ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಮೇಶ ಜಾರಕಿಹೊಳಿ ನಾನು ಚರ್ಚಿಸಿದ್ದೇವೆ- ಯತ್ನಾಳ

ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮನ್ನು ಭೇಟಿ ಮಾಡಿ ಪಕ್ಷ ಬಲಪಡಿಸುವ ಮತ್ತು ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ತರುವ ಕುರಿತು ಚರ್ಚಿಸಿರುವುದಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ವಿಜಯಪುರದಲ್ಲಿ ದೂರವಾಣಿ ಮೂಲಕ ಬಸವ ನಾಡು ಜೊತೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ ಜಾರಕಿಹೊಳಿ ಮಹಾರಾಷ್ಟ್ರದ ಸಾಂಗಲಿಯಿಂದ ನೇರವಾಗಿ ನಮ್ಮ ಮನೆಗೆ ಬಂದಿದ್ದರು.  ಸುಮಾರು ಒಂದು ಗಂಟೆಗಳ ಕಾಲ ವಿಸ್ತೃತ ಚರ್ಚೆ ನಡೆಸಿದ್ದೇವೆ.  ಸಧ್ಯದ ರಾಜಕೀಯ ವಿದ್ಯಮಾನಗಳು, ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಿದ್ದೇವೆ.  ಎಲ್ಲರೂ ಪಕ್ಷ ಸಂಘಟನೆ ನಡೆಸಿ ರಾಜ್ಯದಲ್ಲಿ ಮತ್ತೋಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಕುರಿತು ಚರ್ಚೆ ನಡೆಸಿರುವುದಾಗಿ ಅವರು ತಿಳಿಸಿದರು.

ರಮೇಶ ಜಾರಕಿಹೊಳಿ ಅವರೆ ತಮಗೆ ಕರೆ ಮಾಡಿ ಮನೆಗೆ ಬರುವುದಾಗಿ ತಿಳಿಸಿದ್ದರು.  ಆಗ ಬನ್ನಿ ಎಂದು ಹೇಳಿದೆ.  ಇಬ್ಬರೂ ಕೂಡಿಕೊಂಡು ಸುಮಾರು ಒಂದು ಗಂಟೆಗಳ ಕಾಲ ನಾನಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ.  ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ.  ಸಚಿವ ಸಂಪುಟ ಯಾವಾಗ ವಿಸ್ತರಣೆಯಾಗುತ್ತೆ ಎಂಬುದರ ಬಗ್ಗೆ ತಮಗೆ ಮಾಹಿತಿಯೂ ಇಲ್ಲ.  ತಾವು ಈಗ ಬೇರೆ ಕಾರ್ಯಕ್ರಮದ ಸಲುವಾಗಿ ಸಿಂದಗಿಗೆ ತೆರಳುತ್ತಿರುವುದಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಸವ ನಾಡು ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌