ಗ್ರಾಮೀಣ ಕರ್ನಾಟಕಕ್ಕೆ ಅರ್ಥಚೈತನ್ಯ ನೀಡುವ ಬಜೆಟ್- ಗೋವಿಂದ ಕಾರಜೋಳ

ಬೆಂಗಳೂರು: ಗ್ರಾಮೀಣ ಕರ್ನಾಟಕಕ್ಕೆ ಅರ್ಥಚೈತನ್ಯ ತುಂಬುವ ಗಟ್ಟಿ ಧ್ವನಿ ಈ ಮುಂಗಡ ಪತ್ರ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಇಂದಿನ ಮುಂಗಡ ಪತ್ರ ರಾಜ್ಯದ ಪ್ರತಿಯೊಬ್ಬ ನಾಗರೀಕನ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಗ್ರಾಮೀಣ ಕರ್ನಾಟಕದ ಉದ್ಯಮಗಳಾದ ಹೈನೋದ್ಯಮ, ಮತ್ಸ್ಯೋದ್ಯಮ ಮುಂತಾದ ಉದ್ಯಮಗಳ ಆರ್ಥಿಕ ಸಬಲೀಕರಣಕ್ಕೆ ಈ ಬಜೆಟ್ ನಾಂದಿ ಹಾಡಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾದ ಈ ಮುಂಗಡ ಪತ್ರ ನಾಡಿನ ಅಭಿವೃದ್ಧಿಯ ಗತಿಯನ್ನು ಚಲನಶೀಲಗೊಳಿಸಿದೆ. ಸಾಮಾಜಿಕ ನ್ಯಾಯ ಮತ್ತು ಸಾಮಾನ್ಯ ಪ್ರಜೆಗಳನ್ನು ಗಮನದಲ್ಲಿಟ್ಟು ಮಂಡಿಸಿದೆ ಬಜೆಟ್ ಇದಾಗಿದೆ. ರಾಜ್ಯದ ಮಹತ್ವದ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಿರುವುದರಿಂದ ಈ ಯೋಜನೆ ಸಾಕಾರಗೊಳ್ಳಲು ದಾಪುಗಾಲು ಇಡಲಾಗಿದೆ. ಪಶ್ಚಿಮ ವಾಹಿನಿಗಳ ತಿರುವು ಯೋಜನೆ, ರಾಜ್ಯದಲ್ಲಿ ನೀರಿನ ಕೊರತೆ ನೀಗಿಸಿ, ಬರ ಸಂಭವನೀಯ ಪ್ರದೇಶಕ್ಕೆ ನೀರುಣಿಸುತ್ತದೆ. ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳಾದ ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಮುಂಗಡ ಪತ್ರದ ಬೆಂಬಲ ನೀಡುವ ಮೂಲಕ ನಮ್ಮ ಸರಕಾರ ಈ ಯೋಜನೆಗಳಿಗೆ ತನ್ನ ಬದ್ದತೆಯನ್ನು ಪ್ರತಿಬಿಂಬಿಸಿದೆ. ಕುಡಿಯುವ ನೀರು ಮತ್ತು ನೀರಾವರಿ ಅಂತರ್ಜಲ ವೃದ್ಧಿಗೆ ಸಮಾನ ಆದ್ಯತೆ ನೀಡಿರುವ ಸರಕಾರ, ಸರ್ವಾಂಗೀಣ ಕೃಷಿ ಚಟುವಟಿಕೆಗೆ ಇಂಬು ನೀಡಿದೆ ಎಂದು ಸಚಿವರು ವಿವರಿಸಿದ್ದಾರೆ.

ದಲಿತರು, ಹಿಂದುಳಿದ ವರ್ಗದವರು ಮತ್ತು ಇತರ ದುರ್ಬಲ ವರ್ಗದವರ ಸಮಗ್ರ ಅಭಿವೃದ್ಧಿಗೆ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಮತ್ತು ನೀರಾವರಿ ವಲಯಕ್ಕೆ ನೀಡಿರುವ ಆದ್ಯತೆ, ರಾಜ್ಯದ ಗ್ರಾಮೀಣ ರೈತರ ಮತ್ತು ನಾಗರೀಕರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲು ಸೂಕ್ತ ವಾತಾವರಣ ನಿರ್ಮಿಸುತ್ತದೆ. ಕೃಷ್ಣ, ಮಹದಾಯಿ, ಕಾವೇರಿ, ಮೇಕೆದಾಟು ಯೋಜನೆಗಳಿಗೆ ಆದ್ಯತೆ ನೀಡಿದೆ. ನೀರಾವರಿ ಯೋಜನೆಗಳಿಗೆ ರೂ.21000 ಕೋ. ಅನುದಾನ ಒದಗಿಸಲಾಗಿದ್ದು, ರಾಜ್ಯದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಪ್ರಮಾಣದ ಮುಂಗಡ ಪತ್ರ ಬೆಂಬಲ ದೊರಕಿರುವುದು ಇದೇ ಮೊದಲು ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರದ ತ್ವರಿತ ನೀರಾವರಿ ಉತ್ತೇಜನ ಯೋಜನೆ(AIBP) ಅಡಿ ದೊರಕುವ ನೆರವು ಹೊರತು ಪಡಿಸಿ ರಾಜ್ಯದ ನೀರಾವರಿ ಯೋಜನೆಗಳಿಗೆ ಈ ಅನುದಾನ ದೊರಕಿದೆ. ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಉತ್ತೇಜನ ನೀಡುವ ಮೂಲಕ ರೈತರ ಬಾಳನ್ನು ಹಸನುಗೊಳಿಸುವ ಸಂಕಲ್ಪವನ್ನು ಸಾಕಾರಗೊಳಿಸಲು ಸಹಾಯಕವಾಗುತ್ತದೆ ಎಂದು ಸಚಿವ ಗೋವಿಂದ ಕಾರಜೋಳ ವ್ಯಾಖ್ಯಾನಿಸಿದ್ದಾರೆ.

Leave a Reply

ಹೊಸ ಪೋಸ್ಟ್‌