ಕೆಲಸಗಾರರನ್ನು ಪ್ರೋತ್ಸಾಹಿಸಬೇಕೆ ಹೊರತು ಕಾಲೆಳೆಯಬಾರದು- ಯರನಾಳ ಶ್ರೀಗಳು

ವಿಜಯಪುರ: ಕೆಲಸ ಮಾಡುವವರನ್ನು ಬೆಂಬಲಿಸಿ ಪ್ರೊತ್ಸಾಹಿಸಬೇಕೇ ಹೊರತು ಕಾಲೆಳೆಯುವ ಕೆಲಸ ಮಾಡಬಾರದು ಎಂದು ಯರನಾಳ ಶ್ರೀ ಗುರುಸಂಗನಬಸವ ಮಹಾಸ್ವಾಮೀಜಿ ಹೇಳಿದ್ದಾರೆ.

ಇಂದು ವಿಜಯಪುರದಲ್ಲಿ ನಡೆದ ಬಿಎಲ್‍ಡಿಇ ಸಂಸ್ಥೆಯ ಸಂಸ್ಥಾಪನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಕಾಲೆಳೆಯುವ ಘಟನೆಗಳು ನಡೆಯುತ್ತಿವೆ. ಇದು ವಿಪರ್ಯಾಸ.‌‌ ಅಭಿವೃದ್ಧಿ ಕೆಲಸ ಮಾಡುವವರನ್ನು ಪ್ರೊತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.

111 ವರ್ಷಗಳ ಹಿಂದೆ ಆರಂಭವಾದ ಬಿಎಲ್‍ಡಿಇ ಸಂಸ್ಥೆ ಅಜ್ಞಾನ, ಮೌಡ್ಯ, ದಾರಿದ್ರ್ಯವನ್ನು ಹೊಗಲಾಡಿಸಲು ಜ್ಞಾನದ ದೀವಿಗೆಯಂತೆ ಕೆಲಸ ಮಾಡಿದೆ. ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯಲು ಬಂಥನಾಳ ಶಿವಯೋಗಿಗಳು, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಮತ್ತು ದಿ. ಬಿ. ಎಂ.‌ ಪಾಟೀಲ ಸಾಕಷ್ಟು ಕೊಡುಗೆ ನೀಡಿದ್ದಾರೆ. ‌ಬಂಥನಾಳ ಶಿವಯೋಗಿಗಳು ಅನಾರೋಗ್ಯದ ನಡುವೆಯು ಪ್ರವಚನಗಳ ಮೂಲಕ ಸಂಸ್ಥೆ ಕಟ್ಟಿದ್ದಾರೆ. ಡಾ. ಫ. ಗು. ಹಳಕಟ್ಟಿಯವರು ತಮ್ಮ ಆಸ್ತಿ-ಪಾಸ್ತಿ ಮಾರಾಟ ಮಾಡಿ ವಚನ ಸಾಹಿತ್ಯವನ್ನು ಸಂಗ್ರಹಿಸಿದ್ದಾರೆ. ದಿ. ಬಿ. ಎಂ. ಪಾಟೀಲ ಅವರು ಸಂಸ್ಥೆಯ ಅಭಿವೃದ್ಧಿಗಾಗಿ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ತಮಗಾಗಿ ಬದುಕುವವರನ್ನು ಸಮಾಜ ನೆನಪಿಡುವದಿಲ್ಲ. ಆದರೆ ಜನರಿಗಾಗಿ ಬದುಕುವವರನ್ನು ಸಮಾಜ ಎಂದೂ ಮರೆಯುವುದಿಲ್ಲ. ನಮ್ಮ ಬದುಕು ಇತರರಿಗೆ ಮಾದರಿಯಾಗಿರಬೇಕು ಎಂಬುದನ್ನು ಈ ತ್ರಿಮೂರ್ತಿಗಳು ಸಾಧಿಸಿ ತೋರಿಸಿದ್ದಾರೆ ಎಂದು ಅವರು ಸ್ಮರಿಸಿದರು.

ಬಂಥನಾಳ ಶಿವಯೋಗಿಗಳು, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಮತ್ತು ದಿ. ಬಿ. ಎಂ. ಪಾಟೀಲ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಎಂ. ಬಿ .ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿ ವಿಜಯಪುರ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಿ ಎಲ್ಲೆಡೆ ಹಸಿರು ಕಾಣುವಂತೆ ಮಾಡಿದ್ದಾರೆ. ಅಲ್ಲದೆ ಬಿಎಲ್‍ಡಿಇ ಸಂಸ್ಥೆಯನ್ನು ಬೆಳೆಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆಯುವಂತೆ ಮಾಡಿದ್ದಾರೆ. ಕೆಲಸ ಮಾಡುವವರಿಗೆ ದೇವರು ಸದಾ ಬೆನ್ನಹಿಂದೆ ಇರುತ್ತಾನೆ ಎಂದು ಅವರು ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಅಲ್ಲದೇ ಸಂಸ್ಥೆ ಇನ್ನು ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಬಿಎಲ್‍ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, 111 ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆ ಇಂದು ದೇಶ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಹೆಸರು ಮಾಡಿದೆ. ಅಂದು ವಿಜಯಪುರ, ಬೆಳಗಾವಿ, ಬಾಗಲಕೋಟ ಮತ್ತು ಬಳ್ಳಾರಿಗಳಲ್ಲಿ ನಾನಾ ಸ್ವಾಮೀಜಿಗಳ ನೇತೃತ್ವದಲ್ಲಿ ಆರಂಭವಾದ ಸಂಘ-ಸಂಸ್ಥೆಗಳಿಂದಾಗಿ ಇಂದು ಉತ್ತರ ಕರ್ನಾಟಕದ ಭಾಗದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಆಗಿದೆ. ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಮುಂದಾಲೋಚನೆಯಿಂದಾಗಿ ಈಗ ಈ ಭಾಗದಲ್ಲಿ ರೈತರಿಗೆ ನೀರಾವರಿ ಸೌಲಭ್ಯ ದೊರಕಿದೆ. ಅವರ ಸಮಾಜಪರ ಕಾಳಜಿಯಿಂದಾಗಿ ಇಂದು ಎಲ್ಲ ಜನರಿಗೂ ಬಿಎಲ್‍ಡಿಇ ಸಂಸ್ಥೆಯಿಂದಲೂ ಉತ್ತಮ ಸೌಲಭ್ಯಗಳು ದೊರಕುವಂತಾಗಿದೆ ಎಂದು ಹೇಳಿದರು.

ಬಿಎಲ್‍ಡಿಇ ಸಂಸ್ಥೆಯ ಕಾನೂನು ಸಲಹೆಗಾರ ಸುರೇಶ ಹಕ್ಕಿ ಮಾತನಾಡಿ, ತಾವು 1994ರಿಂದ ಬಿಎಲ್‍ಡಿಇ ಸಂಸ್ಥೆಯ ಸಂಪರ್ಕಕ್ಕೆ ಬಂದಿದ್ದು, ಅಂದಿನಿಂದ ಇಂದಿನವರೆಗೆ ಅವಲೋಕಿಸಿದಾಗ ಈ ಸಂಸ್ಥೆ ಬೃಹತ್ತಾಗಿ ಬೆಳೆದಿದೆ. ಮಾವಿನ ಮರದಂತೆ ಹಣ್ಣುಗಳನ್ನಷ್ಟೇ ಅಲ್ಲ, ನೆರಳಿನ ರೂಪದಲ್ಲಿ ಎಲ್ಲರಿಗೂ ಅನೇಕ ರೀತಿಯಲ್ಲಿ ನೆರವಾಗುತ್ತಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬಿಎಲ್‍ಡಿಇ ಸಂಸ್ಥೆಯ ಪ್ರತಿಭಾವಂತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕರ್ಣಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಂಗೀತಾ ಹಿರೇಮಠ ವಚನ ಗಾಯನ ಹೇಳಿದರು. ಬಿಎಲ್‍ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಂಸ್ಥಾ ಗೀತೆ ಹೇಳಿದರು. ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಂ. ಎಚ್. ಬಿರಾದಾರ ವಂದಿಸಿದರು. ಡಾ. ಡಿ. ಎನ್. ಧರಿ ಹಾಗೂ ಡಾ. ರೇಣುಕಾ ತೆನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌