ಯುದ್ಧ ಪೀಡಿತ ಉಕ್ರೇನಿನಿಂದ ಬಸವ ನಾಡಿಗೆ ಬಂದ ಮಗನನ್ನು ದೃಷ್ಠಿ ತೆಗೆದು ಸ್ವಾಗತಿಸಿದ ಪೋಷಕರು

ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ(War Hit Ukraine) ಇನ್ನೂ ಹಲವಾರು ಭಾರತೀಯರು ಸಿಲುಕಿರುವ(Stranded) ಆತಂಕದ ಮಧ್ಯೆಯೇ ಉಕ್ರೇನಿನಿಂದ ವೈದ್ಯಕೀಯ ವಿದ್ಯಾರ್ಥಿಯೋರ್ವ(Medical Student) ಸುರಕ್ಷಿತವಾಗಿ(Safe) ತಾಯ್ನಾಡು ಬಸವ ನಾಡು(Basava Nadu) ತಲುಪಿದ್ದಾನೆ(Returned).

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ವಿದ್ಯಾರ್ಥಿ ಸಿದ್ದು ಪೂಜಾರಿ ಉಕ್ರೇನ್ ನಿಂದ ವಾಪಸ್ಸಾಗಿ ಸುರಕ್ಷಿತವಾಗಿ ಮನೆ ಸೇರಿದ್ದಾನೆ.  ಉಕ್ರೇನ್ ನ ಪಶ್ಚಿಮ ಭಾಗದಲ್ಲಿದ್ದ ಸಿದ್ದು ಪೂಜಾರಿ ಗ್ರಾಮಕ್ಕೆ ಬರುತ್ತಿದ್ದಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಾರ ಹಾಕಿದ ಪೋಷಕರು ಮತ್ತು ಸಂಬಂಧಿಕರು ಸ್ವಾಗತಿಸಿದರು.

ಯುದ್ಧ ಪೀಡಿತ ಉಕ್ರೇನಿನಿಂದ ಸುರಕ್ಷಿತವಾಗಿ ಸ್ವಗ್ರಾಮ ನರಸಲಗಿಗೆ ಬಂದ ವೈದ್ಯ ವಿದ್ಯಾರ್ಥಿ ಸಿದ್ಧು ಪೂಜಾರಿ

ಮನೆಗೆ ಬರುತ್ತಿದ್ದಂತೆ ಸಿದ್ಧು ಪೂಜಾರಿ ಪೋಷಕರು ಮತ್ತು ಸಂಬಂಧಿಕರು ಆತನ ದೃಷ್ಠಿ ತೆಗೆದು ಮನೆಯೊಳಗೆ ಬರಮಾಡಿಕೊಂಡಿದ್ದಾರೆ.  ವಿದ್ಯಾರ್ಥಿ ಸಿದ್ಧು ಪೂಜಾರಿ ವಾಪಸ್ಸಾಗಿರುವುದು ನರಸಲಗಿ ಗ್ರಾಮದಲ್ಲಿ ಹಾಗೂ ವಿದ್ಯಾರ್ಥಿಯ ಮನೆಯಲ್ಲಿ ಸಂಭ್ರಮದ ವಾತಾವರಣ ಉಂಟು ಮಾಡಿದೆ.  ಸಿದ್ದು ಪೂಜಾರಿ ಸುರಕ್ಷಿತವಾಗಿ ಬಂದಿದ್ದಕ್ಕೆ ಆತನ ಪೋಷಕರು ಖುಷಿ ಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಉಕ್ರಿನಿನಲ್ಲಿ ಎದುರಿಸಿದ ಸಂಕಷ್ಟದ ದಿನಗಳನ್ನು ಬಿಟ್ಟಿಟ್ಟ ಸಿದ್ಧು ಪೂಜಾರಿ, ಕಳೆದ ಫೆಬ್ರುವರಿ 28 ರಂದು ಉಕ್ರೇನ್ ಬಿಟ್ಟು ರೊಮೇನಿಯಾ ದೇಶದ ಗಡಿ ತಲುಪಿದೆ.  ಮೂರು ದಿನಗಳ ಕಾಲ ರೊಮೇನಿಯಾದಲ್ಲಿ ಉಳಿದುಕೊಂಡಿದ್ದೆ.  ರೊಮೇನಿಯಾದಲ್ಲಿ ಭಾರತೀಯ ರಾಯಭಾರ ಕಚೇರಿ ಆಧಿಕಾರಿಗಳು ಸಹಾಯ ಮಾಡಿದರು.  ಅಲ್ಲದೇ ಊಟ ಮತ್ತು ವಸತಿಯ ವ್ಯವಸ್ಥೆ ಕಲ್ಪಿಸಿದರು.  ರೊಮೇನಿಯಾದಿಂದ ಹೊರಟು ಮಾರ್ಚ್ ರಂದು 4 ದೆಹಲಿ ತಲುಪಿದೆ.  ನಂತರ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದೇನೆ.  ನಿನ್ನೆ ಬೆಂಗಳೂರಿನಿಂದ ಹೊರಟು ಈಗ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮವನ್ನು ತಲುಪಿದ್ದೇನೆ.  ಸುರಕ್ಷತವಾಗಿ ತವರೂರು ಸೇರಿದ್ದಕ್ಕೆ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.

ರಷ್ಯಾ ದಾಳಿಗೆ ಬಲಿಯಾದ ಹಾವೇರಿಯ ನವೀನ್ ಸಾವಿಗೆ ವಿಷಾಧ ವ್ಯಕ್ತಪಡಿಸಿದ ಸಿದ್ದು ಪೂಜಾರಿ, ಉಕ್ರೇನ್ ನಲ್ಲಿ ಸಿಲುಕಿರುವ ಇನ್ನುಳಿದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಯ ವೈಖರಿಯನ್ನು ಸಿದ್ಧು ಪೂಜಾರಿ ಶ್ಲಾಘಿಸಿದ್ದಾರೆ.

ಇದೇ ವೇಳೆ ಸಿದ್ಧು ಪೂಜಾರಿ ಪೋಷಕರೂ ಕೂಡ ತಮ್ಮ ಮಗ ಸುರಕ್ಷಿತವಾಗಿ ತವರೂರಿಗೆ ಬಂದಿದ್ದರಿಂದ ಖುಷಿಯಾಗಿದ್ದಾರೆ. ತಮ್ಮ ಮಗ ಸುರಕ್ಷಿತವಾಗಿ ಬರಲು ಕ್ರಮ ಕೈಗೊಂಡ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಹಾಗೂ ನಮ್ಮ ಅಳಲಿಗೆ ಸ್ಪಂದಿಸಿದ ಮಾಧ್ಯಮದವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಈ ಮಧ್ಯೆ, ಸಿದ್ದು ಪೂಜಾರಿ ಮನೆಗೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಹಶಿಲ್ದಾರ ವಿಜಯಕುಮಾರ್ ಕಡಕೋಳ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

Leave a Reply

ಹೊಸ ಪೋಸ್ಟ್‌