ತಾಳಿಕೋಟೆ ಬಳಿ ಕುಸಿತದ ಭೀತಿಯಲ್ಲಿ ಡೋಣಿ ನದಿ ಸೇತುವೆ-ಸಂಚಾರ ಸ್ಥಗಿತ

ವಿಜಯಪುರ: ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಸಂಖ್ಯೆ 61ರಲ್ಲಿರುವ ಡೋಣಿ ಸೇತುವೆ ಕುಸಿತದ ಹಂತ ತಲುಪಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ತಾಳಿಕೋಟೆ ಪಟ್ಟಣದ ಹೊರವಲಯದ ಮಿಣಜಗಿ ಕ್ರಾಸ್ ಬಳಿ ಇರುವ ಸೇತುವೆಯ ಸ್ಪ್ಯಾನ್ ನಲ್ಲಿ ಬಿರುಕು ಬಿಟ್ಟಿದ್ದು, ಈ ಸ್ಪ್ಯಾನ್ ವಾಲಿ ಕೆಳಕ್ಕೆ ಬಿಳುವ ಸ್ಥಿತಿ ತಲುಪಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿದ್ದು, ಸೇತುವೆ ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುವಂತಾಗಿದೆ.

ಕಳೆದ ಎರಡ್ಮೂರು ದಿನಗಳಿಂದ ಈ ಸೇತುವೆಯಲ್ಲಿ ರಸ್ತೆ ಕುಸಿತವಾಗುವದನ್ನು ಗಮನಿಸಿದ ಪ್ರಯಾಣಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಸಂಜೆ ಸೇತುವೆಗೆ ಆಗಮಿಸಿದ ಲೋಕಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ರಸ್ತೆಯನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೇ, ಪ್ರಯಾಣಕ್ಕೆ ಪರ್ಯಾಯ ರಸ್ತೆಯನ್ನು ಬಳಸುವಂತೆ ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ರಾತ್ರಿಯೇ ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಬಂದ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿನೆ ನೀಡಿದ್ದಾರೆ. ಈ ಮಧ್ಯೆ, ಸೇತುವೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸುವಂತೆ ತಕ್ಷಣಕ್ಕೆ ಕಾರ್ಯ ಆರಂಭಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ರಸ್ತೆ ಹುನಗುಂದ-ಸುರಪುರ ರಾಜ್ಯ ಹೆದ್ದಾರಿಗೂ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಈಗ ಏಕಾಏಕಿ ಸಂಚಾರ ಬಂದ್ ಆಗಿರುವದರಿಂದ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ. ಅಷ್ಟೇ ಅಲ್ಲ, ಹೈದರಾಬಾದ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಇದಾಗಿದೆ. ಅಲ್ಲದೇ, ತಾಳಿಕೋಟೆ ಪಟ್ಟಣದಿಂದ ಜಿಲ್ಲಾ ಕೇಂದ್ರ, ಪ್ರಮುಖ ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಇದೇ ಆಗಿದೆ. ಮಾತ್ರವಲ್ಲ, ಹಡಗಿನಾಳ, ಮೂಕಿಹಾಳ ಮೂಲಕ ಸಂಪರ್ಕ ಕಲ್ಪಿಸುವ ಮತ್ತು ಡೋಣಿ ನದಿಗೆ ನಿರ್ಮಿಸಲಾಗಿರುವ ಸೇತುವೆ ಕೆಳಮಟ್ಟದ್ದಾಗಿದ್ದು, ರಸ್ತೆಯೂ ಹದಗೆಟ್ಟಿದೆ. ಹೀಗಾಗಿ ಪರ್ಯಾಯ ರಸ್ತೆಯೂ ಇಲ್ಲವಾಗಿದೆ.

ಈಗ ತಾಳಿಕೋಟೆಯಿಂದ ವಿಜಯಪೂರಕ್ಕೆ ಹೋಗುವ ವಾಹನಗಳು ದೇವರ ಹಿಪ್ಪರಗಿ ಮಾರ್ಗವಾಗಿ ಸಂಚರಿಸಬೇಕಾಗಿದೆ. ಮುದ್ದೇಬಿಹಾಳಕ್ಕೆ ತೆರಳಲು ಮುದ್ದೇಬಿಹಾಳಕ್ಕೆ ಹೋಗಲು ಕೊಡೆಕಲ್ಲ- ನಾರಾಯಣಪುರ ರಸ್ತೆಯನ್ನು ಅವಲಂಬಿಸಬೇಕಾಗಿದೆ. ಜಿಲ್ಲೆಯಲ್ಲಿಯೇ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ತಾಳಿಕೋಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದ್ದರಿಂದ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗಲಿದೆ.

ಡೋಣಿ ನದಿಗೆ ಅಡ್ಡಲಾಗಿ ಎರಡು ದಶಕಗಳ ಹಿಂದೆ ಎರಡು ಸೇತುವೆಗಳನ್ನು ನಿರ್ಮಾಣ ಮಾಡಲಾಗಿತ್ತು. ಅದರಲ್ಲಿಯ ಒಂದು ಸೇತುವೆಯ ಕೆಳಭಾಗದಲ್ಲಿ 2014 ರಲ್ಲಿ ಬಿರುಕು ಕಾಣಿಸಿತ್ತು. ಅದನ್ನು ಮುಂಬಯಿ ಮೂಲದ ಕಂಪನಿ ದುರಸ್ಥಿಗೊಳಿಸಿತ್ತು. ಈಗ ಎರಡನೇ ಸೇತುವೆ ಬುಡದಲ್ಲಿ ಕಾಂಕ್ರೀಟ್ ಕಿತ್ತಿ ಬಿದ್ದು ಕಬ್ಬಿಣದ ರಾಡುಗಳು ಹೊರ ಬಂದಿದ್ದರಿಂದ ಸೇತುವೆ ಕುಸಿಯುವ ಹಂತ ತಲುಪಿದೆ.

ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಭೇಟಿ, ಪರಿಶೀಲನೆ

ಈ ಮಧ್ಯೆ, ಸೇತುವೆ ಕುಸಿಯುವ ಹಂತ ತಲುಪಿರುವ ಮಾಹಿತಿ ಪಡೆದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಿಜೆಪಿ ಶಾಸಕ ಮತ್ತು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸೇತುವೆಯ ಒಂದು ಪಿಲ್ಲರ ಸಂಪೂರ್ಣವಾಗಿ ಕುಸಿತವಾಗುವ ಹಂತ ತಲುಪಿದೆ. ಇದರಿಂದ ಒಂದು ಮುಖ ಸಂಚಾರವೂ ದುಸ್ತರವಾಗಿದೆ. ಈ ಸೇತುವೆ ಮೂಲಕ ಸಂಚಾರ ಸ್ಥಗಿತಗೊಳಿಸುವುದು ಉಳಿದಿರುವ ಏಕೈಕ ಮಾರ್ಗವಾಗಿದೆ. ತಾತ್ಕಾಲಿಕವಾಗಿ ಡೋಣಿ ನದಿ ಪಕ್ಕಕ್ಕೆ ರಸ್ತೆ ನಿರ್ಮಾಣ ಕಾಮಗಾರಿ ಸದ್ಯವೇ ಆರಂಭವಾಗಲಿದೆ. ಮಂಗಳವಾರ ತಜ್ಞರ ತಂಡ ಬಂದು ಸೇತುವೆಯನ್ನು ಪರಿಶೀಲಿಸಲಿದೆ. ಬಳಿಕ ತಜ್ಞರು ನೀಡುವ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಧಾರವಾಡ ವಿಭಾಗದ ಮುಖ್ಯ ಎಂಜಿನಿಯರ್ ಶಂಕರಗೌಡ ಪಾಟೀಲ, ಬೆಳಗಾವಿ ಸುಪರಿಂಟೆಂಡೆಂಟ್ ಎಂಜಿನೀಯರ ಬಿ, ವೈ. ಪವಾರ, ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ. ಎಸ್. ಹಿರೇಗೌಡರ, ವಿ. ಆರ್. ಹುಂಡೇಕಾರ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಆರ್. ಎಂ. ಹುಂಡೇಕಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌