ನಾನೇನು ಬೆಂಗಳೂರಿಂದ ದುಡ್ಡು ತಂದು ಇಲ್ಲಿ ಮುಚ್ಚಿ ಚುನಾವಣೆ ಮಾಡ್ತಿಲ್ಲ- ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಜೆಡಿಎಸ್ ಅಭ್ಯರ್ಥಿಗೆ ಸಹಾಯ ಮಾಡಲಿದ್ದಾರೆ- ಎಚ್. ಡಿ. ದೇವೇಗೌಡ

ವಿಜಯಪುರ: ಸಿಂದಗಿ ಜೆಡಿಎಸ್ ಅಭ್ಯರ್ಥಿಗೆ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಬೆಂಬಲ ಸೂಚಿಸಿದ್ಸದಾರೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಪರ ಪ್ರಚಾರಕ್ಕೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಅಬ್ಬರದ ಪ್ರಚಾರ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವು ಅಬ್ಬರದ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.  ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು ಪಕ್ಷಾಂತರ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪ್ರಚಾರ ನಂಬಿ ಹೋಗುತ್ತಿದ್ದಾರೋ ಅಥವಾ ಅವರು ನಮ್ಮ ಪಕ್ಷದವರೇ ಅಂತಾ ಹೋಗುತ್ತಿದ್ದಾರೋ ಎಂದು ಹೇಗೆ ನಿರ್ಣಯ ಮಾಡುತ್ತೀರಿ ಎಂದು ಮರು ಪ್ರಶ್ನಿಸಿದರು.

ಈ ಚುನಾವಣೆಯಲ್ಲಿ ತಾವು ಜೆಡಿಎಸ್ ಪಕ್ಷದ ಬಗ್ಗೆ ಮಾತಾನಾಡುವುದನ್ನು ಬಿಟ್ಟು ಬೇರೇನು ಮಾತನಾಡುವುದಿಲ್ಲ.  ಯಾರು ಪಕ್ಷ ತೊರೆದಿದ್ದಾರೆ.  ಯಾರು ಹೋಗುವುದಿಲ್ಲ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಮೊದಲಿಂದಲೂ ತಮ್ಮ ಪಕ್ಷವನ್ನ ತೆಗೆಯಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ.  ಅವರು ತಮ್ಮ ಕೆಲಸ ಮಾಡಲಿ.  ನಾವು ತದಾರರ ಕಡೆಗೆ‌ ಹೋಗುತ್ತೇವೆ.  ಪಕ್ಷ ಬಿಟ್ಟು ಹೋದವರ ಈಗ ಬಗ್ಗೆ ಯಾಕೆ ಮಾತನಾಡಬೇಕು.  ಆ ಬಗ್ಗೆ ತಾವು ಮಾತನಾಡಲು ಇಷ್ಟಪಡುವುದಿಲ್ಲ ಎಂದು ದೇವೇಗೌಡ ತಿಳಿಸಿದರು.

ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲವಿನ ಅಂತರ ಎಷ್ಟು ಎಂಬುದನ್ನು ಅ. 27ರ ವರೆಗೆ ಹೇಳುವುದಕ್ಕೆ ಬರುವುದಿಲ್ಲ.  ಈಗಾಗಲೇ ಪಕ್ಷದ ಅಭ್ಯರ್ಥಿಯ ಪ್ರಚಾರದ ಕಾರ್ಯತಂತ್ರದ ಕುರಿತು ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಅವರ ಮನೆಯಲ್ಲಿ ಜೆಡಿಎಸ್ ಮುಖಂಡರ ಸಭೆ ಮಾಡಿದ್ದೇನೆ.  ಇನ್ನು ಮುಂದೆ ಪ್ರಚಾರದ ವೇಗವನ್ನು ಹೇಗೆ ಹೆಚ್ಚಿಸಬೇಕು ಎಂಬುದರ ಕುರಿತು ಸಭೆ ನಡೆಸಿದ್ದೇವೆ ಎಂದು ಮಾಜಿ ಪ್ರಧಾನಿ ತಿಳಿಸಿದರು.

ನಾನೇನು ಬೆಂಗಳೂರಿಂದ ದುಡ್ಡು ತಂದು ಇಲ್ಲಿ ಮುಚ್ಚಿ ಚುನಾವಣೆ ಮಾಡುತ್ತಿಲ್ಲ.  ನಮ್ಮ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಅವರಿಗೆ ಬೆಂಬಲ ನೀಡಿದ್ದು, ಸಹಾಯ ಮಾಡುವುದಾಗಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ತಿಳಿಸಿದ್ದಾರೆ.  ಪ್ರಕಾಶ ಅಂಬೇಡ್ಕರ್ ಅವರು ನನ್ನ ಗೆಳೆಯರು.  ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿಗೆ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ.  ಈಗ ಪ್ರಕಾಶ ಅಂಬೇಡ್ಕರ ಅವರ ಪರವಾಗಿ ಮಹಾರಾಷ್ಟ್ರದಿಂದ ನಾಗೇಶ ಮಾನೆ ಈಗ ಸಿಂದಗಿಗೆ ಬಂದಿದ್ದಾರೆ.  ಜೆಡಿಎಸ್ ಅಭ್ಯರ್ಥಿಯ ಪರ ಪ್ರಚಾರ ನಡೆಸಲಿದ್ದಾರೆ ಎಂದು ಎಚ್. ಡಿ. ದೇವೇಗೌಡ ತಿಳಿಸಿದರು.

ಜೆಡಿಎಸ್ ಗೆಲುವಿಗೆ ಪ್ರಕಾಶ ಅಂಬೇಡ್ಕರ್ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.  ಅವರಿಗೆ ಧನ್ಯವಾದ ಹೇಳುತ್ತೇನೆ.  ಸಿಂದಗಿಯಲ್ಲಿ ಗೆಲ್ಲಲೇ ಬೇಕು ಎಂದು ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಇದೇ ವೇಳೆ, ಮಾತನಾಡಿದ ಪ್ರಕಾಶ ಅಂಬೇಡ್ಕರ್ ಅವರ ಸಹವರ್ತಿ ನಾಗೇಶ ಮಾನೆ, ಈ ಚುನಾವಣೆಯಲ್ಲಿ ತಾವು ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ತಿಳಿಸಿದರು.  ಅಲ್ಲದೇ, ಈ ಪ್ರಚಾರಕ್ಕೆ ಪ್ರಕಾಶ ಅಂಬೇಡ್ಕರ ಅವರಿಗೆ ಬರಲು ಆಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಸಿಂದಗಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌