ಬಿಜೆಪಿ ಮೊದಲು ದಲಿತರನ್ನು ಸಿಎಂ ಮಾಡಲಿ- ಮಾಜಿ ಸಿಎಂ ಎಸ್. ಸಿದ್ಧರಾಮಯ್ಯಗೆ ದಲಿತ ಪರ ಇರುವಷ್ಟು ಕಾಳಜಿ ಬೇರಾರಿಗೂ ಇಲ್ಲ- ಎಂ. ಬಿ. ಪಾಟೀಲ

ವಿಜಯಪುರ: ಬಿಜೆಪಿ ಈಗ ಅಧಿಕಾರದಲ್ಲಿದ್ದು ಮೊದಲು ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ಬಿಜೆಪಿಗೆ ಸವಾಲು ಹಾಕಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ದಲಿತ ನಾಯಕರ ಕುರಿತು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಆಡಿರುವ ಮಾತಿನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ಧರಾಮಯ್ಯ ದಲಿತರ ಬಗ್ಗೆ ಹೇಳಿಲ್ಲ.  ದಲಿತರನ್ನು ಉಪಯೋಗಿಸಿಕೊಳ್ಳಬಾರದು ಎಂಬ ದೃಷ್ಠಿಯಿಂದ ಮಾತನಾಡಿದ್ದಾರೆ.  ದಲಿತರ ಬಗ್ಗೆ ಸಿದ್ಧರಾಮಯ್ಯ ಅವರಿಗೆ ಇರುವಷ್ಟು ಕಾಳಜಿ ಮೇಲ್ವರ್ಗ ಅಷ್ಟೇ ಅಲ್ಲ,  ದಲಿತರಿಗೂ ಇಲ್ಲ.  ಅವರು ಮುಖ್ಯಮಂತ್ರಿಯಾಗಿದ್ದಾಗ ಸರಕಾರಿ ಯೋಜನೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಶೇ. 24 ರಷ್ಟು ಹಣವನ್ನು ದಲಿತರಿಗಾಗಿ ಮೀಸಲಿಟ್ಟಿದ್ದರು.  ಅದಕ್ಕೂ ಮುಂಚೆ ರೂ. 4000 ಕೋ. ಇದ್ದ ಅನುದಾನವನ್ನು ರೂ. 25000 ಕೋ. ಗೆ ಹೆಚ್ಚಿಸಿದ್ದು ಇದೇ ಸಿದ್ಧರಾಮಯ್ಯನವರು. ವಸ್ತು ಪರಿಸ್ಥಿತಿ ಹೀಗಿರುವಾಗ ಸಿದ್ಧರಾಮಯ್ಯ ಹೇಗೆ ದಲಿತ ವಿರೋಧಿ ಹೇಗೆ ಆಗುತ್ತಾರೆ?  ಕಾನೂನು ಜಾರಿ ಮಾಡುವ ಮೂಲಕ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ನೀಡಿದ್ದಾರೆ.  ಸಿದ್ಧರಾಮಯ್ಯ ಅವರಿಗೆ ದಲಿತರ ಬಗ್ಗೆ ಇರುವಷ್ಠು ಬದ್ಧತೆ ಬೇರೆ ಯಾರಿಗೂ ಇಲ್ಲ ಎಂದು ಹೇಳಿದರು.

ಸಿದ್ಧರಾಮಯ್ಯ ದಲಿತರ ವಿರುದ್ಧ ಹೇಳಿಕೆ ನೀಡಿಲ್ಲ.  ದಲಿತರನ್ನು ಉಪಯೋಗಿಸಿಕೊಂಡು ರಾಜಕಾರಣ ಮಾಡಬಾರದು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ದಲಿತ ಸಿಎಂ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಎಂ. ಬಿ. ಪಾಟೀಲ, ಈಗ ಬಿಜೆಪಿಯವರು ಅಧಿಕಾರದಲ್ಲಿ ಇದ್ದಾರೆ.  ಅವರು ದಲಿತರನ್ನು ಸಿಎಂ ಮಾಡಿ ತೋರಿಸಲಿ.  ನಾವು ಈಗ ಅಧಿಕಾರದಲ್ಲಿ ಇಲ್ಲ.  ಕಾಂಗ್ರೆಸ್ 115 ಸ್ಥಾನ ಗೆದ್ದ ಮೇಲೆ ಆ ಮಾತು ಉದ್ಭವಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಸಿಂದಗಿ ಬೈ ಎಲೆಕ್ಷನ್ ವಿಚಾರ

ಸಿಂದಗಿ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸೋತಿದ್ದನ್ನು ತಲೆಬಾಗಿ ಒಪ್ಪಿಕೊಳ್ಳುತ್ತೇವೆ.  ಅಲ್ಲಿ ಸರಕಾರ ಯಾವ ರೀತಿ ಸಚಿವರನ್ನು ಇಟ್ಟು ಹಣದ ಹೊಳೆಯನ್ನು ಹರಿಸಿ ಈ ಬೈ ಎಲೆಕ್ಷನ್ ಗೆದ್ದಿದೆ ಎಂಬುದು ಗೊತ್ತಿದೆ.  ನಾವು ಜನರ ತೀರ್ಪನ್ನು ಒಪ್ಪುತ್ತೇವೆ.  ಈ ಹಿಂದೆ ಕಾಂಗ್ರೆಸ್ ಪಡೆದ ಮತಗಳಿಗಿಂತಲೂ ಮೂರು ಪಟ್ಟು ಹೆಚ್ಚು ಮತಗಳನ್ನು ಈ ಬಾರಿ ಪಡೆದಿದ್ದೇವೆ.  ನಮ್ಮ ಮತಗಳಿಕೆ ಪ್ರಮಾಣ ಸುಧಾರಿಸಿದೆ.  60 ಸಾವಿರಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದಿರುವುದು ಧನಾತ್ಮಕ ವಿಷಯವಾಗಿದೆ.  2023ರಲ್ಲಿ ಇದರ ಫಲ ಸಿಗಲಿದೆ.  ಆಗ ನಾವು ವಿಜಯಪುರ ಜಿಲ್ಲೆಯಲ್ಲಿ ಎಲ್ಲ ಎಂಟೂ ಕ್ಷೇತ್ರಗಳಲ್ಲಿ ಚುನಾವಣೆ ಗೆಲ್ಲುತ್ತೇವೆ ಎಂದು ಮಾಜಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ ಚುನಾವಣೆ ವಿಚಾರ

ಈಗ ವಿಧಾನ ಪರಿಷತ ಚುನಾವಣೆ ಘೋಷಣೆಯಾಗಿದೆ.  ನ. 14 ರಂದು ಬೆಂಗಳೂರಿನಲ್ಲಿ ವಿಭಾಗವಾರು ಸಭೆ ಕರೆಯಲಾಗಿದೆ.  ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ, ರಾಜ್ಯ ಕರ್ನಾಟಕ ಉಸ್ತುವಾರಿ ಸುರ್ಜೇವಾಲಾ ಅವರು ಜನಪ್ರತಿನಿಧಿಗಳ ಮತ್ತು ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಆಯ್ಕೆ ನಿರ್ಣಯ ಮಾಡಲಿದ್ದಾರೆ.  ನಂತರ ಹೈಕಮಾಂಡಿಗೆ ಪಟ್ಟಿಯನ್ನು ಕಳುಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ವಿಜಯಪುರ ಜಿಲ್ಲೆಯ ಎರಡೂ ಸ್ಥಾನಗಳನ್ನು ಈ ಹಿಂದೆ ಗೆದ್ದಿದ್ದೇವೆ.  ಈಗ ಎಷ್ಟು ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂಬುದರ ಕುರಿತು ಪಕ್ಷ ನಿರ್ಣಯ ಕೈಗೊಳ್ಳಲಿದೆ.  ನ. 14 ರಂದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಕೈಗೊಂಡು ಹೈಕಮಾಂಡಿಗೆ ಶಿಫಾರಸು ಮಾಡಲಿದ್ದಾರೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

Leave a Reply

ಹೊಸ ಪೋಸ್ಟ್‌