ಬಜೆಟ್ ನಲ್ಲಿ ಸಚಿವ ಕಾರಜೋಳ ಬಣ್ಣ ಬಯಲು- ಎಂ. ಬಿ. ಪಾಟೀಲ ಬಜೆಟ್ ಪ್ರತಿಕ್ರಿಯೆ

ಬೆಂಗಳೂರು: ಈ ಬಾರಿ ಬಜೆಟ್‍ನಲ್ಲಿ ನೀರಾವರಿ ಇಲಾಖೆಗೆ ರೂ. 20 ಸಾವಿರ ಕೋ. ನೀಡಿದ್ದು, ಇದರಲ್ಲಿ ಸಣ್ಣ ನೀರಾವರಿ ಇಲಾಖೆಗೆ ಕನಿಷ್ಠ ರೂ. 3 ಸಾವಿರ ಕೋ. ಹೋಗುತ್ತದೆ. ಬಾಕಿ ಉಳಿಯುವ ರೂ. 17 ಸಾವಿರ ಕೋ. ಯಲ್ಲಿ ಈಗಾಗಲೇ ರೂ. 10-12 ಸಾವಿರ ಕೋ. ಮೊತ್ತದ ಕಾಮಗಾರಿಗಳ ಹಿಂದಿನ ಬಿಲ್ ಬಾಕಿ ಇದೆ. ಅವುಗಳನ್ನು ಪಾವತಿಸಿದಾಗ, ರೂ. 5 ಸಾವಿರ ಕೋ. ಮಾತ್ರ ಉಳಿಯುತ್ತದೆ. ಇದರಲ್ಲಿ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಹೇಗೆ ಕೈಗೆತ್ತಿಕೊಳ್ಳುತ್ತಾರೆ ಎಂದು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ರಾಜ್ಯ ಬಜೆಟ್ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, 2018ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ 1.50 ಲಕ್ಷ ಕೋಟಿ ಹಣವನ್ನು ನೀರಾವರಿ ಯೋಜನೆಗಳಿಗೆ ಒದಗಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ, ಆಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ರೂ. 40 ಸಾವಿರ ಕೋ. ಖರ್ಚು ಮಾಡಿದ್ದು, ಈ ವರ್ಷ ರೂ. 17 ಸಾವಿರ ಕೋ. ನೀಡಿದ್ದು, ಮುಂದಿನ ವರ್ಷದ ಬಜೆಟ್ ಲೆಕ್ಕಕ್ಕಿಲ್ಲದಂತಾಗಿದೆ ಎಂದು ಅವರು ಟೀಕಿಸಿದ್ದಾರೆ.

ಯುಕೆಪಿಗೆ ರೂ. 5 ಸಾವಿರ ಕೋ. ನೀಡಿದ್ದಾಗಿ ಹೇಳಿದ್ದು, ಇದರಲ್ಲಿ ರೂ. 3 ಸಾವಿರ ಕೋ. ಮೊತ್ತದ ಬಿಲ್ ಗಳು ಪೆಂಡಿಂಗ್ ಇವೆ. ಎಸ್‍ಸಿಪಿ ಟಿಎಸ್.ಪಿ ಯೋಜನೆಗೆ ಮತ್ತು ಆಡಳಿತಾತ್ಮಕ ಖರ್ಚುಗಳಿಗಾಗಿ ಹಣ ವೆಚ್ಚ ಮಾಡಿದರೆ, ಯುಕೆಪಿಗೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಗುವುದಿಲ್ಲ. ಪುನರ್ವಸತಿ ಮತ್ತು ಪುನರ್ನಿರ್ಮಾಣಕ್ಕೆ ಎಲ್ಲಿಂದ ದುಡ್ಡು ತರುತ್ತಾರೆ? ಎಂದು ಎಂ. ಬಿ. ಪಾಟೀಲ ಪ್ರಶ್ನಿಸಿದ್ದಾರೆ.

ಎತ್ತಿನಹೊಳೆ ಯೋಜನೆಗೆ ರೂ. 3 ಸಾವಿರ ಕೋ. ಮೀಸಲಿಟ್ಟಿದ್ದು, ಅಲ್ಲಿ ಕೂಡ ರೂ. 3 ಸಾವಿರ ಕೋ. ವೆಚ್ಚದ ಕಾಮಗಾರಿಗಳ ಬಿಲ್ ಪೆಂಡಿಂಗ್ ಇವೆ. ತುಂಗಭದ್ರಾ, ಮೇಕೆದಾಟು ಮತ್ತು ಮಹದಾಯಿ ಯೋಜನೆಗೆ ಹಣ ನೀಡಿದ್ದರೂ ನ್ಯಾಯಾಲಯದಲ್ಲಿ ವ್ಯಾಜ್ಯ ಇರುವುದರಿಂದ ಹಣ ಖರ್ಚು ಮಾಡಲು ಆಗುವುದಿಲ್ಲ. ಹೀಗಾಗಿ ಇದು ಫಾಲ್ಸ್ ಬಜೆಟ್ ಆಗಿದ್ದು, ಬಂಪರ್ ಬಜೆಟ್ ಕೊಡುತ್ತೇನೆ ಎಂದು ಗುರುವಾರ ಕೊಚ್ಚಿಕೊಂಡಿದ್ದ ಸಚಿವ ಗೋವಿಂದ ಕಾರಜೋಳ ಅವರ ಬಣ್ಣ ಈ ಬಜೆಟ್‍ನಿಂದ ಬಯಲಾಗಿದೆ ಎಂದು ಎಂ. ಬಿ. ಪಾಟೀಲ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಗೆ ಈ ಬಜೆಟ್‍ನಲ್ಲಿ ನೀಡಿರುವ ಕೊಡುಗೆ ಶೂನ್ಯ. ನಿರೀಕ್ಷಿತ ರೇವಣ ಸಿದ್ದೇಶ್ವವರ ಯೋಜನೆಗೆ ಜಿಲ್ಲೆಯವರೇ ಆದ ಗೋವಿಂದ ಕಾರಜೋಳ ಅವರು ಹಣ ನೀಡದೇ, ವಿಜಯಪುರ ಜಿಲ್ಲೆಯ ಜನತೆಗೆ ವಂಚನೆ ಮಾಡಿದ್ದಾರೆ. ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ನೀಡದಿರುವುದು ದುರ್ದೈವ ಸಂಗತಿ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಬಲಪಡಿಸಲು ಯಾವುದೇ ಘೋಷಣೆ ಮಾಡಿಲ್ಲ. ಜನನತೊರವಿಯಲ್ಲಿ ವೈನ್ ಪಾರ್ಕ್ ಘೋಷಿಸಿದ್ದರೂ ಪಿಪಿಪಿ ಮಾದರಿಯಲ್ಲಿ(ಖಾಸಗಿ ಸಹಭಾಗಿತ್ವದಲ್ಲಿ) ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಎಂ. ಬಿ. ಪಾಟೀಲ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌