ಲಿಂಗಾಯಿತ ಪಂಚಮಸಾಲಿ ಸಮಾಜವನ್ನು ಒಡೆಯಲು ಪ್ರಯತ್ನ ನಡೆದಿದೆ-ಕೂಡಲ ಸಂಗಮ ಶ್ರೀ ಅಸಮಾಧಾನ

ವಿಜಯಪುರ: ಲಿಂಗಾಯಿತ ಪಂಚಮಸಾಲಿ ಸಮಾಜವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕೆಲವು ಜನ ಪಂಚಮಸಾಲಿ ನಾಯಕರೇ ಹೋರಾಟ ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ.  ಕಿತ್ತೂರು ಚೆನ್ನಮ್ಮ ಕಾಲದಿಂದಲೂ ಪಂಚಮಸಾಲಿ ಸಮುದಾಯವನ್ನು ಒಡೆಯಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ.  ಈಗ ಕಷ್ಟಪಟ್ಟು ಪಾದಯಾತ್ರೆ ಸತ್ಯಾಗ್ರಹ ಮಾಡಿ ಸಮಾಜವನ್ನು ಒಗ್ಗೂಡಿಸಿದ್ದೇವೆ.  ಇದನ್ನು ಒಡೆಯಲು ಕೆಲವೊಂದು ಶಕ್ತಿಗಳು ಪ್ರಯತ್ನ ಮಾಡುತ್ತಿವೆ.  ಯಾರು ಏನೇ ಪ್ರಯತ್ನ ಮಾಡಿದರೂ ನಮ್ಮ ಸಮಾಜವನ್ನು ಒಡೆಯಲು ಆಗುವುದಿಲ್ಲ ಎಂದು ಹೇಳಿದರು.

ಒಳ್ಳೆಯ ಕೆಲಸ ಹಾಗೂ ಕೆಟ್ಟ ಕೆಲಸ ಮಾಡುವವರು ಯಾರು ಎಂಬುದು ಸಮಾಜದ ಜನರಿಗೆ ಗೊತ್ತು.  ಯಾವುದೇ ಗೊಂದಲಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.  ನನ್ನ ಗುರಿ ಮತ್ತು ಆಲೋಚನೆ ಇರುವುದು 2ಎ ಮೀಸಲಾತಿಗೆ ಮಾತ್ರ.  ನನಗೆ ಇರೋದು ಒಂದೇ ಉದ್ದೇ.  ನನ್ನ ಕಣ್ಣು ಕೇವಲ ಮೀಸಲಾತಿ ಹೋರಾಟ ನೋಡುತ್ತಿದೆ.  ನನ್ನ ಕಿವಿ ಮೀಸಲಾತಿ ಕೂಗು ಕೇಳುತ್ತಿದೆ.  ನನ್ನ ಹೃದಯ ನನ್ನ ಜನರ ನೋವು ತುಂಬಿಕೊಂಡಿದೆ.  ಮೀಸಲಾತಿ ಹೊರತಾಗಿ ಯಾವುದೇ ಗೊಂದಲಗಳು ನನಗೆ ಗೊತ್ತಿಲ್ಲ.  ಅದರ ಹೊರತಾಗಿ ಬೇರೆ ವಿಚಾರವಾಗಿ ನಾನು ಮಾತನಾಡಲ್ಲಾ ಎಂದು ಕೂಡಲ ಸಂಗಮ ಶ್ರೀಗಳು ಸ್ಪಷ್ಟಪಡಿಸಿದರು.

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಘೋಷಣೆ ಮಾಡಲು ಗಡುವು ನೀಡಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕೂಡಲ ಸಂಗಮ ಸ್ವಾಮೀಜಿ, ಕಳೆದ ಅಕ್ಟೋಬರ್ 1 ರವರೆಗೆ ರಾಜ್ಯ ಸರಕಾರಕ್ಕೆ ಗಡುವು ನೀಡಲಾಗಿತ್ತು.  ಅಂದೇ ಸಿಎಂ ಬಸವರಾಜ ಬೊಮ್ಮಾಯಿ ನಮ್ಮನ್ನು ಕರೆದು ಮಾತನಾಡಿದ್ದಾರೆ.  ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ಮೂರು ತಿಂಗಳೊಳಗೆ ಮೀಸಲಾತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.  ಸತ್ಯಾಗ್ರಹ ಮಾಡಬೇಡಿ, ಹೋರಾಟ ಮಾಡಿ ಎಂದು ಹೇಳಿದ್ದಾರೆ.  ಈ ದಿಸೆಯಲ್ಲಿ ನಮ್ಮ ಹೋರಾಟ ಗ್ರಾಮ ಪಂಚಾಯಿತಿ ಮಟ್ಟದಿಂದ ನಡೆಯುತ್ತಿದೆ.  ಮೀಸಲಾತಿಯನ್ನು ತ್ವರಿತವಾಗಿ ಘೋಷಣೆ ಮಾಡಲು ಸರಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಲಿಂಗಾಯಿತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಮಾಜದ ಕಾರ್ಯಕಾರಿಣಿ ಸಭೆ ನಡೆಸಲಾಗುವುದು.  ವಿಜಯಪುರ, ಬೆಳಗಾವಿ ಅಥವಾ ಬಾಗಕೋಟೆಯಲ್ಲಿ ಸಭೆ ಮಾಡುತ್ತೇವೆ.  ಶೀಘ್ರವೇ ಕಾರ್ಯಕಾರಿಣಿ ಸಭೆಯ ದಿನಾಂಕ ಘೋಷನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಹೋರಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2 ಎ ಹಾಗೂ ಇತರೆ ಸಮೂದಾಯಗಳಿಗೆ ಮೀಸಲಾತಿ ನೀಡಲು ಸರಕಾರ ವಿಳಂಭ ಮಾಡುತ್ತಿದೆ.  ನಿವೃತ್ತ ನ್ಯಾಯಮೂರ್ತಿ ಸುಭಾಷ ಆಡಿ ನೇತೃತ್ವದ ಸಮಿತಿ ರಚನೆ ಮಾಡಿರುವುದಕ್ಕೆ ನಮ್ಮ ವಿರೋಧವಿದೆ.  ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚನೆ ಮಾಡಿದ್ದು ಸರಿಯಲ್ಲ.  ಇದರಿಂದ ವಿನಾ ಕಾರಣ ವಿಳಂಭವಾಗುತ್ತಿದೆ.  ಶಾಶ್ವತ ಹಿಂದುಳಿದ ಆಯೋಗದ ಇದ್ದರೂ ಮತ್ತೊಂದು ಸಮಿತಿ ರಚನೆ ಮಾಡಿದ್ದು ತಪ್ಪು ಎಂದು ಸ್ವಾಮೀಜಿ ತಿಳಿಸಿದರು.

ಕಾನೂನಾತ್ಮಕವಾಗಿ ರಚನೆಯಾಗಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಶಾಸನಭದ್ದವಾಗಿದೆ.  ನಿವೃತ್ತ ನ್ಯಾಯಮೂರ್ತಿಗಳ ಸಮೀತಿಯ ವರದಿಗೆ ಕಾಯುವುದು ಬೇಡ.  ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿಯೇ ಅಂತಿಮ.  ಆದಷ್ಟು ಬೇಗ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ತರಿಸಿಕೊಳ್ಳಬೇಕು.  ವರದಿಯನ್ನು ತರಿಸಿಕೊಂಡು ಪಂಚಮಸಾಲಿ ಸಮಾಜಕ್ಕೆ ನ್ಯಾಯ ಕೊಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ವಾಮೀಜಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಒಳಗಾಗಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ತರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಈ ಮೂಲಕ ಪಂಚಮಸಾಲಿ ಸಮುದಾಯದ ಜನರಲ್ಲಿ ಭರವಸೆಯನ್ನಾದರೂ ಮೂಡಿಸಬೇಕು.  ವಿಕಾಸಸೌಧದಲ್ಲಿರುವ ಸುಭಾಸ ಆಡಿ ನೇತೃತ್ವದ ಸಮಿತಿಗೆ ಯಾರು ಬೇಕಾದರೂ ಮನವಿ ಸಲ್ಲಿಸಬಹುದು.  ಶಾಶ್ವತ ಹಿಂದುಳಿದ ಆಯೋಗದ ವರದಿಯೇ ಅಂತಿಮವಾಗಿದೆ.  ಆಯೋಗದ ವರದಿ ಮೂಲಕ ನ್ಯಾಯ ನೀಡಬೇಕು.  ಪಂಚಮಸಾಲಿ ತೃತೀಯ ಪೀಠದ ಸ್ಥಾಪನೆ ವಿಚಾರ ಬಗ್ಗೆ ತಮಗೆ ಏನೂ ಗೊತ್ತಿಲ್ಲ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಶಂಕರಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌