ಭೂಕಂಪನ ಪೀಡಿತ ಪ್ರದೇಶಗಳಿಗೆ ತಜ್ಞರ ಭೇಟಿ: ಅನಗತ್ಯವಾಗಿ ಆತಂಕಕ್ಕೆ ಒಳಗಾಗದಂತೆ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ನಾನಾ ಕಡೆ ಸಂಭವಿಸುತ್ತಿರುವ ಲಘು ಭೂಕಂಪನಗಳು ಹಾಗೂ ಭೂಗರ್ಭದಿಂದ ಶಬ್ದ ಹೊರಡುತ್ತಿರುವ ಹಿನ್ನೆಲೆಯಲ್ಲಿ ಮನಗೂಳಿ, ಮಸೂತಿ ಭಾಗದ ಜನರು ಅನಗತ್ಯವಾಗಿ ಯಾವುದೇ ಆತಂಕಕ್ಕೆ ಒಳಗಾಗಬಾರದು.  ಆತ್ಮಸ್ಥೈರ್ಯದಿಂದಿದ್ದು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಬೇಕು.  ವಿಜಯಪುರ ಜಿಲ್ಲಾಡಳಿತ ನಿಮ್ಮೊಂದಿಗಿದೆ ಎಂದು ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಅವರು ಹೇಳಿದ್ದಾರೆ. 

ವಿಜಯಪುರ ಜಿಲ್ಲೆಯ ಲವೆಡೆ 2019 ರಿಂದ ಸಂಭವಿಸುತ್ತಿರುವ ಲಘು ಭೂಕಂಪನಗಳು ಹಾಗೂ ಭೂಗರ್ಭದಿಂದ ಶಬ್ದ ಹೊರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ ಜನರಲ್ಲಿ ಭೂಕಂಪನ ಜಾಗೃತಿ ಮತ್ತು ಆತ್ಮವಿಶ್ವಾಸ ವೃದ್ಧಿಯ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಆಲಮಟ್ಟಿ ಜಲಾಶಯ ಹಾಗೂ ಮಸೂತಿ ಗ್ರಾಮದಲ್ಲಿ ಎರಡು ಭೂಕಂಪನ ಮಾಪಕಗಳನ್ನು ಅಳವಡಿಸಲಾಗಿದ್ದು, ಲಘು ಭೂಕಂಪ ಸಂಭವಿಸಿದರೆ ತಕ್ಷಣವೇ ಮಾಹಿತಿ ಲಭ್ಯವಾಗುತ್ತದೆ.  ಜನರು ಯಾವುದೇ ಭಯಕ್ಕೆ ಒಳಗಾಗಬಾರದು.  ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯಲ್ಲಿ ಭೂಕಂಪ ಉಂಟಾಗುತ್ತಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತ ಕರಪತ್ರಗಳನ್ನು ಹಂಚಲಾಗುವುದು.  ಅಲ್ಲದೇ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಈ ಕಾರ್ಯಾಗಾರದಲ್ಲಿ ರಾಷ್ಟ್ರೀಯ ನಾನಾ ಸಂಸ್ಥೆಗಳಾದ ರಾಷ್ಟ್ರೀಯ ಭೌತ ಸಂಶೋಧನಾ ಸಂಸ್ಥೆ(ಹೈದರಾಬಾದ),  ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ(ಬೆಂಗಳೂರು), ಭಾರತೀಯ ವಿಜ್ಞಾನ ಸಂಸ್ಥೆ(ಬೆಂಗಳೂರು), ರಾಷ್ಟ್ರೀಯ ಶಿಲಾ ಯಾಂತ್ರಿಕತೆ ಸಂಶೋಧನಾ ಸಂಸ್ಥೆ (ಬೆಂಗಳೂರು), ರಾಷ್ಟ್ರೀಯ ಭೂಕಂಪನ ಅಧ್ಯಯನ ಸಂಸ್ಥೆ (ಹೊಸದೆಹಲಿ) ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ(ಬೆಂಗಳೂರು) ಗಳ ವಿಷಯ ತಜ್ಞರು ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಕಲಬುರಗಿ) ಮೈಸೂರು ವಿಶ್ವವಿದ್ಯಾಲಯ ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಾಜ್ಯ ಸರಕಾರದ ಅಧಿಕಾರಿಗಳು ನೀಡಿದ ವರದಿಯನ್ನಾದರಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ವಿಜ್ಞಾನಿ ಡಾ. ಬಿಜೂ ಜಾನ್ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಭೂಕಂಪನದ ಬಗ್ಗೆ ಅಧ್ಯಯನ ನಡೆಸಲು ಕಲಬುರ್ಗಿ, ಬೀದರ,  ವಿಜಯಪುರಗಳಲ್ಲಿ ವಿಜ್ಞಾನಿಗಳ ತಂಡವು ಆಗಮಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಲಘು ಭೂಕಂಪನಗಳ ಬಗ್ಗೆ ಅಧ್ಯಯನವನ್ನು ಕೈಗೊಂಡು, ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.  ಅನಗತ್ಯವಾಗಿ ಜನರು ಆತಂಕ್ಕೆ ಒಳಗಾಗದೇ ಧೈರ್ಯದಿಂದಿದ್ದು, ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ವಿಪತ್ತು ನಿರ್ವಹಣೆ ಸಂಸ್ಥೆಯ ಕನ್ಸಲ್ಟಂಟ್ ಡಾ. ಜಿ. ಎಸ್. ಶ್ರೀನಿವಾಸ್ ರೆಡ್ಡಿ, ಬೆಂಗಳೂರು ವಿಶ್ವವಿದ್ಯಾಲಯದ ಭೂಗರ್ಭ ಶಾಸ್ತ್ರ ವಿಭಾಗದ ವಿವೃತ್ತ ಉಪನ್ಯಾಸಕ ಡಾ. ಬಿ. ಸಿ. ಪ್ರಭಾಕರ, ಬೆಂಗಳೂರು ಎನ್ ಐ ಆರ್ ಎಂ ಸೈಂಟಿಸ್ಟ್ ಮತ್ತು ಹೆಡ್ ಸೆಸ್ಮೋ ಟೆಕ್ನಿಕ್ಸ್ ಡಾ. ಬಿಜು ಜಾನ್, ವಿಜ್ಞಾನಿಗಳಾದ ಡಾ. ಸುರೇಶ, ಡಾ. ರಮೀಶ ರಾಜಾ ಮೀರ್, ಅಚಾನ್ ಕೋನಯಾಕ, ಮಹಾವೀರ ಕೆ. ಎ,, ಡಾ.ತೇಜಸ್ವಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌