ರೂ. 2.33 ಕೋ. ಮೌಲ್ಯದ ಚಿನ್ನಾಭರಣ, ಬೈಕ್ ಮತ್ತೀತರ ವಸ್ತುಗಳನ್ನು ವಾರಸುದಾರರಿಗೆ ಮರಳಿಸಿದ ಬಸವ ನಾಡಿನ ಪೊಲೀಸರು

ವಿಜಯಪುರ: ವಿಜಯಪುರ ಜಿಲ್ಲೆಯ ಇತಿಹಾರದಲ್ಲಿ ಇದೇ ಮೊದಲ ಬಾರಿಗೆ ವಿಜಯಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಳೆದ ಒಂದು ವರ್ಷದಲ್ಲಿ ನಡೆದ 252 ನಾನಾ ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳನ್ನು ಭೇದಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಎಚ್. ಡಿ. ಆನಂದ ಕುಮಾರ, ಜಿಲ್ಲೆಯಲ್ಲಿ ನಡೆದ 252 ನಾನಾ ಕಳ್ಳತನ, ಸುಲಿಗೆ ಮತ್ತು ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 450ಕ್ಕೂ ಹೆಚ್ಚು ಜನ ಆರೋಪಿಗಳನ್ನು ಬಂಧಿಸಲಾಗಿದೆ.  ಅಲ್ಲದೇ, ಅವರ ಬಳಿಯಿದ್ದ ರೂ. 2 ಕೋಟಿ 33 ಲಕ್ಷ 17 ಸಾವಿರದ 339 ಮೌಲ್ಯದ ಚಿನ್ನಾಭರಣ, ನಾನಾ ವಾಹನಗಳು, ಜಾನುವಾರುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಮನೆ ಕಳ್ಳತನ, ದರೋಡೆ, ರಾತ್ರಿ ಕಳ್ಳತನ, ಸುಲಿಗೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ, ಮತ್ತು ಬಸವನ ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ ಜಿ. ಕೋಳೂರ ಅವರ ನೇತೃತ್ವದಲ್ಲಿ ನಾನಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವನ್ನು ನಡೆಸಿ ಈ ಪ್ರಕರಣಗಳ ಪತ್ತೆಗೆ ಸೂಚನೆ ನೀಡಲಾಗಿತ್ತು.  ಅದರಂತೆ, ಈ ತಂಡ ಈಗ ಭರ್ಜರಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿಸಿದರು.

ರೂ. 68 ಲಕ್ಷ 97 ಸಾವಿರದ 604 ಮೌಲ್ಯದ 2 ಕೆಜಿ 210 ಗ್ರಾಂ ಚಿನ್ನಾಭರಣ, ರೂ. 11 ಲಕ್ಷ 85 ಸಾವಿರದ 900 ಮೌಲ್ಯದ 4 ಕೆಜಿ 530 ಗ್ರಾಂ ಬೆಳ್ಳಿಯ ಆಭರಣ, ರೂ. 2 ಲಕ್ಷ 21 ಸಾವಿರದ 350 ನಗದು, ರೂ. 52 ಲಕ್ಷ 40 ಸಾವಿರದ 300 ಮೌಲ್ಯದ 110 ದ್ವಿಚಕ್ರ ವಾಹನಗಳು, ರೂ. 53 ಲಕ್ಷ 7 ಸಾವಿರ ಮೌಲ್ಯದ 12 ವಾಹನಗಳು, ರೂ. 7.56 ಲಕ್ಷ ಮೌಲ್ಯದ 29 ನಾನಾ ಜಾನುವಾರುಗಳು ಮತ್ತು ರೂ. 34 ಲಕ್ಷ 9 ಸಾವಿರದ 185 ಮೌಲ್ಯದ ನಾನಾ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.  ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆ, ವಿಜಯಪುರ ನಗರದ ಗೋಳಗುಮ್ಮಟ ಮತ್ತು ವಿಜಯಪುರ ಗ್ರಾಮೀಣ ವೃತ್ತದ ಪೊಲೀಸರು ಹೆಚ್ಚಿನ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಪಾಲ್ಗೋಂಡ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ ಎಸ್ಪಿ ಎಚ್. ಡಿ. ಆನಂದ ಕುಮಾರ, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ನಗದು ಬಹುಮಾನ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ, ಬಸವನ ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ ಜಿ. ಕೋಳೂರ, ಸಿಪಿಐಗಳಾದ ರವೀಂದ್ರ ನಾಯ್ಕೋಡಿ, ರಮೇಶ ಆಳೂರ, ಸಂಗಮೇಳ ಪಾಲಭಾವಿ, ಸುನೀಲ ಕಾಂಬಳೆ ಸೇರಿದಂತೆ ನಾನಾ ಸಿಪಿಐ, ಪಿ ಎಸ್ ಐ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌