ಗುಡಿ ಕೈಗಾರಿಕೆಗಳಿಗೆ, ದುಡಿಯುವ ಕೈಗಳಿಗೆ ಕೆಲಸ ಸಿಕ್ಕರೆ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ನೀಡದಂತಾಗುತ್ತದೆ- ಚರಕ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ

ವಿಜಯಪುರ: ಗುಡಿ ಕೈಗಾರಿಕೆಗಳಿಗೆ, ದುಡಿಯುವ ಕೈಗಳಿಗೆ ಕೆಲಸ ಸಿಕ್ಕರೆ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಕೊಟ್ಟಂತಾಗುತ್ತದೆ. ವಿಜಯಪುರ ಜಿಲ್ಲೆ ನಿಜವಾಗಿ ಕೈ ಉತ್ಪಾದಕ ಜಿಲ್ಲೆ. ಇಲ್ಲಿಯಷ್ಟು ಕೈಮಗ್ಗಗಳು ಕರ್ನಾಟಕದ ಯಾವುದೇ ಭಾಗದಲ್ಲಿ ಇಲ್ಲ. ಇದನ್ನು ನಾವು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಚರಕ ಸಂಸ್ಥೆಯ ಮುಖ್ಯಸ್ಥ, ಹಿರಿಯ ಚಿಂತಕ ಪ್ರಸನ್ನ ಹೇಳಿದರು.

ವಿಜಯಪುರ ನಗರದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಗ್ರಾಮ ಸೇವಾ ಸಂಘ ಹೆಗ್ಗೋಡು ಸಹಯೋಗದಲ್ಲಿ ಆಯೋಜಿಸಿದ್ದ ಪವಿತ್ರ ವಸ್ತ್ರ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಳೆತನ ಮತ್ತು ಹೊಸತನ ಮದ್ಯೆ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ನಾವು ಪ್ರಯತ್ನ ಮಾಡಬೇಕು. ಆಧುನಿಕತೆ ಮತ್ತು ಸಮಕಾಲೀನತೆ ಎಂದರೆ ವಿಜ್ಞಾನ, ತಂತ್ರಜ್ಞಾನ. ಕೋವಿಡ್ ನಂತರ ಹಲವು ಪಾಠಗಳನ್ನು ನಾವು ಕಲಿತಿದ್ದೇವೆ. ನಾವು ಸರಿ ಹೋಗುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಇಂದಿನ ಹೆಣ್ಣುಮಕ್ಕಳು ಚೆನ್ನಾಗಿ ಅಡುಗೆ ಮಾಡುತ್ತೇವೆ. ಬಟ್ಟೆ, ಮುಸುರೆ ತೊಳೆಯುತ್ತೇವೆ. ಸೆಗಣಿ ಎತ್ತುತ್ತೇವೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಅದು ಅಪಮಾನ ಎಂದು ಭಾವಿಸುತ್ತೇವೆ. ಆದರೆ ವಿಜಯಪುರಕ್ಕೆ ಬಂದ ಮೇಲೆ ನನಗೆ ಗೊತ್ತಾಗಿದ್ದು ಇಲ್ಲಿನ ಹಿರಿಯ ರಾಜಕಾರಣಿ ಎಂ. ಬಿ. ಪಾಟೀಲ ಅವರ ತಾಯಿ ಕಮಲಾಬಾಯಿ ಅವರು ಇಂದಿಗೂ ಕೌದಿ ಹೊಲಿಯುತ್ತಾರೆ. ಆ ಕೌದಿಯ ಅವಶ್ಯಕತೆ ಅವರಿಗೆ ಇಲ್ಲದಿದ್ದರೂ ಹಳೆಯ ವಸ್ತುಗಳನ್ನು ಬಿಸಾಡಬಾರದು ಎಂಬುದು ನಮ್ಮ ಹಿರಿಯರ ಕಲ್ಪನೆ. ಇಂದಿನ ಕಾಲದಲ್ಲಿ ತೀರಾ ಬಡತನದಲ್ಲಿ ಇರುವವರು ಮಾತ್ರ ಕೌದಿ ಹೊಲೆಯಬೇಕು ಎನ್ನುವ ಅಭಿಪ್ರಾಯವಿದೆ. ಹಳೆಯ ಬಟ್ಟೆಯನ್ನು ತೊಡುವುದು ಎಂದರೆ ಬಡತನದ ಸಂಕೇತ ಎಂದು ಭಾವಿಸಿದ್ದೇವೆ ಎಂದು ಅವರು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕೈಮಗ್ಗ ನೇಕಾರರ ಒಕ್ಕೂಟದ ಅಧ್ಯಕ್ಷ ಸಂಗಪ್ಪ ಮಂಟೆ ಮಾತನಾಡಿ, ಸಭೆ ಸಮಾರಂಭಗಳಲ್ಲಿ ನಿಮ್ಮ ಇಷ್ಟದ ಬಟ್ಟೆ ತೊಟ್ಟುಕೊಳ್ಳಿ. ಆದರೆ ಖಾದಿ ಬಟ್ಟೆ, ಖಾದಿ ಸೀರೆಗಳನ್ನು, ಕೈಮಗ್ಗದ ಸೀರೆಗಳನ್ನು ಬಳಸುವುದು ಕಲಿಯಬೇಕು. ಕೈಮಗ್ಗ ಬೆಳೆಯಲು ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಆಶಾ ಎಂ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಡಾಕ್ ಜಂಟಿ ನಿರ್ದೇಶಕಿ ಸುಪ್ರೀಯಾ ಬಿ. ಬಳ್ಳಾರಿ ಸಸಿಗೆ ನಿರೂಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಎಂಜನಿಯರಿಂಗ್ ಕಾಲೇಜಿನ ಉಪಪ್ರಾಚಾರ್ಯ ಡಾ. ಗೀತಾಂಜಲಿ ಪಾಟೀಲ, ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಬಂದನಾ ಬ್ಯಾನರ್ಜಿ ಮುಂತಾದರವು ಉಪಸ್ಥಿತರಿದ್ದರು.

ನಾಲ್ಕು ದಿನಗಳ ಕಾಲ ಖಾದಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಬಿ ಎಲ್ ಡಿ ಇ ಆಸ್ಪತ್ರೆ ರಸ್ತೆಯ ಹಳೆಯ ಆಂಧ್ರ ಬ್ಯಾಂಕ್ ಕಟ್ಟಡದಲ್ಲಿ ಆಯೋಜಿಸಲಾಗಿದೆ.

Leave a Reply

ಹೊಸ ಪೋಸ್ಟ್‌