ಬೊಮ್ಮಾಯಿ ಬದಲಾವಣೆ ಮಾಡಿದರೆ ತಪ್ಪು ಸಂದೇಶ- ಬೊಮ್ಮಾಯಿ ಪರ ಮತ್ತೋಮ್ಮೆ ಸಂಸದ ರಮೇಶ ಜಿಗಜಿಣಗಿ ಭರ್ಜರಿ ಬ್ಯಾಟಿಂಗ್

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ವಿಷಯ ಕುರಿತು ಎದ್ದಿರುವ ಅಪಸ್ವರಕ್ಕೆ ಪಕ್ಷದ ವರಿಷ್ಠರ ಸ್ಪಷ್ಟ ಅಭಿಪ್ರಾಯ ಅಗತ್ಯ ಎಂಬ ಮಾತುಗಳು ಕಾರ್ಯಕರ್ತರಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.  ಈ ಹಿನ್ನೆಲೆಯಲ್ಲಿ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಅವರು ಮುಖ್ಯಮಂತ್ರಿಯಾಗಿ ಈಗ ನೂರು ದಿನಗಳು ಕಳೆದಿವೆ.  ಆಗಲೇ ಅವರನ್ನು ಬದಲಾಯಿಸುವ ಚರ್ಚೆ ನಡೆದದ್ದು ಅಸಮಾಧಾನ ಮೂಡಿಸಿದೆ ಎಂದು ತಿಳಿಸಿದ್ದಾರೆ.

ಸಿಎಂ ಬದಲಾವಣೆ ವಿಚಾರದ ಹಿಂದೆ ಯಾರಿದ್ದಾರೆಂಬುದನ್ನು ಕಂಡು ಹಿಡಿದು ಅವರ ಬಾಯಿಗೆ ಬ್ರೇಕ್ ಹಾಕುವಂತೆ ವರಿಷ್ಠರಿಗೆ ಅವರು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚೆಗೆ ಒಳಗಾಗುತ್ತಲೆ ಇರುತ್ತವೆ.  ಹಿಂದಿನ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳಾದರು.  ಈ ಅವಧಿಯಲ್ಲಿ ಬೊಮ್ಮಾಯಿ ಎರಡನೆಯವರು.  ಇದೀಗ ಅವರನ್ನು ಬದಲಾಯಿಸಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವದು ಖಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ವರಿಷ್ಠರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಸಲಹೆ ನೀಡಿರುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ,  ಪ್ರತಿ ಸಲವೂ ಹೀಗೆ ಮಾಡುತ್ತ ಹೋದರೆ ಬಿಜೆಪಿಯಲ್ಲಿ ಯಾವುದೂ ಸರಿ ಇಲ್ಲ.  ಅವರಿಗೆ ಆಡಳಿತ ನಡೆಸಲು ಬರುವದಿಲ್ಲ ಎಂಬ ಸಂದೇಶ ಸಾರ್ವಜನಿಕರಿಗೆ ರವಾನೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಲಸಿಗರು ಎಂದು ಬದಲಾವಣೆ ಮಾತನಾಡುವದು ತಪ್ಪು.  ಬಸವರಾಜ ಬೊಮ್ಮಾಯಿ ಅವರೊಂದಿಗೆ 17 ವರ್ಷಗಳ ಹಿಂದೆ ತಾವೂ ಸೇರಿದಂತೆ ಅನೇಕ ಜನತಾ ಪರಿವಾರದ ನಾಯಕರು ಬಿಜೆಪಿ ಸೇರಿದ್ದಾರೆ,   ನಾವೆಲ್ಲ ಹೊರಗಿನಿಂದ ಬಂದಿದ್ದರೂ ಬಿಜೆಪಿ ಸಿದ್ಧಾಂತಕ್ಕೆ ಬದ್ಧರಾಗಿಯೆ ಇದ್ದೇವೆ.  ಇದು ಪಕ್ಷದ ವರಿಷ್ಠರಿಗೂ ಗೊತ್ತು.  ಹೀಗಾಗಿ ಬಸವರಾಜ ಬೊಮ್ಮಾಯಿ ಬದಲಾವಣೆ ವಿಷಯ ಸಾಕಷ್ಟು ಅಸಮಾಧಾನಕ್ಕೂ ಕಾರಣವಾಗಲಿದೆ.  ಅಲ್ಲದೇ, ಬಿಜೆಪಿ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗಲಿದೆ.  ಇದು ಪಕ್ಷದ ಭವಿಷ್ಯಕ್ಕೆ ಕುಂದು ತರಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿಜಯಪುರ ಬಿಜೆಪಿ ಹಿರಿಯ ಸಂಸದ ಮತ್ತು ಪ್ರಬಲ ದಲಿತ ಸಂಸದರೂ ಆಗಿರುವ ರಮೇಶ ಜಿಗಜಿಣಗಿ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆಯೂ ಕೂಡ ಮೂಲ ಮತ್ತು ವಲಸಿಗರು ಎಂದು ಬಿಜೆಪಿಯಲ್ಲಿ ಶೀತಲ ಸಮರ ನಡೆದಾಗ ಇದೇ ರಮೇಶ ಜಿಗಜಿಣಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದರು.  ಈಗ ಮತ್ತೋಮ್ಮೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಬೆನ್ನಿಗೆ ರಮೇಶ ಜಿಗಜಿಣಗಿ ನಿಂತಿದ್ದಾರೆ.

Leave a Reply

ಹೊಸ ಪೋಸ್ಟ್‌