ಉಕ್ರೇನಿನಿಂದ ಬರುವ ಕನ್ನಡಿಗರನ್ನು ಅವರವರ ಊರುಗಳಿಗೆ ಕಳುಹಿಸಲು ನೆರವು- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಂಬೈ ಅಥವಾ ದಿಲ್ಲಿಗೆ ರಾತ್ರಿ ಉಕ್ರೇನಿನಿಂದ ಆಗಮಿಸಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆ ತಂದು ಅವರವರ ಊರುಗಳಿಗೆ ಕಳುಹಿಸಲು ಸಹಾಯ ಸಹಕಾರವನ್ನು ಸರಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ದಿಲ್ಲಿಯಲ್ಲಿರುವ ಮುಖ್ಯ ಆಯುಕ್ತರಿಗೂ ಉಕ್ರೇನಿನಿಂದ ಬರುವವರಿಗೆ ಸಾರಿಗೆ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ. ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ನನಡೆಸಿರುವ ಯುದ್ಧದಲ್ಲಿ ಉಕ್ರೇನಿನಿಂದ ಕನ್ನಡಿಗ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ಬಗ್ಗೆ ಶುಕ್ರವಾರ ಕೇಂದ್ರ ವಿದೇಶಾಂಗ ಸಚಿವ ಜಯಶಂಕರ್ ಅವರೊಂದಿಗೆ ಮಾತನಾಡಿದ ನಂತರ ಅವರ ಪಟ್ಟಿಯನ್ನು ಸಹ ಕಳುಹಿಸಿ ಕೊಡಲಾಗಿದೆ. ಪಶ್ಚಿಮ ಭಾಗದಲ್ಲಿರುವವರನ್ನು ರಸ್ತೆ ಮೂಲಕ ಕಳುಹಿಸಲು ಎಂದು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆ ಪ್ರಕಾರ ರೋಮಾನಿಯಾ ಮತ್ತಿತರ ಕಡೆಯಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಅವರ ವಿವರಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ಹೆಚ್ಚಿನ ವಿದ್ಯಾರ್ಥಿಗಳು ಖಾರ್ಕಿವ್ ಎಂಬಲ್ಲಿದ್ದಾರೆ. ಅದು ಈಶಾನ್ಯ ಭಾಗದಲ್ಲಿದ್ದು,ಅವರಿಗೆ ಸುರಕ್ಷಿತ ಸ್ಥಳದಲ್ಲಿರಲು ಸೂಚನೆ ನೀಡಲಾಗಿದೆ. ಅನಾವಶ್ಯಕವಾಗಿ ರಸ್ತೆಗೆ ಬರದಂತೆ ತಿಳಿಸಲಾಗಿದೆ. ನಮ್ಮ ಪ್ರಧಾನ ಮಂತ್ರಿಗಳು ರಷ್ಯಾದ ಅಧ್ಯಕ್ಷರೊಂದಿಗೆ ಮಾತನಾಡಿದ್ದು, ಭಾರತೀಯರನ್ನು ಸ್ಥಳಾಂತರ ಮಾಡಲು ಇರುವ ವಿಮಾನಗಳಿಗೆ ಸುರಕ್ಷಿತ ಮಾರ್ಗವನ್ನು ಮಾಡಿಕೊಡುವಂತೆ ಕೋರಿದ್ದಾರೆ. ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ಯುದ್ಧದ ವಾತಾವರಣ ನಿಯಂತ್ರಣಕ್ಕೆ ಬಂದ ಮೇಲೆ ಆ ಪ್ರಕ್ರಿಯೆ ಕೂಡ ಪ್ರಾರಂಭವಾಗಲಿದೆ. ಕೆಲವೇ ದಿನಗಳಲ್ಲಿ ರಸ್ತೆ ಹಾಗೂ ವಿಮಾನಗಳ ಮೂಲಕ ಕರ್ನಾಟಕದ ನಮ್ಮ ವಿದ್ಯಾರ್ಥಿಗಳನ್ನು ಕರೆತರಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಿಎಂ

ನಾನೂ ಸಹ ಕೆಲವು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ. ವಿಚಾರಗಳನ್ನು ತಿಳಿಸಿ ಸಂಪರ್ಕಿಸುವ ಸಂಖ್ಯೆಗಳನ್ನು ಒದಗಿಸಲಾಗಿದೆ. ಮಾಹಿತಿಗಳನ್ನು ಪಡೆದು ಧೈರ್ಯ ಹೇಳಿದ್ದೇನೆ. ರಷ್ಯಾ ಅಧ್ಯಕ್ಷರೊಂದಿಗೆ ನಮ್ಮ ಪ್ರಧಾನಿಗಳು ಮಾತನಾಡಿರುವ ಫಲಶ್ರುತಿಯಿಂದ ಭಾರತೀಯರು ಮತ್ತು ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರಲಾಗುವುದು ಎಂದು ಅವರು ಹೇಳಿದರು.

ಯುದ್ಧ ನಡೆಯುತ್ತಿರುವುದರಿಂದ ಯಾವುದೇ ವ್ಯವಸ್ಥೆಗಳು ಇಲ್ಲ. ರಷ್ಯಾದವರು ಪ್ರವೇಶಿಸಿರುವ ನಗರ ಭಾಗಗಳಲ್ಲಿ ಬಹಳಷ್ಟು ಅವ್ಯವಸ್ಥೆ ಇದೆ. ಭಾರತೀಯರು ಸಹ ಅಲ್ಲಿ ಸಿಲುಕಿದ್ದಾರೆ. ಯಾವುದೇ ರೀತಿಯ ಅನಾಹುತ ಅಥವಾ ತೊಂದರೆ ಆಗಿಲ್ಲ. ಆದರೆ ಅವರಿಗೆ ಸರಿಯಾದ ಊಟ, ಇರಲು ವ್ಯವಸ್ಥೆ ಇಲ್ಲ. ಬಹಳಷ್ಟು ಜನ ಮೆಟ್ರೋದಲ್ಲಿರುವ ಬಂಕರ್ ಗಳಲ್ಲಿ ಆಶ್ರಯ ಪಡೆದಿದ್ದಾರೆ. ಬಹಳ ಜನ ಅಲ್ಲಿ ಸೇರಿರುವುದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜತಾಂತ್ರಿಕವಾಗಿ ಭಾರತದ ಪ್ರಧಾನ ಮಂತ್ರಿಗಳ ಮಾತುಕತೆ ಯಶಸ್ವಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ ಎಂದ ಮುಖ್ಯಮಂತ್ರಿಗಳು, ನಮ್ಮ ವಿದೇಶಾಂಗ ಸಚಿವರ ಸಹಕಾರದಿಂದ ಉಕ್ರೇನಿಗೆ ಹೊಂದಿಕೊಂಡಿರುವ ದೇಶಗಳೊಂದಿಗೆ ಮಾತನಾಡಿ, ರಷ್ಯಾ ಭಾಷೆ ತಿಳಿದಿರುವ ರಾಯಭಾರಿಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ರಷ್ಯಾದವರ ಮೇಲುಗೈ ಇರುವುದರಿಂದ ಅವರೊಂದಿಗೆ ಮಾತನಾಡಿ ಭಾರತೀಯರನ್ನು ಸುರಕ್ಷಿತವಾಗಿ ಹೊರ ತರಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಪಶ್ಚಿಮ ಭಾಗದಿಂದ ರಸ್ತೆ ಮೂಲಕ ವಿದ್ಯಾರ್ಥಿಗಳನ್ನು ಕರೆತರಲು ಅವಕಾಶವಿದೆ. ಈಗಾಗಲೇ ಆ ಕಾರ್ಯ ಪ್ರಾರಂಭವಾಗಿದೆ. ‌ಪೂರ್ವ ಭಾಗದಲ್ಲಿರುವರನ್ನು ಕರೆತರಲು ಗಮನ ಹರಿಸಲಾಗಿದೆ. ಕೆಲವು ವಿಮಾನ ನಿಲ್ದಾಣಗಳು ಯಾರ ನಿಯಂತ್ರಣದಲ್ಲಿಯೂ ಇಲ್ಲದ ಕಾರಣ ಸುರಕ್ಷಿತ ಮಾರ್ಗಗಳ ಮೂಲಕ ಕರೆತರಲಾಗುತ್ತಿದೆ. ಅವರ ಪೈಕಿ ಬರುವ ಕನ್ನಡಿಗರನ್ನು ಅವರವರ ಊರುಗಳಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಅಲ್ಲಿನ ಸಹಾಯವಾಣಿಯೊಂದಿಗೆ ಸರಕಾರ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಸರಕಾರದ ಸಹಾಯವಾಣಿಯೂ ಇದೆ. ಕರ್ನಾಟಕದ ಇನ್ನೂರಕ್ಕೂ ಹೆಚ್ವು ಜನ ಸಂಪರ್ಕ ಮಾಡಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದರು.

ಯುದ್ಧದ ನೀತಿಯಲ್ಲಿ ನಾಗರಿಕರಿಗೆ ತೊಂದರೆಯಾಗುವ ಉದ್ದೇಶವಿರುವುದಿಲ್ಲ. ಆಕಸ್ಮಿಕವಾಗಿ ಒಮ್ಮೊಮ್ಮೆ ಅನಾಹುತಗಳು ಸಂಭವಿಸಬಹುದು. ಉಕ್ರೇನಿನಲ್ಲಿರುವ ಭಾರತದ ರಾಯಭಾರ ಕಚೇರಿಯವರೂ ಸಹ ಸಂಪರ್ಕದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌