ಆರ್ಥಿಕವಾಗಿ ದುರ್ಬಲರಾದ ಎಲ್ಲ ಜಾತಿಯವರನ್ನು ಮೇಲೆತ್ತುವ ಕೆಲಸವಾಗಬೇಕು ಎಂದ ರಂಭಾಪುರ ಶ್ರೀ

ವಿಜಯಪುರ: ಜಾತಿ ಮೀಸಲಾತಿ ನೀಡುವ ಬದಲು ಜನಪ್ರತಿನಿಧಿಗಳು ಆರ್ಥಿಕವಾಗಿ ದುರ್ಬಲವಾಗಿರುವ ಎಲ್ಲ ಜಾತಿಯವರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರ ಸೋಮೇಶ್ವರ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು ಜಾತಿ ಜಾತಿಗಳ ಮಧ್ಯೆ ಸಂಘರ್ಷವನ್ನು ಹುಟ್ಟು ಹಾಕುವ ವಿದ್ಯಮಾನಗಳು ಕೆಲವು ಭಾಗಗಳಲ್ಲಿ ನಡೆಯುತ್ತಿದೆ, ಇದು ಸರಿಯಲ್ಲ, ಯಾವುದೇ ಜಾತಿ, ಧರ್ಮಗಳಿರಲಿ. ಮೊದಲು ನಾವು ಭಾರತ ಮಾತೆಯ ಮಕ್ಕಳು ಎನ್ನುವ ಭಾವನೆ ಇರಬೇಕು. ಆರ್ಥಿಕವಾಗಿ ದುರ್ಬಲರು ಎಲ್ಲ ಜಾತಿ ಮತ್ತು ಜನಾಂಗಗಳಲ್ಲಿ ಇದ್ದಾರೆ. ಅವರನ್ನು ಮೇಲೆತ್ತುವಂಥ ಕೆಲಸ ಆಗಬೇಕಿದೆ ಹೊರತು ಜಾತಿಗಳನ್ನು ಆಧರಿಸಿ ಮೀಸಲಾತಿ ನೀಡುವುದಾಗಲಿ, ಸೌಲಭ್ಯಗಳನ್ನು ಒದಗಿಸುವುದಾಗಿ ಮಾಡಿದರೆ ಇನ್ನುಳಿದ ಜಾತಿ ಮತ್ತು ಜನಾಂಗಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಜನರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ರಾಜಕಾರಣಿಗಳು ತಾರತಮ್ಯವನ್ನು ಮಾಡದೇ ಎಲ್ಲರ ಹಿತವನ್ನು ಕಾಪಾಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ರಾಜ್ಯದಲ್ಲಿ ಯಾರೇ ಸಿಎಂ ಆದರೂ ದಕ್ಷಿಣ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಉತ್ತರ ಕರ್ನಾಟಕದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ನಿಗದಿತ ಕಾಲ ಮಿತಿಯೊಳಗೆ ಪೂರ್ಣ ಮಾಡುತ್ತಿಲ್ರಲ. ಈ ಬಗ್ಗೆ ಆಡಳಿತ ನಡೆಸುವವರು ಆಸಕ್ತಿ ವಹಿಸದಿರುವುದು ನೋವುಂಟು ಮಾಡಿದೆ ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಸಕಾಲದಲ್ಲಿ ಪೂರ್ಣವಾಗಬೇಕು. ಆಗ ಮಾತ್ರ ನೀರಾವರಿ ಸೌಲಭ್ಯ ದೊರೆತು ಈ ಭಾಗದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈ ಭಾಗದ ಅಭಿವೃದ್ಧಿಗೆ ಜಾತಿಭೇದ, ಪಕ್ಷಭೇದ ಮರೆತು ಎಲ್ಲರೂ ಕೂಡ ಹೋರಾಟ ಮಾಡಿದರೆ ಅಭಿವೃದ್ಧಿ ಸಾಧ್ಯ. ರೈತರು ಎಂಥ ಕಠಿಣ ಸ್ಥಿತಿಯಲ್ಲಿಯೂ ಕೂಡ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಛಲದಿಂದ ಕ್ರಿಯಾಶೀಲರಾಗಿ ಕಾರ್ಯೋನ್ಮುಖರಾಗಬೇಕು ಎಂದು ಅವರು ಹೇಳಿದರು.

ಇದೇ ವೇಳೆ, ಮಾಜಿ ಸಚಿವ ಎಂ. ಬಿ. ಪಾಟೀಲ ಇತ್ತೀಚೆಗೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಜಗದ್ಗುರುಗಳು, ಕಳೆದ ಚುನಾವಣೆ ಸಂದರ್ಭದಲ್ಲಿ ಸಚಿವರಾಗಿದ್ದ ಎಂ. ಬಿ. ಪಾಟೀಲ ಅವರು ಲಿಂಗಾಯತ ಧರ್ಮಗಳ ಬಗ್ಗೆ ಬೇರೆ ಬೇರೆ ರೀತಿಯ ಹೇಳಿಕೆ ನೀಡಿದ್ದರು. ಈಗ ಅವರು ಸಂಪೂರ್ಣ ಬದಲಾವಣೆಯಾಗಿ ವೀರಶೈವ ಮತ್ತು ಲಿಂಗಾಯತ ಬೇರೆ ಅಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಈ ಸಮುದಾಯವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದ್ದಾರೆ. ಅವರ ವಿಚಾರ ಧಾರೆಯನ್ನು ಮುಕ್ತಮನಸ್ಸಿನಿಂದ ಸ್ವಾಗತ ಮಾಡುತ್ತೇವೆ ಎಂದು ಸ್ವಾಮೀಜಿ ತಿಳಿಸಿದರು.

ಎಂ. ಬಿ. ಪಾಟೀಲ ಅವರ ಭಾವನೆಗಳಲ್ಲಿ ಬದಲಾವಣೆ ಆಗಿರುವುದು ರಂಭಾಪುರೀ ಜಗದ್ಗುರುಗಳಿಗೆ ಒಬ್ಬರಿಗೇ ಅಲ್ಲ ಎಲ್ಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಹಾಗೂ ಮಠಾಧೀಶರಿಗೆ ಸಮಾಧಾನ ತಂದಿದೆ. ಇದೇ ಉದ್ದೇಶವನ್ನು ಗಟ್ಟಿಯಾಗಿದ್ದುಕೊಂಡು ಸಮಾಜವನ್ನು ಧರ್ಮವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಲಿ. ಅವರಿಗೆ ಮುಂಬರುವ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ಸಿಗಲಿ ಎಂದು ರಂಭಾಪುರ ಶ್ರೀಗಳು ತಿಳಿಸಿದರು.

 

Leave a Reply

ಹೊಸ ಪೋಸ್ಟ್‌