ಗ್ರಾ ಪಂ ಸದಸ್ಯರ ಗೌರವ ಧನ ಹೆಚ್ಚಿಸುವವರೆಗೆ ಶಾಸಕರ ವೇತನ ಹೆಚ್ಚಳ ಹಣ ತಿರಸ್ಕರಿಸುವೆ- ಎಂ ಎಲ್ ಸಿ ಸುನೀಲಗೌಡ ಪಾಟೀಲ

ವಿಜಯಪುರ: ಗ್ರಾಮ ಪಂಚಾಯಿತಿ(Gram Panchayati) ಸದಸ್ಯರ ಗೌರವ ಧನ(Honourarium) ಹೆಚ್ಚಿಸುವ ವರೆಗೆ ಶಾಸಕರ(MLA) ವೇತನ ಹೆಚ್ಚಳ ತಿರಸ್ಕರಿಸುವೆ ಎಂದು ವಿಜಯಪುರ- ಬಾಗಲಕೋಟೆ (Vijayapura-Bagalakote)ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ (Congress MLC) ಸುನಿಲಗೌಡ ಪಾಟೀಲ(Sunilgouda Patil) ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಎಂ ಎಲ್ ಸಿ ಸುನೀಲಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಿಸುವಂತೆ ಸದನದಲ್ಲಿ ನಾಲ್ಕು ಬಾರಿ ಒತ್ತಾಯ ಮಾಡಿದ್ದೇನೆ. ಆದರೆ, ಕಳೆದ ಅಧಿವೇಶನದಲ್ಲಿ ಸರಕಾರ ಈ ಕುರಿತು ನಿರಾಸಕ್ತಿ ತೋರಿಸಿದೆ. ತಾವು ಕೇಳಿದ ಪ್ರಶ್ನೆಗೆ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಹೆಚ್ಚುವರಿ ಹಣಕಾಸು ಕಾರ್ಯಭಾರ ಭರಿಸಲು ಸಾಧ್ಯವಿಲ್ಲ ಎಂದು ಗ್ರಾಮೀ,ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.

ಆದರೆ, ಇದೇ ವೇಳೆ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರು ವೇತನವನ್ನು ಹೆಚ್ಚಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಗೌರವ ಧನ ಹೆಚ್ಚಳ ಆರ್ಥಿಕವಾಗಿ ಹೊರೆಯಾಗಲಿದೆ ಎಂದಾದರೆ, ಸಿಎಂ, ಸಚಿವರು ಹಾಗೂ ಶಾಸಕರು ಹೆಚ್ಚಳ ಕೂಡ ಹೊರೆ ಆಗುವುದಿಲ್ಲವೇ? ಇದು ಸರಿಯಲ್ಲ ಎಂದು ಅವರು ಹೇಳಿದರು.

 

 

ಸರಕಾರದ ಈ ವರ್ತನೆ ಖಂಡಿಸಿ ತಾವು ಶಾಸಕರ ವೇತನ ಹೆಚ್ಚಳವನ್ನು ಒಪ್ಪುವುದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ಧನ ಹೆಚ್ಚಳವಾಗುವ ತನಕ‌ ಶಾಸಕರ ವೇತನ ಹೆಚ್ಚಳ ಹಣವನ್ನು ಸ್ವೀಕರಿಸುವುದಿಲ್ಲ. ಅಷ್ಟೇ ಅಲ್ಲ, ಈ ಕುರಿತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪತ್ರ ಬರೆದು ನನ್ನ ನಿಲುವನ್ನು ತಿಳಿಸಲಿದ್ದೇನೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.

ಕೇರಳ ಮಾದರಿ ಎಲ್ಲಿ?

ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ ಅವರು ಗ್ರಾಮ ಪಂಚಾಯತಿ ಸದಸ್ಯರಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಗೌರವ‌ಧನವನ್ನು ರೂ.10000ಕ್ಕೆ ಹೆಚ್ಚಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಈಗ ಚುನಾವಣೆ ಮುಗಿದ ಮೇಲೆ ಸರಕಾರ ಗ್ರಾಮ ಪಂಚಾಯಿತಿ ಸದಸ್ಯರು, ಉಪಾಧ್ಯಕ್ಷರು ಮತ್ತು ಅಧ್ಯಕ್ಷರ ಗೌರವ ಧನ‌ ಹೆಚ್ಚಳ ಸಾಧ್ಯವಿಲ್ಲ ಎನ್ನುತ್ತಿದೆ. ಈ ವಿಷಯವನ್ನು ನಳಿನ ಕುಮಾರ ಕಟೀಲ ಗಮನಹರಿಸಿ ತಾವೇ ನೀಡಿರುವ ಆಶ್ವಾಸನೆಯನ್ನು ಈಡೇರಿಸಬೇಕು. ಆಗ ಅವರಿಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಸದಸ್ಯರ ಸಮ್ಮುಖದಲ್ಲಿ ದೊಡ್ಡ ಕಾರ್ಯಕ್ರಮ ನಡೆಸಿ ಸನ್ಮಾನ ಮಾಡುವುದಾಗಿ ಸುನಿಲಗೌಡ ಪಾಟೀಲ ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ ಬೇಡಿಕೆಯನ್ನು ಈಡೇರಿಸದಿದ್ದರೆ ಸ್ಥಳಗಳಿಂದ ಆಯ್ಕೆಯಾದ ಎಲ್ಲಾ 25 ಜನ ವಿಧಾನ ಪರಿಷತ್ ಸದಸ್ಯರನ್ನು ಒಗ್ಗೂಡಿಸಿ ಬೇಡಿಕೆ ಈಡೇರಿಸಲು ಸರಕಾರದ ಮೇಲೆ ಒತ್ತಡ ತರುವುದಾಗಿ ಅವರು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಪ್ರತಿನಿಧಿಯಾಗಿರುವ ನಾನು ಅವರ ಹಿತ ಕಾಪಾಡಲು ಸದಾ ಬದ್ಧನಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗೌರವ ಧನ ಹೆಚ್ಚಳ, ಉಚಿತ ಬಸ್ ಪಾಸ್ ಸೌಲಭ್ಯ ಕುರಿತು ಸರಕಾರ ಕ್ರಮ ಕೈಗೊಳ್ಳುವ ವರೆಗೆ ವಿರಮಿಸುವುದಿಲ್ಲ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸುನಿಲಗೌಡ ಪಾಟೀಲ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ನವೀನ್ ಕುಮಾರ್ ಕಟೀಲ್ ಅವರು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಸುನೀಲಗೌಡ ಫಾಟೀಲ ಮಾಧ್ಯಮಗಳ ಎದುರು ಪ್ರದರ್ಶಿಸಿದರು. ಅಲ್ಲದೆ ಕಟೀಲ್ ಅವರು ತಮ್ಮ ಹೇಳಿಕೆಯ ಬದ್ಧರಾಗಿರಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌