಳಿದ ವರ್ಗ ದೇಶಕ್ಕೆ ಹಲವಾರು ದೊಡ್ಡ ಮತ್ತು ಉತ್ತಮ ನಾಯಕರನ್ನು ನೀಡಿದೆ. ಅಂಥ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಮೇರು ಪಂಕ್ತಿಯಲ್ಲಿದ್ದು ಮುಕುಟಪ್ರಾಯ ಎನಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಕರ್ನಾಟಕದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯದ ಹಿಂದುಳಿದ ಸಚಿವರು, ಸಂಸದರು ಹಾಗೂ ಶಾಸಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಹಿಂದುಳಿದ ವರ್ಗದವರನ್ನು ಗುತ್ತಿಗೆ ತೆಗೆದುಕೊಂಡ ರೀತಿಯಲ್ಲಿ ಯಾವಾಗಲೂ ವರ್ತಿಸುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಆಗಮನದಿಂದ ಹಿಂದುಳಿದ ವರ್ಗದವರ ಕುರಿತಾಗಿದ್ದ ಸಾಮಾಜಿಕ ಹಾಗೂ ರಾಜಕೀಯ ಲೆಕ್ಕಾಚಾರ ಬದಲಾಗಿದೆ ಎಂದು ಅವರು ಹೇಳಿದರು.

ಹಿಂದುಳಿದ ವರ್ಗದವರು ಸರ್ವ ಸ್ವತಂತ್ರವಾಗಿ ಚಿಂತನೆ ಮಾಡಬೇಕು, ಜಾಗೃತರಾಗಬೇಕು. ನಮಗೆ ಸಾಮಾಜಿಕ ನ್ಯಾಯ ಬೇಕು, ಸಮನಾದ ಅವಕಾಶ ಕೊಡಿ ಎಂದು ಕೇಳಿ, ನಾವು ನಮ್ಮದೇ ಹಂತದಲ್ಲಿ ಬೆಳೆಯುತ್ತೇವೆ. ಆಕಾಶಕ್ಕೂ ಏಣಿ ಹಾಕುತ್ತೇವೆ. ಭಾರತೀಯ ಜನತಾ ಪಕ್ಷ ನಿಮಗೆ ಅವಕಾಶ ಕೊಡುವುದರ ಮೂಲಕ ಹಿಂದುಳಿದ ವರ್ಗದವರಿಗೆ ನೈಜವಾಗಿ, ಸಾತ್ವಿಕವಾಗಿ, ಸಾರ್ಥಕತೆ ತುಂಬಿರುವಂತಹ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಎಲ್ಲಾ ಹಿಂದುಳಿದ ನಾಯಕರ ಜೊತೆಗೆ ಚರ್ಚೆ ಮಾಡಿ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಏನೆಲ್ಲ ಕೆಲಸ ಮಾಡಬೇಕೆಂಬ ಚಿಂತನೆಯೊಂದಿಗೆ ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಯಾರಿಗೆ ನ್ಯಾಯ ಸಿಕ್ಕಿಲ್ಲವೋ ಅಂಥವರಿಗೆ ಸರಕಾರದ ವ್ಯವಸ್ಥೆಯಲ್ಲಿ ನ್ಯಾಯ ಸಿಗಬೇಕು. ಸರಕಾರದ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ವರ್ಗದವರಿಗೆ ನ್ಯಾಯ ದೊರಕುವುದಿಲ್ಲವೋ ಅಂಥ ವರ್ಗ ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತದೆ. ಆಡಳಿತಗಾರರಿಗೆ ಇದರ ಅರಿವು ಇರಬೇಕು ಎಂದು ಸಿಎಂ ಹೇಳಿದರು.

ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಪ್ರಾಬಲ್ಯತೆ ಹೆಚ್ಚಿದೆ. ಹಿಂದುಳಿದ ವರ್ಗದ ನಾಯಕತ್ವದ ಮುಕುಟಪ್ರಾಯರಾಗಿ ನರೇಂದ್ರ ಮೋದಿ ಇದ್ದಾರೆ. ನರೇಂದ್ರ ಮೋದಿಯವರು ಕೇವಲ ಹಿಂದುಳಿದ ವರ್ಗದವರೆಂದು ನಾಯಕರಾಗಿಲ್ಲ . ಅವರು ನಡೆದು ಬಂದ ದಾರಿ, ನಿರಂತರ ಸೇವೆ, ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಿಕೊಡುವ ಪರಿ, ಅವರ ಕಲ್ಯಾಣಕ್ಕಾಗಿ ಕೈಗೊಂಡ ಯೋಜನೆಗಳು ಅವರನ್ನು ನಾಯಕರನ್ನಾಗಿಸಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಎಜುಕೇಷನ್, ಎಂಪ್ಲಾಯ್ಮಂಟ್ ಹಾಗೂ ಎಂಪವರ್ಮೆಂಟ್ ಮೂರು ಇ ಗಳನ್ನು ಹಿಂದುಳಿದ ವರ್ಗದವರು ತಮ್ಮ ಜೀವನದಲ್ಲಿ ರೂಢಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಮುಖ್ಯಮಂತ್ರಿ ಅವರು ಹೇಳಿದರು.

ಕಾರ್ಯಕರ್ತರಿಗೆ ಕರೆ

ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ಇಡೀ ಕರ್ನಾಟಕದ ಹಿಂದುಳಿದ ವರ್ಗದವರ ಧ್ವನಿಯಾಗಬೇಕು. ಆಗ ಆ ವರ್ಗದ ಎಲ್ಲರಿಗೂ ನ್ಯಾಯ ಸಿಗುತ್ತದೆ. ಪಕ್ಷಕ್ಕೂ ಸಹ ಬಲ ಬರುತ್ತದೆ. ಯಾವುದೇ ಸಂದರ್ಭದಲ್ಲಿ ಹಿಂದುಳಿದ ವರ್ಗದವರಿಗೆ ಎಲ್ಲಾದರೂ ತೊಂದರೆ ಆದರೆ ಬೇರೆಯವರಿಂದ ನಮಗೆ ಮಾಹಿತಿ ದೊರೆಯುವಂತಾಗಬಾರದು. ಬದಲಾಗಿ ನಮ್ಮ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ನಮಗೆ ಮಾಹಿತಿ ತಲುಪುವಂತಾಗಬೇಕು ಮತ್ತು ಸಕಾಲದಲ್ಲಿ ಅದನ್ನು ಬಗೆಹರಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

Leave a Reply

ಹೊಸ ಪೋಸ್ಟ್‌