ವಿಧಾನ ಸೌಧದ ಮುಂಭಾಗಕ್ಕೆ ನೇತಾಜಿ ಪ್ರತಿಮೆ ಸ್ಥಳಾಂತರ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ನೇತಾಜಿ ಸುಭಾಷಚಂದ್ರ ಬೋಸ್ ಅವರ ಪ್ರತಿಮೆಯನ್ನು ವಿಧಾನ ಸೌಧದ ಮುಂಭಾಗದ ಸೂಕ್ತ ಜಾಗಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುಭಾಷಚಂದ್ರ ಬೋಸ್ ಅವರ ಜನ್ಮ ದಿನಾಚಾರಣೆಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಯೊಂದಿಗೆ ಅವರು ಮಾತನಾಡಿದರು.

ಸೂಕ್ತ ಸ್ಥಳದಲ್ಲಿ ನೇತಾಜಿ ಅವರ ಪ್ರತಿಮೆ ಇರುವುದು ಅವರಿಗೆ ನಾವು ಸಲ್ಲಿಸಬೇಕಾದ ಗೌರವವಾಗಿದೆ. ಈ ಬಗ್ಗೆ ಕೂಡಲೇ ತೀರ್ಮಾನವನ್ನು ಕೈಗೊಳ್ಳಲಾಗುವುದು.‌‌ನೇತಾಜಿ ಅವರ ಮುಂದಿನ ಜನ್ಮ ದಿನಾಚರಣೆಯನ್ನು ವಿಧಾನ ಸೌಧದ ಮುಂಭಾಗದಲ್ಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸುಭಾಷಚಂದ್ರ ಬೋಸ್ ಅವರ ಬಗ್ಗೆ ಪ್ರೀತಿ, ವಿಶ್ವಾಸದಿಂದ ಕಟ್ಟಿರುವ ಹಲವಾರು ಸಂಘ ಸಂಸ್ಥೆಗಳ ಉದ್ದೇಶ ಹಾಗೂ ಬೇಡಿಕೆಗಳ ಬಗ್ಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಅವರು ತಿಳಿಸಿದರು.

ಅಪ್ರತಿಮ ನಾಯಕ

ಭಾರತದ ಧೀರ ಶೂರ ಸುಪುತ್ರ ಸುಭಾಷಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಸೈನ್ಯವನ್ನು ಕಟ್ಟಿ ಹೋರಾಟ ಮಾಡಿದ ಅಪ್ರತಿಮ ನಾಯಕ. ಇಡೀ ವಿಶ್ವದ ಶಕ್ತಿಗಳನ್ನು ಒಗ್ಗೂಡಿಸಿ, ದೈತ್ಯ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಂಘಟಿಸಿ, ಭಾರತ ದೇಶದಲ್ಲಿ ಕಾರ್ಯಾಚರಣೆ ಮಾಡುವ ಮೂಲಕ ಅಂದಿನ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಶಕ್ತಿಯನ್ನು ತುಂಬಿದ್ದಾರೆ. ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರ ಹಿರಿಯದಯ ಎಂದು ಸಿಎಂ ಹೇಳಿದರು.

ವಿಶ್ವಮಾನ್ಯರು

ನನಗೆ ಸ್ವಲ್ಪ ರಕ್ತವನ್ನು ನೀಡಿ, ನಿಮಗೆ ಸ್ವಾತಂತ್ರ್ಯ ಕೊಡುವೆ‌ ಎಂದು ಕರೆ ನೀಡಿ ದೇಶದ ಯುವಕರಿಗೆ ನೇತಾಜಿ ಸುಭಾಷಚಂದ್ರ ಬೋಸ್ ಪ್ರೇರಣೆ ನೀಡಿದ್ದರು. ಆಜಾದ್ ಹಿಂದ್ ಫೌಜ್ ನಲ್ಲಿ ಸುಮಾರು 60 ಸಾವಿರ ಯುವಕರನ್ನು ಸೇರ್ಪಡೆ ಮಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಭದ್ರ ಬುನಾದಿ ಹಾಕಿದ್ದರು. ಅವರ ಸಾವು ಇಂದಿಗೂ ನಿಗೂಢವಾಗಿದೆ. ಆದರೆ, ಅವರು ವಿಶ್ವಮಾನ್ಯರಾಗಿದ್ದಾರೆ. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಜೀವಂತವಾಗಿದ್ದಾರೆ ಎಂದು ಅವರು ಹೇಳಿದರು.

ಯುವಕರಿಗೆ ಧ್ಯೇಯ, ಆದರ್ಶಗಳ ಪರಿಚಯ

ನೇತಾಜಿ ಅವರ ಧ್ಯೇಯ, ಆದರ್ಶ, ದೇಶಭಕ್ತಿ ಹಾಗೂ ದೇಶಕ್ಕಾಗಿ ತ್ಯಾಗ ಮಾಡುವ ಮನೋಭಾವವನ್ನು ಇಂದಿನ ಯುವಕರಲ್ಲಿ ಬಿತ್ತಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಸರಕಾರ ಸುಭಾಷಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯನ್ನು ವರ್ಷಪೂರ್ತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಶಾಲಾ ಕಾಲೇಜುಗಳಲ್ಲಿ ನೇತಾಜಿ ಅವರ ಕುರಿತು ಚರ್ಚೆ, ವಸ್ತು ಪ್ರದರ್ಶನ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತ್ತೊಮ್ಮೆ ಸುಭಾಷಚಂದ್ರ ಬೋಸ್ ಅವರ ಧ್ಯೇಯ ಆದರ್ಶಗಳ ಪರಿಚಯವನ್ನು ಇಂದಿನ ಮಕ್ಕಳಿಗೆ ಮಾಡಿಕೊಡಲಾಗುವುದು. ಅಲ್ಲದೇ ನೇತಾಜಿ ಅವರ ಬಗ್ಗೆ ನಾನಾ ಲೇಖಕರು ಬರೆದ ಕೃತಿಗಳನ್ನು ಕನ್ನಡದಲ್ಲಿ ಮುದ್ರಣ ಮಾಡಿ ಎಲ್ಲಾ ಯುವಕರಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಫ್ಲೈಯಿಂಗ್ ಶಾಲೆಯನ್ನು ಪುನಾರಂಭ ಮಾಡಲಾಗುವುದು. ಇದರೊಂದಿಗೆ ಯುವಕರ ಸಬಲೀಕರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಮತ್ತು ಇತರರು ಈ ಸಂದರ್ಭದಲ್ಲಿ ಬೋಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಸಿಎಂ ಪ್ರತಿಜ್ನಾ ವಿಧಿ ಬೋಧಿಸಿದರು.

Leave a Reply

ಹೊಸ ಪೋಸ್ಟ್‌