ಗ್ರಾ. ಪಂ. ಗಳು ಎನ್ ಟಿ ಪಿ ಸಿ ಅನುದಾನವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಪಡಿಸಿ- ಶಾಸಕ ಶಿವಾನಂದ ಪಾಟೀಲ

ವಿಜಯಪುರ: ಕೂಡಗಿ ಎನ್ ಟಿ ಪಿ ಸಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳು ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯಿತಿಗಳಾಗಿ ಅಭಿವೃದ್ಧಿ ಹೊಂದಬೇಕು ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದ್ದಾರೆ‌.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಎನ್ ಟಿ ಪಿ ಸಿಯಿಂದ ಸುಮಾರು ರೂ. 18.17 ಕೋ. ತೆರಿಗೆ ಹಣವನ್ನು ಎನ್ ಟಿ ಪಿ ಸಿ ವ್ಯಾಪ್ತಿಯಲ್ಲಿ ಬರುವ ಮುತ್ತಗಿ, ಕೂಡಗಿ, ಗೊಳಸಂಗಿ, ಮಸೂತಿ ಹಾಗೂ ತೆಲಗಿ ಗ್ರಾಮ ಪಂಚಾಯಿತಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.

ಈ ತೆರಿಗೆ ಹಣದಿಂದ ಸ್ಥಳೀಯ ಸಂಸ್ಥೆಗಳಿಗೆ ಆದಾಯದ ಮೂಲ ಬಂದಂತಾಗಿದ್ದು, ಗ್ರಾಮ ಪಂಚಾಯಿತಿಗಳಿಗೆ ಚೆಕ್‌ಗಳನ್ನು ವಿತರಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಗ್ರಾ. ಪಂ. ಗಳು ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕು. ರಾಜ್ಯದ ದೇವನಹಳ್ಳಿ ಪಂಚಾಯಿತಿ ಬಿಟ್ಟರೆ ನಂತರ ಹೆಚ್ಚಿನ ಅನುದಾನ ಪಡೆಯುತ್ತಿರುವ ಕೂಡಗಿ ಪಂಚಾಯಿತಿ ರಾಜ್ಯಕ್ಕೆ ಮಾದರಿ ಗ್ರಾಮ ಪಂಚಾಯಿತಿಯಾಗಿ ರೂಪಗೊಳ್ಳಲು ಪಿಡಿಓ ಹಾಗೂ ನೂತನ ಚುನಾಯಿತ ಪ್ರತಿನಿಧಿಗಳು ಶ್ರಮ ವಹಿಸಬೇಕು ಎಂದು ಶಾಸಕರು ಹೇಳಿದರು.

ಗ್ರಾ. ಪಂ. ವ್ಯಾಪ್ತಿಯಲ್ಲಿ ಆದಾಯ ಬರುವ ಬಡಾವಣೆಗಳ ನಿರ್ಮಾಣ, ಕಲ್ಯಾಣ ಮಂಟಪ, ಕಾಂಪ್ಲೆಕ್ಸ್ ಹಾಗೂ ಸಣ್ಣ ಸಣ್ಣ ಉದ್ದಿಮೆಗಳಿಗೆ ಅವಕಾಶ ನೀಡಿ ಆದಾಯ ಹೆಚ್ಚಿಸಿಕೊಳ್ಳಬೇಕು. ಎನ್ ಟಿ ಪಿ ಸಿ ಯಿಂದ ಬಂದ ಹಣದಲ್ಲಿ ಗ್ರಾ. ಪಂ. ಗಳು ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ನೂತನ ತಂತ್ರಜ್ಞಾನದಿಂದ ಗ್ರಾ. ಪಂ. ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅಲ್ಲದೆ ಕುಡಿಯುವ ನೀರು, ರಸ್ತೆಗಳನ್ನು ನಿರ್ಮಿಸುವುದರಿಂದ ಮಾದರಿ ಗ್ರಾ. ಪಂ. ಗಳಾಗಿ ಅಭಿವೃದ್ಧಿ ಹೊಂದಬೇಕು. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೀಳ್ಯದೆಲೆ ಬೆಳೆಯುತ್ತಿದ್ದು, ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಇದಕ್ಕೆ ಸೂಕ್ತ ಮಾರುಕಟ್ಟೆ ನಿರ್ಮಿಸಿ ಆದಾಯದ ಮೂಲ ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.

ಈ ಬಗ್ಗೆ ಕಾರ್ಯಕ್ರಮಗಳನ್ನು ಆದಷ್ಟು ಬೇಗ ರೂಪು ರೇಷೆಗಳನ್ನು ತಯಾರಿಸಿ ಅನುಮತಿ ಪಡೆದುಕೊಳ್ಳಬೇಕು. ಎನ್ ಟಿ ಪಿ ಸಿ ಯು ಪ್ರತಿವರ್ಷ ಕೂಡ ಅನುದಾನ ನೀಡುತ್ತದೆ. ಮಾಜಿ ಸಚಿವ ದಿ. ನಜೀರಸಾಬ ಅವರ ಪರಿಕಲ್ಪನೆಯ ಗ್ರಾಮಗಳನ್ನಾಗಿ ನಿರ್ಮಿಸಬೇಕು. ಇಡೀ ರಾಜ್ಯದ ಜನತೆ ಈ ಪಂಚಾಯಿತಿಗಳತ್ತ ತಿರುಗಿ ನೋಡುವಂತೆ ಆಗಬೇಕು ಎಂದು ಹೇಳಿದ ಶಿವಾನಂದ ಪಾಟೀಲ ಅನುದಾನ ನೀಡಿದ ಎನ್ ಟಿ ಪಿ ಸಿ ಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಸುನಿಲ‌ ಕುಮಾರ ಮಾತನಾಡಿ, ಪ್ರತಿಯೊಂದು ಗ್ರಾ. ಪಂ. ಗಳು ಹೆಚ್ಚಿಗೆ ತೆರಿಗೆ ಸಂಗ್ರಹ ಮಾಡಿದರೆ ಗ್ರಾ. ಪಂ. ಗಳನ್ನು ಹೆಚ್ಚು ಅಭಿವೃದ್ಧಿ ಪಡಿಸಬಹುದಾಗಿದೆ. ಶಾಸಕರು, ನಾವುಗಳು ಕೂಡಿಕೊಂಡು ಎನ್ ಟಿ ಪಿ ಸಿ ಯಿಂದ ಹೆಚ್ಚಿನ ಅನುದಾನ ಕೊಡಿಸಲು ಶ್ರಮಿಸಿದ್ದೇವೆ. ಪಿಡಿಓ, ನೂತನ ಚುನಾಯಿತ ಪ್ರತಿನಿಧಿಗಳು ಸೇರಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಈ ಕುರಿತು ಸಮಿತಿಯಲ್ಲಿ ಚರ್ಚಿಸಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ರಸ್ತೆ, ಒಳಚರಂಡಿ ಹಾಗೂ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ತಮಗೆ ಲಭಿಸಿದ ಅನುದಾನದಡಿ ಶೇ. 30 ರಷ್ಟು ಕುಡಿಯುವ ನೀರಿಗಾಗಿ, ಶೇ. 30 ರಷ್ಟು ಸ್ವಚ್ಛತೆ ಹಾಗೂ ಇನ್ನುಳಿದ ಶೇ. 40 ರಷ್ಟು ಹಣವನ್ನು ಇತರೆ ಕಾಮಗಾರಿಗಳಿಗಾಗಿ ಬಳಸಬೇಕು. ಮುಂಬರುವ ಎರಡು ಅಥವಾ ಮೂರು ತಿಂಗಳೊಳಗಾಗಿ ಈ ವ್ಯಾಪ್ತಿಯ ಗ್ರಾ. ಪಂ. ಗಳು ಅಭಿವೃದ್ಧಿಯ ಕುರಿತು ಮಾಹಿತಿ ಒದಗಿಸಬೇಕು ಎಂದು ಪಿ. ಸುನೀಲ ಕುಮಾರ ತಿಳಿಸಿದರು.

ಎನ್ ಟಿ ಪಿ ಸಿ ಚೀಫ್ ಜನರಲ್ ಕೆ. ಜಿ. ರೆಡ್ಡಿ ಅವರು ಮಾತನಾಡಿ, ಎನ್ ಟಿ ಪಿ ಸಿ ವತಿಯಿಂದ ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ಈ ಭಾಗದ ಗ್ರಾ. ಪಂ. ಗಳಿಗೆ ಚೆಕ್ ಮೂಲಕ ಅನುದಾನ ನೀಡಲಾಗುತ್ತಿದ್ದು, ತಂತಮ್ಮ ಪಂಚಾಯಿತಿಗಳ ಅಭಿವೃದ್ಧಿಗೆ ಅನುದಾನ ಬಳಸಿಕೊಳ್ಳಬೇಕು. ಈ ಕುರಿತು ಕ್ರಿಯಾ ಯೋಜನೆ ರೂಪಿಸಿ ಕುಡಿಯುವ ನೀರು, ಸ್ವಚ್ಛತೆ, ರಸ್ತೆ ಕಾಮಗಾರಿಗಳಿಗೆ ಅನುದಾನ ಬಳಸಿಕೊಳ್ಳಬೇಕು. ಇರುವವರೆಗೂ ನಾವು ಪ್ರತಿ ವರ್ಷ ಅನುದಾನ ನೀಡುತ್ತೇವೆ. ಈ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿ. ಪಂ‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, 2022-23 ರಿಂದ ಪ್ರತಿವರ್ಷ ಕೂಡಗಿ ಗ್ರಾ. ಪಂ. ಗೆ ರೂ. 200.01.ಲಕ್ಷ ರೂ, ಮಸೂತಿ ಗ್ರಾ. ಪಂ. ಗೆ ರೂ. 99.47 ಲಕ್ಷ, ತೆಲಗಿ ಗ್ರಾ. ಪಂ.ಗೆ ರೂ. 78.33 ಲಕ್ಷ, ಗೊಳಸಂಗಿ ಗ್ರಾ. ಪಂ. ಗೆ ರೂ. 62.15 ಲಕ್ಷ ಹಾಗೂ ಮುತ್ತಗಿ ಗ್ರಾ. ಪಂ. ರೂ. 1.97 ಲಕ್ಷ ಸೇರಿದಂತೆ ಒಟ್ಟು ,,ರೂ. 441.93 ಲಕ್ಷ ತೆರಿಗೆ ಹಣ ಬರಲಿದೆ ಎಂದು ಹೇಳಿದರು.

2018 ರಿಂದ 2022 ರವರೆಗೆ ಮುತ್ತಗಿ ವ್ಯಾಪ್ತಿಯಲ್ಲಿ ರೂ. 9.30 ಕೋ., ಕೂಡಗಿ ವ್ಯಾಪ್ತಿಯಲ್ಲಿ ರೂ. 8.48 ಕೋ. ಗೊಳಸಂಗಿ ವ್ಯಾಪ್ತಿಯಲ್ಲಿ ರೂ. 2.49 ಕೋ., ಮಸೂತಿ ವ್ಯಾಪ್ತಿಯಲ್ಲಿ ರೂ. 3.91 ಕೋ. ಹಾಗೂ ತೆಲಗಿ ವ್ಯಾಪ್ತಿಯಲ್ಲಿ ರೂ. 3.18 ಕೋ. ಸೇರಿದಂತೆ ಒಟ್ಟು ರೂ.18.17 ಕೋ. ಲಕ್ಷ ತೆರಿಗೆ ಹಣದ ಚೆಕ್ ನ್ನು ವಿತರಿಸಲಾಯಿತು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಎನ್ ಟಿ ಪಿ ಸಿ ಉಪ ವ್ಯವಸ್ಥಾಪಕ ಸುರೇಂದ್ರನ್, ಪಬ್ಲಿಕ್ ರಿಲೇಶನ್ ಆಫೀಸರ್ ಗುಲಶನ್, ಕೋಲಾರ ತಾ. ಪಂ. ಅಭಿವೃದ್ಧಿ ಅಧಿಕಾರಿಗಳು, ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌