ಕೆಎಂಎಫ್ ದೇಶದ ನಂ. 1 ಸಂಸ್ಥೆಯಾಗಿ ಬೆಳೆಯಬೇಕು- ನಂದಿನಿ‌ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಮಾಡಿ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೆಎಂಎಫ್ ದೇಶದ ನಂ. 1 ಸಂಸ್ಥೆಯಾಗಿ ಬೆಳೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕರ್ನಾಟಕ ಹಾಲು ಮಹಾಮಂಡಲದ ನೂತನ ಯೋಜನೆಗಳಿಗೆ ಚಾಲನೆ ನೀಡಿದ ಅವರು, ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

 

ಕೆಎಂಎಫ್ ಸಂಸ್ಥೆ ಇಡೀ ದೇಶದಲ್ಲಿ ನಂಬರ್ 1 ಸಂಸ್ಥೆಯಾಗಬೇಕು. ಹೊಸ ತಂತ್ರಜ್ಞಾನ ಬಳಸುವ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಿ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರಬೇಕು. ಉತ್ತರ ಕರ್ನಾಟಕದಲ್ಲಿಯೂ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ದಕ್ಷಿಣ ಕರ್ನಾಟಕದ ಮಾದರಿಯಲ್ಲಿಯೇ ಹಾಲು ಉತ್ಪಾದನೆಯಲ್ಲಿ ಅಭಿವೃದ್ಧಿ ಹೊಂದಬೇಕು. ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ನೀರಾವರಿ ಹೆಚ್ಚು ಹಸಿರನ್ನು ಹೊಂದಿರುವ ಪ್ರದೇಶ. ಹಾಲು ಉತ್ಪಾದಕರನ್ನೂ ಹಾಗೂ ಸಂಸ್ಥೆಯನ್ನೂ ರಕ್ಷಣೆ ಮಾಡಬೇಕು ಎಂದು ಹೇಳಿದರು.

 

ಹಾಲು ಮತ್ತು ಸಕ್ಕರೆಯ ಉಪ ಉತ್ಪನ್ನಗಳು ಬಹಳಷ್ಟಿವೆ. ಕೆಎಂಎಫ್‌ನ ಉತ್ಪನ್ನಗಳು ಕೂಡ ಉತ್ತಮವಾಗಿವೆ. ಹೀಗಾಗಿ ತನ್ನ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುವಂತೆ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು.

ಹಾಲಿನ‌ ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ವಿಸ್ತರಣೆ ಮಾಡಬೇಕು. ಈ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ದೊರೆತರೆ ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಮುಂದಿನ ಮೇ- ಜೂನ್ ತಿಂಗಳೊಳಗೆ 100 ಲಕ್ಷ ಲೀ. ಹಾಲು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಿ, ಅದಕ್ಕೆ ಬೇಕಾದ ಮಾರುಕಟ್ಟೆಯೂ ನಿಮಗೆ ದೊರೆಯುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು

ಆರ್ಥಿಕವಾಗಿ ನಮ್ಮ ರಾಜ್ಯ ಮುಂದೆ ಬರಬೇಕಾದರೆ ದುಡಿಮೆಯಿಂದ ಮಾತ್ರ ಸಾಧ್ಯ ಎಂದು ಹೇಳಿದ ಅವರು, ಪಿರಮಿಡ್‌ನ ತಳಹಂತದಲ್ಲಿರುವ ದುಡಿಯುವ ವರ್ಗದವರು ಅಂದರೆ ರೈತರು, ಕೂಲಿ ಕಾರ್ಮಿಕರು ನಮ್ಮ ದೇಶದ ಆರ್ಥಿಕ ಪಗ್ರತಿಗೆ ಕಾರಣೀಭೂತರು ಎಂದು ಅವರು ತಿಳಿಸಿದರು.

 

ಸಹಕಾರಿ ರಂಗ ಶಕ್ತಿಯುತ ಕ್ಷೇತ್ರ

ಸಹಕಾರಿ ರಂಗ ಬಹಳ ಶಕ್ತಿಯುತವಾದ ಕ್ಷೇತ್ರವಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಉತ್ತಮ ರೀತಿ ಸದುಪಯೋಗ ಆಗಬೇಕಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತಿ ಮಾದರಿಯಲ್ಲಿ ಸಹಕಾರಿ ರಂಗ ಶಕ್ತಿಶಾಲಿ ಆಗಬೇಕು. ಸರ್ವ ಜನರಿಗೂ ಸಮಪಾಲು ಎನ್ನುವ ಸಹಕಾರಿ ರಂಗದ ಮೂಲ ಉದ್ದೇಶಕ್ಕೆ ಯಾವ ಕಾರಣದಿಂದಲೂ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಂಡಾಗ ಮಾತ್ರ ಸಹಕಾರಿ ರಂಗಕ್ಕೆ ಅರ್ಥ ಬರುತ್ತದೆ ಎಂದು ಅವರು ಹೇಳಿದರು.

ಕೃಷಿ ಬೆಳೆದಿದೆ. ಹಸಿರು ಕ್ರಾಂತಿಯಾಗಿದೆ. 130 ಕೋಟಿ ಜನಸಂಖ್ಯೆಗೆ ಆಹಾರ ಒದಗಿಸಿಕೊಳ್ಳುವ ಸ್ವಾವಲಂಬಿ ದೇಶ ಭಾರತ. ಆದರೆ ಹಸಿರು ಕ್ರಾಂತಿಗೆ ಕಾರಣನಾದ ಅನ್ನದಾತ ಬೆಳೆದಿಲ್ಲ. ಎಲ್ಲಿದ್ದಾನೋ ಅಲ್ಲೇ ಇದ್ದಾನೆ. ಕೃಷಿಕನ ಮೇಲೆ ನಮ್ಮ ಲಕ್ಷ್ಯ ಇರಬೇಕಿದೆ ಎಂದು ಸಿಎಂ ಹೇಳಿದರು.

ಗೋ ಶಾಲೆ ನಿರ್ಮಾಣ :

ಹಾಲು ನಿರಂತರವಾಗಿ ಅವಶ್ಯಕತೆ ಇರುವಂತಹ ವಸ್ತು. ಹಾಲು ಕೊಡುವ ಗೋವಿನ ರಕ್ಷಣೆ ಕೂಡ ಅತ್ಯವಶ್ಯಕವಾಗಿದೆ. ಗೋವುಗಳು ಹಾಲು ಕೊಡುವುದನ್ನು ನಿಲ್ಲಿಸಿದಾಗಲೂ ಅದರ ರಕ್ಷಣೆ ನಮ್ಮ ನೈತಿಕ ಜವಾಬ್ದಾರಿ. ಗೋವನ್ನು ಕಸಾಯಿಖಾನೆಗೆ ನೀಡಲು ನಿಷೇದ ಹೇರಿ ಕಾನೂನು ರಚಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಿಸಲು ಬೇಕಾದ ಅನುದಾನ ನೀಡಲಾಗುವುದು. ಸರಕಾರ ಗೋಶಾಲೆ ನಿರ್ಮಾಣ ಮಾಡುತ್ತದೆ. ಅದರ ನಿರ್ವಹಣೆ, ರಕ್ಷಣೆಯ ಜವಾಬ್ದಾರಿ ಕೆಎಂಎಫ್ ತೆಗೆದುಕೊಳ್ಳಬೇಕು. ಲಾಭವೂ ಇಲ್ಲದ ನಷ್ಟವೂ ಇಲ್ಲದ ಆಧಾರದ ಮೇಲೆ ಗೋ ರಕ್ಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ, ಸಚಿವರಾದ ಎಸ್. ಟಿ. ಸೋಮಶೇಖರ, ಡಾ. ಸಿ. ಎನ್. ಅಶ್ವತ್ಥನಾರಾಯಣ, ಪ್ರಭು ಚೌಹಾಣ, ಕಲಬುರಗಿ ಬಿಜೆಪಿ ಸಂಸದ ಸಂಸದ ಉಮೇಶ್ ಜಾಧವ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌