ಭ್ರಷ್ಟ ಅಧಿಕಾರಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾಕಬೇಕು- ಮತಾಂತರ ಮುಂದುವರೆದರೆ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ- ಪ್ರಮೋದ ಮುತಾಲಿಕ

ವಿಜಯಪುರ: ಭ್ರಷ್ಟ ಅಧಿಕಾರಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾಕಬೇಕು.  ಅವರನ್ನು ಗಲ್ಲಿಗೇರಿಸಬೇಕು ಎಂದು ಶ್ರೀರಾ ಸೇನೆ ಸಂಸ್ಥಾಪಕ ಪ್ರಮೋ ಮುತಾಲಿಕ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಭ್ರಷ್ಟ ಅಧಿಕಾರಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾಕಬೇಕು.  ಇವರ ಹಿಂದೆ ದೊಡ್ಡ ದೊಡ್ಡ ರಾಜಕಾರಣಿಗಳಿದ್ದಾರೆ.  ಅವರನ್ನೂ ಹೊರಗೆ ಹಾಕಬೇಕು.  ಹೊರಗೆ ಇದ್ದವರು ಬಂದೂಕು, ಚಾಕು, ಚೂರಿ ಹಿಡಿದುಕೊಂಡು ಲೂಟಿ ಮಾಡುತ್ತಾರೆ.  ರಾಜಕೀಯದಲ್ಲಿ ಇದ್ದವರು ಅಧಿಕಾರಿಗಳನ್ನು ಬಳಸಿಕೊಂಡು ಲೂಟಿ ಮಾಡುತ್ತಾರೆ.  ಎಲ್ಲ ಪಕ್ಷದ ಬಹುತೇಕ ರಾಜಕಾರಣಿಗಳು ಭ್ರಷ್ಟರು, ಗೂಂಡಾಗಳಾಗಿದ್ದಾರೆ ಎಂದು ಆರೋಪಿಸಿದರು.

ಮತಾಂತರ ಮಾಡುವವರ ವಿರುದ್ಧ ಆಕ್ರೋಶ

ಇದೇ ವೇಳೆ, ಮತಾಂತರ ಮುಂದುವರೆದರೆ ಮತಾಂತರ ಮಾಡುವವರನ್ನು ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ ಎಂದು ಇದೇ ವೇಳೆ ಅವರು ಎಚ್ಚರಿಕೆ ನೀಡಿದರು.

ಹಳ್ಳಿಹಳ್ಳಿಗಳಲ್ಲಿ ಕ್ರಿಶ್ಚಿಯನ್ ಗೆ ಮತಾಂತರ ಮಾಡಲಾಗುತ್ತಿದೆ.  ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಕೂಡ ಅಧಿವೇಶನದಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ.  ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಬೇಕು.  ಇದುವರೆಗೂ ಬಡವರು, ಅನಕ್ಷರಸ್ಥರು, ಮುಂತಾದವರನ್ನು ಮತಾಂತರ ಮಾಡುತ್ತಿದ್ದರು.  ಈಗ ಎಲ್ಲ ಸಮುದಾಯ ಮತ್ತು ವರ್ಗದವರನನು ಮತಾಂತರ ಮಾಡುತ್ತಿದ್ದಾರೆ.  ದಾವಣಗೆರೆ, ಚಿತ್ರದುರ್ಗದ ಭಾಗದಲ್ಲಿ ಒಂದು ಲಕ್ಷಕ್ಕೂ ಅಧಿಕ ಲಿಂಗಾಯತರನ್ನು ಮತಾಂತರ ಮಾಡಲಾಗಿದೆ.  ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮತಾಂತರ ಆದವರನ್ನು ವಾಪಸ್ ತರುವಂತೆ ಸಮಾಜಕ್ಕೆ ಪತ್ರ ಬರೆದಿದ್ದಾರೆ.  ನಾನು ಅದನ್ನು ಸ್ವಾಗತಿಸುತ್ತೇನೆ ಎಂದು ಅವರು ತಿಳಿಸಿದರು.

ಮತಾಂತರ ಮಾಡುವುದು ದೇಶದ್ರೋಹದ ಕೆಲಸ.  ಲ್ಯಾಂಡ್ ಎನ್ನುವಂತಹದ್ದನ್ನು ಕನ್ವರ್ಟ್ ಮಾಡಿ, ಕ್ರಿಶ್ಚಿಯನ್ ಲ್ಯಾಂಡ್ ಎಂದು ಮಾಡುತ್ತಿದ್ದಾರೆ.  ವಿಜಯಪುರ ಜಿಲ್ಲೆ ಸೇರಿದಂತೆ ಹಲವೆಡೆ ತಾಂಡಾಗಳನ್ನು ಪೂರ್ತಿಯಾಗಿ ಮತಾಂತರ ಮಾಡುತ್ತಿದ್ದಾರೆ.  ಅವರನ್ನು ವಾಪಸ್ ತರುವ ಕೆಲಸ ಸೇವಾಲಾಲ್ ಸ್ವಾಮೀಜಿಗಳು ಮಾಡುತ್ತಿದ್ದಾರೆ.  ಬೀದರ ಮತ್ತು ಕಲಬುರಗಿ ಭಾಗದಲ್ಲಿ ಶೇ,. 60ರಷ್ಟು ಮಾದಿಗ ಸಮಾಜದವರನ್ನು ಮತಾಂತರ ಮಾಡಿದ್ದಾರೆ. ಮತಾಂತರ ಮಾಡುವವರಿಗೆ ಶ್ರೀರಾಮಸೇನೆ ಎಚ್ಚರಿಕೆ ನೀಡುತ್ತಿದೆ.  ಇದೇ ಕೆಲಸ ಮುಂದುವರೆಸಿದ್ರೆ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ ಎಂದು ಪ್ರಮೋದ ಮುತಾಲಿಕ ಎಚ್ಚರಿಕೆ ನೀಡಿದರು.

ಮಠಾಧೀಶರು ಮತಾಂತರ ತಡೆಯಲು ಮುಂದಾಗಬೇಕು

ಮತಾಂತರ ನಿಷೇಧ ಕಾನೂನು ರಚನೆಯಾದ ಬಳಿಕ ಅದನ್ನು ಜಾರಿಗೆ ತರುವ ಕೆಲಸವೂ ಆಗಬೇಕಿದೆ.  ಮಠಾಧೀಶರೂ ಸಹ ಮಠವನ್ನು ಬಿಟ್ಟು ಹೊರಗೆ ಬಂದು ಕೇರಿಗಳಿಗೆ ಭೇಟಿ ನೀಡಿ, ಮತಾಂತರ ಆದವರನ್ನು ವಾಪಸ್ ತರುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಮೈಕ್ ಬಳಕೆ ವಿಚಾರ

ರಾತ್ರಿ 10 ಗಂಟೆಯಿಂದ ಬೆಳಗ್ಗೆ ಆರು ಗಂಟೆಯ ವರೆಗೆ ಯಾವುದೇ ಮೈಕ್ ಬಳಸುವಂತಿಲ್ಲ ಎಂದು ಸ್ರುಪ್ರೀಂ ಕೋರ್ಟ್ ಆರ್ಡರ್ ಮಾಡಿದೆ.  ಆದರೆ, ಬೆಳಗ್ಗೆ ಐದು ಗಂಟೆಗೆ ನಮಾಜ್ ಶುರು ಆಗುತ್ತೆ.  ಇದು ನ್ಯಾಯಾಲಯ ಆದೇಶದ ಉಲ್ಲಂಘನೆಯಾಗಿದೆ.  ಆದರೆ, ಪೊಲೀಸರು, ಕಾನೂನು ಬಾಯಿ ಮುಚ್ಚಿಕೊಂಡು ಕುಂತಿವೆ.  ಸುಪ್ರೀಂ ಕೋರ್ಟ್ ಆರ್ಡರ್ ಇದೆ ಎಂದು ನಂಜನಗೂಡ ದೇವಸ್ಥಾನ ಒಡೆಯುತ್ತಾರೆ.  ಅದೇ ಸುಪ್ರೀಂ ಕೋರ್ಟ್ ಆರ್ಡರ್ ಇದ್ದರೂ ಯಾಕೆ ಮಸೀದಿಯಲ್ಲಿನ ಮೈಕ್ ಬಂದ್ ಮಾಡ್ತಿಲ್ಲ? ಈ ರೀತಿ ಕಾನೂನು ಉಲ್ಲಂಘನೆ ಆಗಿದ್ದನ್ನು ತಡೆಯಬೇಕು ಎಂದು ಈಗಾಗಲೇ ರಾಜ್ಯದ ಎಲ್ಲ ತಹಶೀಲ್ದಾರ್ ಗಳಿಗೆ ಮನವಿ ಕೊಟ್ಟಿದ್ದೇವೆ.  ಇನ್ನು ಮುಂದೆ ಎಲ್ಲ ಡಿಸಿ ಕಚೇರಿಗಳ ಎದುರು ಹೋರಾಟ ನಡೆಸಲಾಗುವುದು.  ಮುಂದಿನ ದಿನಗಳಲ್ಲಿ ಗಲಾಟೆಗಳಾಗಿ ಅನಾಹುತಗಳಾಗುವ ಮೊದಲು ಡಿಸಿಗಳು ಈ ವಿಚಾರವನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಅವರು ತಿಳಿಸಿದರು.  .

ರಾಜಕೀಯದವರು ಗೂಂಡಾಗಳು ಎಂದು ಆರೋಪ

ರಾಜಕೀಯದವರು ಗೂಂಡಾಗಳು.  ಚುನಾವಣೆ ಬಂದಾಗ ಹಿಂದೂಗಳನ್ನು ಉಪಯೋಗ ಮಾಡಿಕೊಳ್ಳುತ್ತಾರೆ.  ಹಿಂದುತ್ವಕ್ಕೆ ಹೋರಾಡಿದವರ ಮೇಲೆ ರೌಡಿಶೀಟರ್ ಕೇಸ್ ಹಾಕಲಾಗುತ್ತದೆ.  ಅದನ್ನು ತಡೆಗಟ್ಟುವುದನ್ನು ಬಿಟ್ಟು, ತಮ್ಮ ಸ್ವಾರ್ಥಕ್ಕಾಗಿ ಹಿಂದುಗಳನ್ನು ಬಳಸಿಕೊಳ್ಳುತ್ತಾರೆ.  ಹೀಗಾಗಿ ರಾಜಕಾರಣಿಗಳು ನಿಜವಾದ ಗೂಂಡಾಗಳು ಎಂದು ಅವರು ಆರೋಪಿಸಿದರು.

ಹಂಸಲೇಖ ಕುರಿತು ಪ್ರತಿಕ್ರಿಯೆ

ಹಂಸಲೇಖ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಮುತಾಲಿಕ, ಹಂಸಲೇಖ ಅವರು ದೊಡ್ಡ ವ್ಯಕ್ತಿ.  ಅಂತಹ ಶಬ್ದ ಮಾತನಾಡಬಾರದಿತ್ತು.  ಆದರೂ ಮಾತನಾಡಿದ್ದಾರೆ.  ಅದನ್ನು ಖಂಡಿಸಿದ್ದೇನೆ.  ಅವರು ಕ್ಷಮೆ ಕೇಳಿದ್ದಾರೆ.  ಹಂಸಲೇಖ ಪರವಾಗಿ ನಿಲ್ಲುವ ನಟ ಚೇತನ್ ಎಷ್ಟು ದಲಿತ ಕೇರಿಗಳಿಗೆ ಭೇಟಿ ನೀಡಿದ್ದಾರೆ? ದಲಿತರ ಪರ ನಿಮ್ಮ ಕೊಡುಗೆ ಏನು? ಇಂತಹದ್ದೆ ಅವಕಾಶಕ್ಕೆ ಕಾಯುತ್ತಿರುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.

 

Leave a Reply

ಹೊಸ ಪೋಸ್ಟ್‌