ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಕೆ. ಎಸ್. ಈಶ್ವರಪ್ಪ

ಬೆಳಗಾವಿ: ಬೆಳಗಾವಿಯ ಅನಗೋಳದ ಕನಕದಾಸ ಕಾಲೋನಿಯಲ್ಲಿನ ರಾಯಣ್ಣ ಮೂರ್ತಿ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಭೇಟಿ ನೀಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಗೆ ನಮಸ್ಕರಿಸಿ, ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಸಚಿವ ಕುರಿಬ ಸಮುದಾಯದ ಮುಖಂಡರು ಸಚಿವ ಕೆ. ಎಸ್. ಈಶ್ವರಪ್ಪ ಜೊತೆಗಿದ್ದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವರು, ಬೆಳಗಾವಿ ಪ್ರಕರಣಗಳ ಕುರಿತು ಕಾಂಗ್ರೆಸ್ ನಲ್ಲೇ ಎರಡು ಧ್ವನಿ ಇದೆ. ಸದನದಲ್ಲಿ ಎಂಇಎಸ್ ಬ್ಯಾನ್ ಮಾಡಬೇಕು ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಆದರೆ, ಇದು ಯಾರೋ ಕಿಡಿಗೇಡಿಗಳ ಕೃತ್ಯ. ಎಂಇಎಸ್ ಇದರ ಹಿಂದೆ ಇಲ್ಲ ಎಂದು ಡಿ. ಕೆ. ಶಿವಕುಮಾರ ಹೇಳುತ್ತಾರೆ. ಡಿ. ಕೆ. ಶಿವಕುಮಾರ ಯಾರೋ ಒಬ್ಬ ಶಾಸಕರ ಸಂತೈಸಲು ಈ ರೀತಿ ಹೇಳಿಕೆ ನೀಡಬಾರದು ಎಂದು ಅವರು ಹೇಳಿದರು.

ಯಾವ ಶಾಸಕರ ಓಲೈಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲಕ್ಷ್ಮಿ ಹೆಬ್ಬಾಳಕರ್ ರತ್ತ ಬೊಟ್ಟು ಮಾಡಿದರು. ಲಕ್ಷ್ಮೀ ಹೆಬ್ಬಾಳ್ಕರ ಕ್ಷೇತ್ರದಲ್ಲಿ ಮೂಕ್ಕಾಲು ಭಾಗ ಎಂಇಎಸ್ ಬೆಂಬಲ ಪಡೆಯಲು ಡಿ. ಕೆ. ಶಿವಕುಮಾರ ಈ ಆಟ ಆಡಿರಬಹುದು. ಇದನ್ನು ನಾಡಿನ ಜನ ಒಪ್ಪುವುದಿಲ್ಲ. ಈ ದುಷ್ಕೃತ್ಯ ಮಾಡಿದವರು ಮಹಾರಾಷ್ಟ್ರ ಹೇಡಿಗಳ ಸಮಿತಿಯವರು. ಈ ದುಷ್ಕೃತ್ಯದಿಂದ ಇಡೀ ಕರ್ನಾಟಕ ಜನತೆಗೆ ನೋವಾಗಿದೆ. ಹಗಲು ಹೊತ್ತು ಬಂದು ಈ ರೀತಿ ಮಾಡಿದ್ದರೆ ಕನ್ನಡಿಗರು ಅವರನ್ನು ಚಿಂದಿ ಚಿಂದಿ ಮಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕೃತ್ಯಗಳ ಹಿಂದೆ ಯಾರಿದ್ದಾರೆ? ಯಾವುದಾದರೂ ಸಂಘ, ಸಂಸ್ಥೆಗಳು, ರಾಜಕೀಯ ನಾಯಕರು ಇದ್ದಾರಾ? ಈ ಎಲ್ಲ ಅಂಶಗಳು ತನಿಖೆ ವೇಳೆ ಹೊರ ಬರುತ್ತವೆ. ಎಂಇಎಸ್ ದುಷ್ಕೃತ್ಯದ ವಿರುದ್ದ ಖಂಡನಾ ನಿರ್ಣಯವನ್ನು ಕೇಂದ್ರಕ್ಕೆ ಕಳಿಸಿದ್ದೇವೆ. ಎಂಇಎಸ್ ಬ್ಯಾನ್ ಮಾಡಬೇಕೆಂದು ಪ್ರಧಾನಿ ಮೋದಿ ಗಮನಕ್ಕೂ ತರುತ್ತೇವೆ ಎಂದು ಕೆ. ಎಸ್.‌ ಈಶ್ವರಪ್ಪ ಹೇಳಿದರು.

ಇಂಥ ದುಷ್ಕ್ರತ್ಯ ಮಾಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ನಿನ್ನೆ ವಿಧಾನ ಸಭೆಯಲ್ಲೂ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ಉತ್ತರ ಪ್ರದೇಶದಲ್ಲಿ ದೇಶದ್ರೋಹಿಗಳನ್ನು, ಗುಂಡಾ ಚಟುವಟಿಕೆ ಮಾಡುವವರನ್ನು ಯೋಗಿ ಆದಿತ್ಯನಾತ ಸರಕಾರ ಅಲ್ಲೇ ಶೂಟ್ ಆ್ಯಟ್ ಸೈಟ್ ಮಾಡಿದೆ. ಹೀಗಾಗಿ ಉತ್ತರಪ್ರದೇಶದ ಶಾಂತವಾಗಿದೆ ಎಂದು ಸಚಿವರು ಹೇಳಿದರು‌.

ಸಿಎಂ ಭಾವನಾತ್ಮಕ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ಕ್ಷೇತ್ರದ ಜನರಿಗೆ ಹೇಳಿದ ಮಾತು. ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿನ ಸೋಲು, ರಮೇಶ ಜಾರಕಿಹೊಳಿ ವಿರುದ್ದ ಕ್ರಮ ವಿಚಾರದ ಬಗ್ಗೆ ಮಾತನಾಡಿದ ಸಚಿವ ಕೆ. ಎಸ್. ಈಶ್ವರಪ್ಪ, ಚುನಾವಣೆಯಲ್ಲಿ ನಾನು ಸೋತಿದ್ದೇನೆ ಮತ್ತು ಗೆದ್ದಿದ್ದೇನೆ. ಗೆದ್ದಾಗ ಸಹಕಾರ ಕೊಟ್ಟಿದ್ದಾರೆ. ಸೋತಾಗ ಸಹಕಾರ ಕೊಟ್ಟಿಲ್ಲ ಎಂದು ಹೇಳುವುದು ಒಳ್ಳೆಯದಲ್ಲ ಎಂದು ಹೇಳಿದರು.

ಜನೇವರಿಯಲ್ಲಿ ರಾಜ್ಯ ರಾಜಕೀಯದಲ್ಲಿ ಎಲ್ಲ ಬದಲಾವಣೆ ಆಗಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಹೇಳಿಕೆಯ ಕುರಿತು ಯತ್ನಾಳ ಅವರನ್ನೇ ಕೇಳಿ ಎಂದು ಹೇಳಿದರು.

ಇದಾದ ಬಳಿಕ ಸಚಿವ ಕೆ. ಎಸ್. ಈಶ್ವರಪ್ಪ ಸದನದ ಕಲಾಪಕ್ಕೆ ತೆರಳಿದರು.

Leave a Reply

ಹೊಸ ಪೋಸ್ಟ್‌