ಕ್ರೀಡಾಪಟುಗಳಿಗೆ ವೈಜ್ಞಾನಿಕ ತರಬೇತಿ ಅಗತ್ಯವಿದೆ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕ್ರೀಡಾಪಟುಳುಗಳಿಗೆ ವೈಜ್ಞಾನಿಕ ಮಾರ್ಗದರ್ಶನ ನೀಡುವ ಕೆಲಸವನ್ನು ತರಬೇತಿ ಪಡೆದಿರುವ ಕೋಚ್ ಗಳು ಮಾಡಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಟನ್ ವಿನಿಮಯ ಕಾರ್ಯಕ್ರಮದಲ್ಲಿ ಆನಲೈನ್ ಮೂಲಕ ಪಾಲ್ಗೊಂಡು ಅವರು ಮಾತನಾಡಿದರು.

ಅತ್ಯುತ್ತಮ ಕೋಚ್ ಗಳ  ಮೂಲಕ ಕ್ರೀಡಾ ಪಟುಗಳಿಗೆ ತರಬೇತಿ ನೀಡುವುದು ಅತ್ಯಗತ್ಯವಾಗಿದೆ.  ಅವರಿಗೆ ಪಠ್ಯಕ್ರಮ ರೂಪಿಸಿ ಅದರಂತೆ ಸೂಕ್ತ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂದು ಸಿಎಂ ಅಭಿಪ್ರಾಯಪಟ್ಟ ಅವರು, ಅಮೃತ ಕ್ರೀಡಾ ಯೋಜನೆಯ ಗುರಿ ಈಡೇರಿಸಲು ಸರಕಾರ ಅಗತ್ಯ ನೆರವು ನೀಡಲು ಬದ್ಧವಾಗಿದೆ ಎಂದು ಹೇಳಿದರು.

72 ದೇಶಗಳ ಒಕ್ಕೂಟ ರಚನೆಯಾಗಿ ಹಲವಾರು ವಿಚಾರಗಳ ವಿನಿಮಯಕ್ಕೆ ಕಾಮನ್ವೆಲ್ತ್ ಒಕ್ಕೂಟ ವೇದಿಕೆಯಾಗಿದೆ.  ಸಮಾನ ಚಿಂತನೆ ಇರುವ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳ್ಳಲು, ಅದರಲ್ಲೂ ಯುವಪೀಳಿಗೆಯಲ್ಲಿ ಬಾಂಧವ್ಯ ಮುಂದುವರೆಯಬೇಕೆಂಬ ಉದ್ದೇಶದಿಂದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.  ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟದಲ್ಲಿ  ಸುಮಾರು ಆರು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ.  ಕ್ರೀಡಾಕೂಟದ ಬ್ಯಾಟನ್ ಇಂದು 9000 ಕಿ.ಮೀ ಪಯಣಿಸಿ ಭಾರತಕ್ಕೆ ಆಗಮಿಸಿದೆ.  ಭಾರತದ ನಾಲ್ಕು ಮಹಾನಗರಗಳಿಗೆ ಬ್ಯಾಟನ್ ಸ್ವೀಕಾರ ಮಾಡುವ ಅವಕಾಶ ದೊರೆತಿದ್ದು, ಈ ಪೈಕಿ ಬೆಂಗಳೂರು ಕೂಡ ಒಂದು ಎನ್ನುವುದು ಸಂತೋಷದ ಸಂಗತಿಯಾಗಿದೆ.  ನಮ್ಮ ಜವಾಬ್ದಾರಿಯನ್ನು ಮುಂದುವರೆಸುವ ಸಂಕೇತವಾಗಿರುವ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕ್ರೀಡಾ ಲೋಕಕ್ಕೆ ಹೊಸ ಚಿಂತನೆ ಹಾಗೂ ಆಯಾಮಗಳನ್ನು ನೀಡಿದ್ದಾರೆ. ಖೇಲೋ ಇಂಡಿಯಾ ಪ್ರಾರಂಭಿಸಿ ಹಳ್ಳಿ ಹಳ್ಳಿಗಳಲ್ಲಿ ವ್ಯವಸ್ಥಿತವಾಗಿ ಕ್ರೀಡಾಕೂಟಗಳು ನಡೆಯುತ್ತಿವೆ.  ಜೀತೋ ಇಂಡಿಯಾ ಕಾರ್ಯಕ್ರಮ ಕ್ರೀಡಾಳುಗಳಿಗೆ ಬಹು ದೊಡ್ಡ ಸ್ಫೂರ್ತಿ ನೀಡಿದೆ.  ಟೋಕಿಯೋ ಒಲಂಪಿಕ್ಸ್ ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆಲ್ಲಲು ಭಾರತಕ್ಕೆ ಸಾಧ್ಯವಾಯಿತು.  ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯವಾಗಿದ್ದು, ಭಾರತ ಸ್ವಾತಂತ್ರ್ಯ ಗಳಿಸಿದ ನಂತರದಲ್ಲಿ ಕ್ರೀಡೆಗಳಿಗೆ ಅತೀ ಹೆಚ್ಚು ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದಾರೆ.  ಕ್ರೀಡಾಪಟುಗಳು ಕ್ರೀಡಾ ಕೂಟಗಳಿಗೆ ತೆರೆಳುವ ಮುನ್ನ ಹಾಗೂ ಬಂದ ನಂತರ ಅವರೊಂದಿಗೆ ಸಮಯ ಕಳೆದು, ಪದಕ ಪಡೆಯದವರಿಗೂ ಸ್ಫೂರ್ತಿ ತುಂಬಿದ್ದಾರೆ.  ಅವರ ಈ ನಡೆ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಯುವಜನ ಸಬಲೀಕರಣಕ್ಕೆ ಮಹತ್ವವನ್ನು ನೀಡಿದೆ.  ನೂತನ ಯುವ ನೀತಿಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. ಕರ್ನಾಟಕ ಕ್ರೀಡೆಗೆ ವರದಾನವೆಂಬಂತೆ ಸ್ವತಃ ಕ್ರೀಡಾ ಪಟುವಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ ಅವರು ದೊರೆತಿದ್ದಾರೆ.  ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

 

Leave a Reply

ಹೊಸ ಪೋಸ್ಟ್‌